Follow Us On

WhatsApp Group
Focus News
Trending

ನಿರೀಕ್ಷಣಾ ಜಾಮೀನು ಅರ್ಜಿ ಪುರಸ್ಕರಿಸಿದ ನ್ಯಾಯಾಲಯ :ಆರೋಪಿತ ಸದಸ್ಯರಿಗೆ ಕೊಂಚ ರಿಲಾಕ್ಸ್.?. ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಪುರಸಭೆ ಪ್ರಕರಣ.

ಅಂಕೋಲಾ : ಪುರಸಭೆಯ ವಿಶೇಷ ಸಭೆಯಲ್ಲಿ ಅನುಚಿತ ವರ್ತನೆ ತೋರಿದ್ದಾರೆ ಎನ್ನಲಾದ ಆರೋಪಿತ ಸದಸ್ಯರಾದ ಮಂಜುನಾಥ ನಾಯ್ಕ ಮತ್ತು ಕಾರ್ತಿಕ ನಾಯ್ಕ ಇವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪುರಸ್ಕರಿಸಿ ಬುಧವಾರ ಆದೇಶಿಸಿದೆ. ಈ ವೇಳೆ ಕೆಲ ಪ್ರಮುಖ ಷರತ್ತುಗಳನ್ನು ವಿಧಿಸಿದೆ ಎನ್ನಲಾಗಿದೆ.

ಇತ್ತೀಚೆಗೆ ನಡೆದ ಪುರಸಭೆಯ ವಿಶೇಷ ಸಭೆಯ ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿರುವ ಹಾಗೂ ವಿಶೇಷ ಸಭೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿರುವುದಾಗಿ , ಇನ್ನಿತರ ಕೆಲ ವಿಷಯಗಳನ್ನು ದೂರಿನಲ್ಲಿ ತಿಳಿಸುವ ಮೂಲಕ ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಸದಸ್ಯ ಮಂಜುನಾಥ ಎಸ್ ನಾಯ್ಕ ಮೇಲೆ ಗಂಭೀರ ಆರೋಪ ಮಾಡಿದ್ದಲ್ಲದೇ ಅದೇ ದೂರಿನಲ್ಲಿ ಪುರಸಭೆಯ ಇನ್ನೋರ್ವ ಸದಸ್ಯ ಕಾರ್ತಿಕ ಎಸ್ ನಾಯ್ಕ ವಿರುದ್ಧವೂ ಕೆಲ ಆಪಾದನೆಗಳನ್ನು ಮಾಡಿ ಈ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ನವೆಂಬರ್ 2 ರಂದು ನಡೆದ ವಿಶೇಷ ಸಭೆಯಲ್ಲಿ ಆರೋಪಿತರು ಪುರಸಭೆಯ ಅಧ್ಯಕ್ಷರು ಅಥವಾ ಮುಖ್ಯಾಧಿಕಾರಿಗಳ ಅನುಮತಿ ಇಲ್ಲದೇ ವಿಡಿಯೋ ಚಿತ್ರೀಕರಣ ನಡೆಸಿ ಸದ್ರಿ ಸಭೆಗೆ ಸಂಬಂಧಿಸದ ಕಡತ ನೀಡುವಂತೆ ಒತ್ತಾಯ ಮಾಡಿದ್ದು ಅದನ್ನು ಕಚೇರಿಯಲ್ಲಿ ಪಡೆಯುವಂತೆ ಸೂಚಿಸಿದಾಗ ಸಿಟ್ಟಾದ ಮಂಜುನಾಥ ನಾಯ್ಕ ಅವರು ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ನಾಯ್ಕ ಅವರೊಂದಿಗೆ ಜಗಳಕ್ಕಿಳಿದು ಅಸಭ್ಯವಾಗಿ ವರ್ತನೆ ಮಾಡಿದ್ದು ಜಯಾ ನಾಯ್ಕ ಅವರು ವಿಡಿಯೋ ಚಿತ್ರೀಕರಣ ಮಾಡದಂತೆ ವಿನಂತಿ ಮಾಡಿಕೊಂಡರೂ ಸಹ ಕೇಳದೆ ಸಭೆಗೆ ಅಡ್ಡಿ ಪಡಿಸಿದ್ದು, ಅಡ್ಡಿ ಆತಂಕಗಳ ನಡುವೆ ಸಭೆಯನ್ನು ಬಹುಮತದಿಂದ ಮುಗಿಸಲಾಗಿದ್ದರೂ ಸಭೆಯನ್ನು ಅರ್ಧದಲ್ಲೇ ಮುಗಿಸಿ ಹೊರಗಡೆ ಹೋಗುತ್ತಿದ್ದಾರೆ ಎಂದು ಹೇಳುತ್ತಾ ವಿಡಿಯೋ ಚಿತ್ರೀಕರಣ ನಡೆಸಿ ದಿಕ್ಕಾರ ಕೂಗಿದ್ದು, ಪದೇ ಪದೇ ಭೃಷ್ಠಾಚಾರದ ಸುಳ್ಳು ಅಪವಾದ ಮಾಡಿದ್ದಾರೆ ಎಂದು ಅಧ್ಯಕ್ಷೆ ಶಾಂತಲಾ ನಾಡಕರ್ಣಿ ದೂರಿನಲ್ಲಿ ತಿಳಿಸಿದ್ದರು.

ತಾವು ಸಭೆ ಮುಗಿಸಿ ತಮ್ಮ ಪತಿಯೊಂದಿಗೆ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮಂಜುನಾಥ ನಾಯ್ಕ ಅವರು ವಿಡಿಯೋ ಚಿತ್ರೀಕರಣ ನಡೆಸಿ ಹೊರಗೆ ಹೋಗಲು ಅಡ್ಡಿ ಪಡಿಸಿ, ತಮ್ಮ ಗಂಡನಿಗೆ ಮಹಿಳೆಯರನ್ನು ಮುಂದಿಟ್ಟು ದಂಧೆ ಮಾಡುತ್ತೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ,

ವಿಶೇಷ ಸಭೆಯ ಕಲಾಪಗಳ ವಿಡಿಯೋಗಳನ್ನು ವಾಟ್ಸಪ್ ಗ್ರೂಪ್ ಮತ್ತು ಸಾಮಾಜಿಕ ಜಾಲ ತಾಣಗಳ ಮೂಲಕ ಹರಿಬಿಟ್ಟು ಮಾನಹಾನಿ ಆಗುವಂತೆ ನಡೆದುಕೊಂಡಿದ್ದಾರೆ ಎಂಬಿತ್ಯಾದಿ ವಿಷಯಗಳನ್ನೊಳಗೊಂಡು, ಪುರಸಭೆ ಸದಸ್ಯ ಮಂಜುನಾಥ ನಾಯ್ಕ ಮತ್ತು ಕಾರ್ತಿಕ ನಾಯ್ಕ ಅವರ ಮೇಲೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ದೂರು ನೀಡಿದ್ದರು. ಪಿ.ಎಸ್. ಐ ಪ್ರವೀಣಕುಮಾರ್ ಅವರು ಐ.ಪಿ.ಸಿ ಕಲಂ ಸಂಖ್ಯೆ 341, 354, 354(ಎ), 504, 341, 509 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುವ ನಡುವೆಯೇ, ಆರೋಪಿತರು ನಿರೀಕ್ಷಣಾ ಜಾಮೀನಿಗಾಗಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಿಂದ ಆರೋಪಿತ ಸದಸ್ಯರು ಕೊಂಚ ನಿರಾಳರಾಗುವಂತೆ ಮಾಡಿದೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button