ವ್ಯಾಕ್ಸಿನ್ ಪಡೆಯದೆ ಇದ್ದವರಿಗೆ ಬ್ಯಾಂಕ್, ಸೊಸೈಟಿ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ನಿರ್ಬಂಧ : ಜಿಲ್ಲಾಧಿಕಾರಿಗಳು ಹೇಳಿದ್ದೇನು ನೋಡಿ?

ಕಾರವಾರ :ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ವ್ಯಾಕ್ಸಿನ್ ಪಡೆಯದೆ ಇದ್ದವರಿಗೆ ಬ್ಯಾಂಕ್, ಸೊಸೈಟಿ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ನಿರ್ಬಂಧ ಹೇರಲಾಗುವುದು ಎಂದು ಡಿಸಿ ಮುಲ್ಲೈ ಮುಹಿಲನ್ ತಿಳಿಸಿದರು. ಮಾಧ್ಯಮಗೋಷ್ಠಿ ನಡೆ ಸಿದ ಅವರು, ಜಿಲ್ಲೆಯಲ್ಲಿ ಲಸಿಕೆ ನೀಡುವಲ್ಲಿ ಈಗಾಗಲೇ ಶೇ. 98ರಷ್ಟು ಪ್ರಗತಿ ಸಾಧಿಸಲಾಗಿದೆ. ಆದರೆ, ಕೆಲವು ಕಡೆಗಳಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕಿರುವುದು ಗಮನಕ್ಕೆ ಬಂದಿದೆ ಎಂದರು.

ಒoದು ವಾರದೊಳಗೆ ವ್ಯಾಕ್ಸಿನ್ ಪಡೆಯದೆ ಇದ್ದರೆ, ಅವರಿಗೆ ಬ್ಯಾಂಕ್, ಸೊಸೈಟಿಗಳಿಗೆ ಪ್ರವೇಶ ನಿರ್ಬಂಧ ಹೇರಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜನರು ಕೊರೊನಾ ಮೊದಲೇ ಡೋಸ್ ಅಥವಾ ಎರಡನೇ ಡೋಸ್ ಯಾವುದಾದರೊಂದು ಪಡೆದಿರಬೇಕು. ಎರಡನೇ ಡೋಸ್ ಕೂಡ ನಿಗದಿತ ಸಮಯದಲ್ಲಿ ಪಡೆದಿರಬೇಕು. ಸಾರ್ವಜನಿಕರು ಸೇರುವ ಪ್ರದೇಶಗಳಲ್ಲಿ ಇವೆಲ್ಲ ಮಾಹಿತಿ ಪರಿಶೀಲಿಸಲಾಗುತ್ತದೆ ಎಂದರು. ಮೊದಲ ಡೋಸ್ ಮತ್ತು ಸಮಯದೊಳಗೆ ಎರಡನೇ ಡೋಸ್ ಪಡೆಯದವರನ್ನು ಪತ್ತೆ ಮಾಡಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಣೆ ನೀಡಿದರು.

ಜಿಲ್ಲೆಯಲ್ಲಿ ಈಗಾಗಲೇ 9.97 ಲಕ್ಷ (ಶೇ.93) ಜನರಿಗೆ ವ್ಯಾಕ್ಸಿನ್ ಮೊದಲ ಡೋಸ್ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ 6.66 ಲಕ್ಷ (ಶೇ.67) ಜನ ವ್ಯಾಕ್ಸಿನ್ ಎರಡನೇ ಡೋಸ್ ಪಡೆದು- ಕೊಂಡಿದ್ದಾರೆ. ಸುಮಾರು 45 ಸಾವಿರ ಜನ ವ್ಯಾಕ್ಸಿನ್ ಪಡೆದರೆ, ಮೊದಲ ಡೋಸ್ ಶೇ. 100 ರಷ್ಟು ಸಾಧನೆ ಆಗುತ್ತದೆ. ಆ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಸಾರ್ವಜನಿಕ ಸ್ಥಳಲ್ಲಿ ಜನರ ವ್ಯಾಕ್ಸಿನೇಶನ್ ಮಾಹಿತಿ ಪರಿಶೀಲಿಸಲಾಗುತ್ತಿದೆ ಎಂದರು.

ಭಟ್ಕಳ ತಾಲೂಕಿನಲ್ಲಿ 12,529 ಜನ ವ್ಯಾಕ್ಸಿನ್ ಮೊದಲ ಡೋಸ್ ಪಡೆದುಕೊಳ್ಳುವುದು ಬಾಕಿ ಇದೆ. ಉಳಿದ ತಾಲೂಕುಗಳಲ್ಲಿ 3-4 ಸಾವಿರ ಜನರಷ್ಟೇ ಮೊದಲ ಡೋಸ್ ಪಡೆಯಬೇಕಿದೆ. ಭಟ್ಕಳ ತಾಲೂಕಿನಲ್ಲಿ ಮಾತ್ರ ಹೆಚ್ಚಿನ ಜನ ವ್ಯಾಕ್ಸಿನ್ ಪಡೆಯದೇ ಇರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಮೇಲೆ ನಿಗಾ ರಾಜ್ಯದಲ್ಲಿ ಕೆಲವೆಡೆ ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಕಾಲೇಜು ಮತ್ತು ವಸತಿ ನಿಲಯಗಳ ವಿದ್ಯಾರ್ಥಿಗಳ ಮೇಲೆ ನಿಗಾ ಇಡಲಾಗುತ್ತಿದೆ.

ಹೊರ ರಾಜ್ಯ, ದೇಶದಿಂದ ಬರುವ ಪ್ರವಾಸಿಗರ ತಪಾಸಣೆ, ಪ್ರಯಾಣ ಮಾಹಿತಿ ಕೂಡ ಸಂಗ್ರಹಿಸಲಾಗುತ್ತದೆ. ಜಿಲ್ಲೆಯಲ್ಲಿ ಸದ್ಯ ಕೊರೊನಾ ಸೋಂಕು ಕಡಿಮೆ ಇರುವ ಕಾರಣಕ್ಕೆ ತಪಾಸಣೆ ಕಡಿಮೆ ಮಾಡಿಲ್ಲ. ಈಗ ಇನ್ನಷ್ಟು ಮುತುವರ್ಜಿ ವಹಿಸಿ ತಪಾಸಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ವಿಸ್ಮಯ ನ್ಯೂಸ್, ಕಾರವಾರ

Exit mobile version