ರಸ್ತೆ ಅಪಘಾತ : ಸಾವಿನ ಸರಣಿಗೆ ಸೇರಿಕೊಂಡ ಸಿಪಿಎಂ ಮುಖಂಡನ ಪುತ್ರ

ಅಂಕೋಲಾ: ಪಟ್ಟಣದ ಹುಲಿದೇವರವಾಡದ ಪೆಟ್ರೋಲ್ ಪಂಪ್ ಎದುರಿನ ರಾ ಹೆ 66 ರಲ್ಲಿ ಇತ್ತೀಚೆಗೆ ಸಂಭವಿಸಿದ್ದ ಕಾರು ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಚಾಲಕ ಮತ್ತು ಇನ್ನೋರ್ವ ಪ್ರಯಾಣಿಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಾಲಕ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದ.

ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೇರಳ ವರ್ಕಾಡಿ ಪಾವೂರು ನಿವಾಸಿ ಮಹಮ್ಮದ್ ಇಸಾಕ್ ಶಾನು (28) ಗುರುವಾರ ಮುಂಜಾನೆ ಮೃತ ಪಟ್ಟಿದ್ದು ಈತ ಕೇರಳದ ಸಿಪಿಎಂ ಮುಖಂಡ ಕುಂಞಮೋನು ಬೋಳಿಯಾರ್ ಅವರ ಪುತ್ರ ಎಂದು ತಿಳಿದು ಬಂದಿದೆ.

ಜನೆವರಿ 12 ರಂದು ಬುಧವಾರ ನಸುಕಿನ ಜಾವ ಅಂಕೋಲಾ ತಾಲೂಕಿನ ಹುಲಿದೇವರವಾಡ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳದಿಂದ ಗೋವಾಕ್ಕೆ ತೆರಳುತ್ತಿದ್ದ ಕಾರು,ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೇರಳ ಕಾಸರಗೋಡ ಜಿಲ್ಲೆಯ ಮಂಜೇಶ್ವರ ನಿವಾಸಿ ಅಬುಬಕರ್ ಅನ್ಸಾರ್ ಅಬ್ದುಲ್ ರೆಹಮಾನ್(32) ಸ್ಥಳದಲ್ಲಿಯೇ ಮೃತ ಪಟ್ಟಿದ್ದರು.ಗಾಯಗೊಂಡಿದ್ದ ಕಾರು ಚಾಲಕ ಮಹಮ್ಮದ್ ಶರೀಫ್(42) ಗೋವಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದರು.

ಇದೀಗ ಇನ್ನೊರ್ವ ಗಾಯಾಳು ಸಹ ಮೃತ ಪಟ್ಟಿರುವುದರಿಂದ ಈ ಭೀಕರ ಅಪಘಾತಕ್ಕೆ ಮೂವರೂ ದುರ್ಮರಣ ಹೊಂದಿದಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version