![](http://i0.wp.com/vismaya24x7.com/wp-content/uploads/2022/02/sirsi-2.jpg?fit=1200%2C720&ssl=1)
ಕಾರವಾರ: ಉತ್ತರಕನ್ನಡದಲ್ಲಿಯೂ ಹಿಜಾಬ್ ವಿವಾದ ಮತ್ತಷ್ಟು ಹೆಚ್ಚುವ ಮುನ್ಸೂಚನೆ ಕಾಣುತ್ತಿದೆ. ಇದನ್ನು ತಡೆಯಲು ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಟೊಂಕ ಕಟ್ಟಿ ನಿಂತಿದೆ. ಈ ನಿಟ್ಟಿನಲ್ಲಿ ಆಡಳಿತದವರು ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ.
ಇದಕ್ಕೆ ಮೊದಲ ಹೆಜ್ಜೆ ಎಂಬಂತೆ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಿರಸಿ ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಎಂ.ಆರ್.ಕುಲಕರ್ಣಿರವರು ಆದೇಶ ಹೊರಡಿಸಿದ್ದಾರೆ.
![](http://i0.wp.com/vismaya24x7.com/wp-content/uploads/2021/07/vismaya-4.png?resize=708%2C226&ssl=1)
ಮುಂದಿನ ಆದೇಶ ಜಾರಿಯಾಗುವವರೆಗೆ ಪದವಿ, ಪದವಿಪೂರ್ವ ಕಾಲೇಜುಗಳು ಮತ್ತು ಪ್ರೌಢಶಾಲೆಗಳ ಸುತ್ತಲಿನ 200 ಮೀ. ವ್ಯಾಪ್ತಿಯೊಳಗೆ ಯಾವುದೇ ಘೋಷಣೆ ಕೂಗಲು, ಗುಂಪುಗಾರಿಕೆ ನಡೆಸಲು ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಚಟುವಟಿಕೆ ನಡೆಸಬಾರದು ಎಂದು ಆದೇಶಿಸಲಾಗಿದೆ.
ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವುದು ಸೂಕ್ತ ಎನಿಸಿದೆ ಎಂದು ತಾಲೂಕಾಡಳಿತ ಅಭಿಪ್ರಾಯಪಟ್ಟಿದೆ .ಶಿರಸಿಯಲ್ಲಿ ನಿನ್ನೆ ದಿನ ಹಿಜಾಬ್ ಸಂಘರ್ಷ ತಾರಕ್ಕೆ ಏರಿತ್ತು . ಇದರ ಜೊತೆಗೆ ಕೆಲವು ಸಂಘಟನೆಗಳು ಈ ವಿಷಯವನ್ನು ದೊಡ್ಡದಾಗಿ ಮಾಡುವ ಪ್ರಯತ್ನಕ್ಕೆ ಕೈ ಹಾಕಿವೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
ವಿಸ್ಮಯ ನ್ಯೂಸ್ ಕಾರವಾರ