![](http://i0.wp.com/vismaya24x7.com/wp-content/uploads/2020/07/IMG-20200711-WA0023.jpg?fit=1152%2C532&ssl=1)
ಅಂಕೋಲಾದಲ್ಲಿ ನಡೆದ ವಿಸ್ಮಯಕಾರಿ ಘಟನೆ!
ಬದುಕಿ ಬಂದ ಬಡ ಜೀವ; ಬದುಕಿಸಿದವರಾರು ಗೊತ್ತೇ?
ಅಂಕೋಲಾ : ಓರ್ವ ವ್ಯಕ್ತಿ 15 ದಿನಗಳ ನಂತರ ಬದುಕಿ ಬಂದು ಅಚ್ಚರಿ ಮೂಡಿಸುವ ಮೂಲಕ ತನ್ನ ಕುಟುಂಬದವರಿಗೆ ಅಷ್ಟೇ ಅಲ್ಲದೇ ಊರು ಮತ್ತು ತಾಲೂಕಿನ ಜನತೆ ಈ ವಿಷಯವನ್ನು ನಂಬುವುದೋ, ಬಿಡುವುದೋ ಎಂಬಷ್ಟರ ಮಟ್ಟಿಗೆ ಕೌತುಕ ಮೂಡಿಸಿದ ಘಟನೆ ಶನಿವಾರ ನಡೆದಿದೆ.
ಅಗ್ರಗೋಣ-ಶೇಡಿಕಟ್ಟಾ ಮೂಲದ 45ವಯಸ್ಸಿನ ಪುರುಷನೋರ್ವನೇ ಸತ್ತು ಬದುಕಿದ ವ್ಯಕ್ತಿಯಾಗಿದ್ದು, ಆತನನ್ನು ಕಳೆದ ಜೂನ್ 26ರಂದು ತೀವ್ರತರದ ಸೋಂಕಿನ ಲಕ್ಷಣದ ಹಿನ್ನಲೆಯಲ್ಲಿ ಕಾರವಾರದ ಕೋವಿಡ್-19 ವಾರ್ಡಗೆ ದಾಖಲಿಸಲಾಗಿತ್ತು. ಸೋಂಕಿತ ವ್ಯಕ್ತಿಯು ತನ್ನ ರೋಗಲಕ್ಷಣಗಳನ್ನು ಮರೆಮಾಚಲೋ ಅಥವಾ ತಿಳುವಳಿಕೆ ಕೊರತೆಯಿಂದ 2-3 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಹೋಗಿ ಬಂದಿದ್ದ ಎನ್ನಲಾಗಿದ್ದು ಕೊನೆಯ ಹಂತದಲ್ಲಿ ರೋಗ¯ಕ್ಷಣಗಳು ಉಲ್ಬಣಗೊಂಡು, ಗಂಟಲುದ್ರವ ಪರೀಕ್ಷೆ ನಡೆಸಿದಾಗ ಈತನ ವರದಿ ಪಾಸಿಟಿವ್ ಬಂದಿತ್ತು.
ವರದಿ ಪಾಸಿಟಿವ್ ಬಂದ ವೇಳೆಗಾಗಲೇ ಈತನಿಂದ ಆತನ ಕುಟುಂಬಸ್ಥರಿಗೆ ಮತ್ತಿತ್ತರರಿಗೆ ಸೋಂಕು ಹರಡಿದಲ್ಲದೇ ಸುತ್ತ-ಮುತ್ತಲಿನ ಹಳ್ಳಿ ಹಾಗೂ ತಾಲೂಕುಗಳಲ್ಲಿ ಮತ್ತು ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯವರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ನಡುವೆ ಸೋಂಕಿತ ವ್ಯಕ್ತಿ ಸತ್ತೇ ಹೋಗಿದ್ದಾನೆ ಎಂದು ಸುಳ್ಳು ಸುದ್ದಿ ಹರಡಿತ್ತು. ಸ್ವತಃ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಅಂಕೋಲಾಕ್ಕೆ ಬಂದು ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿರವಾಗಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡುವ ಮೂಲಕ ಸುಳ್ಳು ವದಂತಿಗಳಿಗೆ ತೆರೆ ಎಳೆದಿದ್ದರು ಆದರೂ ಆತನ ಆರೋಗ್ಯ ಕಾಳಜಿ ಜಿಲ್ಲಾಡಳಿತ ಮತ್ತು ವೈದ್ಯರಿಗೆ ಸವಾಲಿನ ಕೆಲಸವಾಗಿತ್ತು.
ವೈದ್ಯೋ ನಾರಾಯಣೋ ಹರಿ :
ತೀವ್ರ ಉಸಿರಾಟದ ಸಮಸ್ಯೆ, ಉಲ್ಬಣಗೊಂಡ ರೋಗ ಲಕ್ಷಣವುಳ್ಳ ಈ ಸೋಂಕಿತನನ್ನು ಬದುಕಿಸಲು ಪಣತೊಟ್ಟ ಆರೋಗ್ಯ ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ಸೋಂಕಿತನನ್ನು ಪೂರ್ಣ ಪ್ರಮಾಣದಲ್ಲಿ ಗುಣಮುಖನನ್ನಾಗಿಸಿ, ಮತ್ತೆ ಗಂಟಲುದ್ರವ ವರದಿ ನೆಗೆಟಿವ್ ಬರುವ ವರೆಗೂ ಕಾದು ತಮ್ಮ ಸಾರ್ಥಕಸೇವೆ ಸಲ್ಲಿಸಿ ಒಂದರ್ಥದಲ್ಲಿ ಜೀವ ನೀಡಿದ ದೇವರ ನಂತರ ಮರು ಜೀವ ನೀಡಿ, ವೈದ್ಯೋ ನಾರಾಯಣೋ ಹರಿ ಎಂಬ ಉಕ್ತಿಗೆ ಸೂಕ್ತ ಉದಾಹರಣೆಯಾಗಿ ನಿಂತಿದ್ದಾರೆ. ಜಿಲ್ಲೆಯ ಮಣ್ಣಿನ ಮಗ ಡಾ. ಗಜಾನನ ನಾಯಕ, ಕ್ರಿಮ್ಸ್ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು ಜಿಲ್ಲೆಯ ಜನತೆಯ ಆರೋಗ್ಯ ಸೇವೆ ಎತ್ತರಿಸಲು ಮುಂದಾಗಿದ್ದು, ಆ ತಂಡಕ್ಕೆ ನೈಜ ಅಭಿನಂದನೆ ಮತ್ತು ಬೆಂಬಲ ಸೂಚಿಸಬೇಕಿದೆ.
ಸಮರ್ಥ ಸೇನಾಪತಿ ಡಾ. ಹರೀಶಕುಮಾರ : ಪ್ರವಾಸೋದ್ಯಮ ಸೇರಿದಂತೆ ಜಿಲ್ಲೆಯ ಅಭಿವೃದ್ದಿಗೆ ಹೊಸ ಭಾಷ್ಯ ಬರೆಯುತ್ತ ಮುಂದಾದ ಜಿಲ್ಲಾಧಿಕಾರಿ, ಕೋವಿಡ್-19 ಸಂಕಷ್ಟ ಕಾಲದಲ್ಲಿ ತೆಗೆದುಕೊಂಡ ಕೆಲವು ಗಟ್ಟಿ ನಿರ್ಧಾರಗಳು ಸೋಂಕು ನಿಯಂತ್ರಣಕ್ಕೆ ಮಹತ್ವಪೂರ್ಣ ಸೇವೆ ಎನಿಸಿದೆ. ಜಿಲ್ಲೆಯಾದ್ಯಂತ ಕೊರೊನಾ ವಾರಿಯರ್ಸ್ ಯೋಧರ ಸೇವೆ ಅಭನಂದಿಸುತ್ತಾ, ಆ ಮೂಲಕ ಹೊಸ ಉತ್ಸಾಹ ತುಂಬಿ, ಕೊರೊನಾ ವಿರುದ್ದದ ಹೋರಾಟದಲ್ಲಿ ಸಮರ್ಥ ಸೇನಾಪತಿಯಾಗಿ ತನ್ನ ಮಾದರಿ ನಾಯಕತ್ವ ಗುಣ ಪ್ರದರ್ಶಿಸಿದ್ದಾರೆ. ಅಗ್ರಗೋಣ-ಶೇಡಿಕಟ್ಟಾ ಸೋಂಕಿತನ ಆರೋಗ್ಯ ಕಾಳಜಿ ಮತ್ತು ತುರ್ತು ಸಂದರ್ಭದಲ್ಲಿ ಕೋವಿಡ್ ವಾರ್ಡಗೆ ದಾಖಲಿಸಲು ಮಹತ್ತರ ಪಾತ್ರ ವಹಿಸಿದ್ದ ಕುಮಟಾ ಉಪವಿಭಾಗಾಧಿಕಾರಿ ಅಜೀತ್ ಎಲೆಮರೆಯ ಕಾಯಿಯಾಗಿ ಜವಾಬ್ದಾರಿ ಮೆರೆದಿದ್ದು, ಅವರ ಸೇವೆಯ ಕುರಿತು ಜಿಲ್ಲಾಧಿಕಾರಿಗಳೇ ಮೆಚ್ಚುಗೆ ಮಾತನಾಡಿ ಶ್ಲಾಘಿಸಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಸಾವು ಬದುಕಿನ ನಡುವೆ ಪರಿತಪಿಸುತ್ತಿದ್ದ ಬಡ ಜೀವವೊಂದನ್ನು ಪವಾಡ ಸದೃಶ ರೀತಿಯಲ್ಲಿ ಬದುಕಿಸಿ ಸಾರ್ಥಕ ಸೇವೆ ಹಾಗೂ ಕರ್ತವ್ಯ ನಿಭಾಯಿಸಿದ ತಾಲೂಕು ಹಾಗೂ ಜಿಲ್ಲೆಯ ಎಲ್ಲಾ ಸ್ತರದ ಆಡಳಿತ ವರ್ಗ ಮತ್ತು ಆರೋಗ್ಯ ಸಿಬ್ಬಂದಿಗಳು ಹಾಗೂ ಕೊರೊನಾ ವಾರಿಯರ್ಸ್ಗಳ ಮಾನವೀಯ ಕಳಕಳಿಗೆ ಮನದುಂಬಿ ಅಭಿನಂದಿಸಲೇ ಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ