![](http://i0.wp.com/vismaya24x7.com/wp-content/uploads/2022/08/ankola-news-latest.jpg?fit=1000%2C675&ssl=1)
ಅಂಕೋಲಾ: ಕಳೆದ ಕೆಲ ದಿನಗಳಿಂದ ತಾಲೂಕಿನ ಹಲವೆಡೆ ಕೇಳಿ ಬರುತ್ತಿದ್ದ ಗುಸು ಗುಸು ಸುದ್ದಿಗೆ ಸ್ಪಷ್ಟತೆ ದೊರೆತಂದಿದ್ದು, ಯುವತಿಯೋರ್ವಳನ್ನು ಗರ್ಭವತಿ ಮಾಡಿದ ಭೂಪನೋರ್ವನನ್ನು ವಶಕ್ಕೆ ಪಡೆದ ಪೋಲಿಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ. ಪರಿಶಿಷ್ಟ ಜಾತಿಯ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡು, ಅವಳಿಗೆ ಪ್ರೀತಿಸುವುದಾಗಿ – ಮದುವೆಯಾಗುವುದಾಗಿ ನಂಬಿಸಿ ಆಕೆಗೆ ಬಲತ್ಕಾರದಿಂದ ಸಂಬoಧ ಬೆಳೆಸಿ ಯುವತಿ ಗರ್ಭವತಿಯಾಗಲು ಕಾರಣನಾಗಿದ್ದಲ್ಲದೇ ಯುವತಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಯುವಕನ ಮೇಲೆ ಸಂತ್ರಸ್ತ ಯುವತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಅಂಕೋಲಾ ಪೊಲೀಸರು, ಆರೋಪಿತನನ್ನು ಪತ್ತೆ ಮಾಡಿ, ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿತನು ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಪ್ರಯಾಣಿಕರ ಟೊಂಪೋ ಮತ್ತು ಕಾರಿನ ನಡುವೆ ಡಿಕ್ಕಿ: 14 ಮಂದಿಗೆ ಗಾಯ
ತಾಲೂಕಿನ ಬೊಬ್ರವಾಡ ನಿವಾಸಿ ಆಟೋ ಚಾಲಕ ಸಂಜಯ ಅಶೋಕ ನಾಯ್ಕ (24) ಬಂಧಿತ ಆರೋಪಿಯಾಗಿದ್ದಾನೆ. ಯುವತಿಯನ್ನು ಮೂರು ವರ್ಷಗಳ ಕಾಲದಿಂದ ಪರಿಚಯ ಮಾಡಿಕೊಂಡು ಪ್ರೀತಿಸುವುದಾಗಿ ನಂಬಿಸಿದ ಆರೋಪಿತ 2021 ರ ಜುಲೈ 10 ರಂದು ಯುವತಿಯನ್ನು ಬಾಳೇಗುಳಿ ಬಳಿ ಓವರ್ ಬ್ರಿಜ್ ಬಳಿ ಇರುವ ಹೊಟೇಲಿಗೆ ಕರೆದುಕೊಂಡು ಹೋಗಿ ಅಲ್ಲಿ ರೂಮ್ ಪಡೆದು, ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ನಂತರದ ದಿನಗಳಲ್ಲಿಯೂ ಆರೋಪಿತನು ಯುವತಿಯನ್ನು ಬಾಳೇಗುಳಿ ಅಲಗೇರಿ ಕ್ರಾಸ್ ಬಳಿ ಇರುವ ಬೆಟ್ಟಕ್ಕೆ ತನ್ನ ಆಟೋದಲ್ಲಿ ಕರೆದುಕೊಂಡು ಹೋಗಿ ಗಿಡಗಂಟಿಗಳ ಪೊದೆಯಲ್ಲಿ ಸಂಪರ್ಕ ಬೆಳೆಸಿ ಆಕೆ ಗರ್ಭವತಿಯಾಗಲು ಕಾರಣನಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಯುವತಿ ಈ ವಿಷಯ ತಿಳಿಸಿದಾಗ, ಈ ವಿಷಯದಲ್ಲಿ ತನ್ನ ಹೆಸರನ್ನು ತಂದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ನೊಂದ ಯುವತಿ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಳು. ಇಂತಹ ಕೆಲ ಪ್ರಕರಣಗಳನ್ನು ಪೋಲೀಸರು ಆಗಾಗ ಭೇಧಿಸಿ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಪ್ರತ್ಯೇಕ ಇನ್ನೊಂದು ಘಟನೆಯಲ್ಲಿ ಪಟ್ಟಣದ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಹೊರ ಜಿಲ್ಲೆಯ ಯುವತಿಯೋರ್ವಳು ಇತ್ತೀಚಿಗೆ ಅದಾವುದೋ ಕಾರಣದಿಂದ ಅಕಾಲಿಕ ಸಾವಿಗೀಡಾಗಿದ್ದು ಸಾವಿನ ಸುತ್ತ ಹಲವು ಸಂಶಯದ ಮಾತುಗಳು ಅಲ್ಲಲ್ಲಿ ಕೇಳಿ ಬಂದಿದ್ದು ನಂತರ ಪೋಲೀಸರ ಗಮನಕ್ಕೂ ಬಂದಿದ್ದು ಕೆಲ ಮಾಹಿತಿ ಕಲೆ ಹಾಕಿದ್ದರು ಎನ್ನಲಾಗಿದೆ .
ಆದರೆ ಇಂತಹ ಕೆಲ ಘಟನಾವಳಿಗಳು ನಡೆದಾಗ ಈ ಕುರಿತಂತೆ ಕೆಲವರಿಗಿರಬಹುದಾದ ಸಾಮಾಜಿಕ ಭಯ, ಪರಿಸ್ಥಿತಿಯ ಅಸಹಾಯಕತೆ ಇಲ್ಲವೇ ಒತ್ತಡ ಅಥವಾ ಆಮಿಷಕ್ಕೆ ಮಣಿದೋ ಇಲ್ಲವೇ ಇನ್ನಿತರೆ ಕೆಲ ಕಾರಣದಿಂದ ಪೊಲೀಸ್ ದೂರು ನೀಡಲು ಹಿಂದೆ ಮುಂದೆ ನೋಡುವಂತಾಗುವುದರಿಂದ, ಪೊಲೀಸ್ ಪ್ರಕರಣ ದಾಖಲಾಗದೇ ಇರುವುದು , ಈ ವೇಳೆ ನೊಂದವರು ಮನದಲ್ಲೇ ಮರುಗಿದರೆ, ಆರೋಪಿತರು ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂಬ ಮಾತು ಕೇಳಿಬರುವಂತಾಗಿದೆ.
ಈ ನಡುವೆ ಕೆಲ ಪ್ರಕರಣಗಳಿಗೆ ಸಂಬoಧಿಸಿದoತೆ ಆರೋಪಿತರನ್ನು ಠಾಣೆಗೆ ವಿಚಾರಣೆಗೆ ಕರೆ ತಂದಾಗ , ಧುತ್ತನೆ ಒಡೋಡಿ ಬರುವ ಕುಟುಂಬಸ್ಥರು ಮತ್ತು ಅವರ ಕಡೆಯವರು ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ತಮ್ಮವರನ್ನು ಕಾನೂನು ಕುಣಿಕೆಯಿಂದ ತಪ್ಪಿಸಲು ,ಸ್ಥಳದಲ್ಲಿ ಕುಸಿದು ಬಿದ್ದಂತೆ ನಾಟಕವಾಡುವುದು ಇನ್ನಿತರ ಗಿಮಿಕ್ ಮಾಡಿ ಬಚಾವ್ ಮಾಡುವ ತಂತ್ರ ಪ್ರಯೋಗಿಸಿ ನೋಡುವವರೂ ಕೆಲವರು ಇದ್ದು, ಮನೆಯವರ ಈ ಸವಲತ್ತೇ ಮತ್ತೆ ಮತ್ತೆ ಇಂಥ ಕೆಲಸಗಳಿಗೆ ಕೆಲವರಿಗೆ ಪ್ರೇರಣೆ ಆಗಿದೆ ಎನ್ನಲಾಗಿದೆ.
ಇಂತಹ ವೇಳೆ ಸಮಾಜ ಪೊಲೀಸ್ ವ್ಯವಸ್ಥೆಯನ್ನು ದೂರುವ ಬದಲು,ಮನೆಯ ಹಿರಿಯರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
![](http://i0.wp.com/vismaya24x7.com/wp-content/uploads/2022/08/shri-devi-latest.jpg?resize=708%2C398&ssl=1)