ಬೈಕ್ ಸವಾರರ ಮೇಲೆ ದಾಳಿ ಮಾಡಿದ ಚಿರತೆ: ಸಾರ್ವಜನಿಕರಲ್ಲಿ ಭಯ

ಗುಡ್ಡದ ಮೇಲಿನಿಂದ ಏಕಾಏಕಿ ಬೈಕ್ ಸವಾರರ ಮೇಲೆ ಎರಗಿದ ಚಿರತೆ

ಹೊನ್ನಾವರ: ತಾಲೂಕಿನಲ್ಲಿ ಈಗ ಚಿರತೆ ಭಯ ಶುರುವಾಗಿದೆ. ಕೆಲಸ ಮುಗಿಸಿ ಬೈಕ್ ಮೂಲಕ ಮನೆಗೆ ವಾಪಸ್ಸಾಗುತ್ತಿರುವ ವೇಳೆ ಏಕಾಏಕಿ ಗುಡ್ಡದ ಮೇಲಿದ್ದ ಚಿರತೆ ಬೈಕ್ ಸವಾರರ ಮೇಲೆರಗಿ ದಾಳಿ ನಡೆಸಿದ ಘಟನೆ ಸಾಲ್ಕೊಡಿನಲ್ಲಿ ನಡೆದಿದೆ. ಓರ್ವ ಸವಾರನ ಮೊಣಕಾಲಿಗೆ ಚಿರತೆ ಕಚ್ಚಿದೆ ಎನ್ನಲಾಗಿದ್ದು, ಉಗುರಿನಿಂದ ಪರಚಿದ ಗಾಯಗಳಾಗಿವೆ. ಹುಡುಗೋಡದ ಮಾಬ್ಲ ನಾಯ್ಕ ಮತ್ತು ಬಳ್ಕೂರಿನ ಗಜುನಾಯ್ಕ ಗಾಯಗೊಂಡವರು. ಇವರು ಕೆಲಸಮುಗಿಸಿಕೊಂಡು ಸಾಲ್ಕೋಡಿನಿಂದ ವಾಪಸ್ ಬರುವಾಗ ಎಸ್.ಕೆ.ಪಿ ಕ್ರೀಡಾಂಗಣದ ಸಮೀಪ ಚಿರತೆ ದಾಳಿ ಮಾಡಿದೆ.

ರಾತ್ರಿ ಊಟಮಾಡಿ ಮಲಗಿದ್ದವ ಮುಂಜಾನೆಯ ಒಳಗೆ ಸಾವಿಗೆ ಶರಣು

ಗಾಯಾಳುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯರು ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಗಾಯಾಳುಗಳು ಚೇತರಿಸಿಕೊಂಡಿದ್ದಾರೆ..  ಎರಡುಮೂರು ದಿನಗಳ ಹಿಂದೆ ಈ ಭಾಗದಲ್ಲಿ  ಚಿರತೆಯೊಂದು ಆಹಾರ ಹುಡುಕುತ್ತ ಬರುವ ವೇಳೆ ಬಾವಿಗೆ ಬಿದ್ದ ಘಟನೆ ನಡೆದಿತ್ತು. ಅರಣ್ಯಾಧಿಕಾರಿಗಳು ಚಿರತೆಯನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದರು. ಇದಕ್ಕೂ ಮೊದಲು ಕೆಕ್ಕಾರ ಭಾಗದಲ್ಲೂ ಚಿರತೆ ಕಾಣಿಸಿಕೊಂಡು ಭಯಹುಟ್ಟಿಸಿತ್ತು. ಆದರೆ ಇದೀಗ ದಾಳಿ ಮಾಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಹೌದು, ಕಳೆದ ಎರಡು ದಿನದ ಹಿಂದೆ ಇದೇ ಗ್ರಾಮದ ಬಾವಿಯಲ್ಲಿ ಚಿರತೆ ಬಿದ್ದಿದ್ದು, ಊರಗತಜ್ಞರ ಸಹಕಾರದ ಮೇರೆಗೆ ಅರಣ್ಯ ಇಲಾಖೆಯವರು ಬೋನಿನಲ್ಲಿ  ಚಿರತೆ  ಸೆರೆಹಿಡಿದು ಬಿಟ್ಟಿದ್ದರು. ಇದರಿಂದ ಸ್ಥಳಿಯರು ನಿಟ್ಟುಸಿರು ಬಿಡುವಾಗಲೇ ಮತ್ತೆ ಇಂತಹ ಘಟನೆ ಸಂಭವಿಸಿದ್ದು, ಸ್ಥಳಿಯರಲ್ಲಿ ಆತಂಕ ಮೂಡಿಸಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Exit mobile version