ಯುವ ವಕೀಲ ಕುಲದೀಪ ಶೆಟ್ಟಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಖಂಡಿಸಿ  ಮನವಿ ಅರ್ಪಿಸಿದ ವಕೀಲರ ಬಳಗ   

ಅಂಕೋಲಾ: ದಕ್ಷಿಣ ಕನ್ನಡ ಜಿಲ್ಲೆಯ  ಕುಂಜಾಲುಕಟ್ಟೆಯಲ್ಲಿ ಯುವ ವಕೀಲ ಕುಲದೀಪ ಶೆಟ್ಟಿ ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ಅಂಕೋಲಾ ತಾಲೂಕಿನ ವಕೀಲರ ಬಳಗದಿಂದ ತಹಶೀಲ್ಧಾರವರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು.ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕೆ ಹೊರತು ಕಾನೂನನ್ನು ಗಾಳಿಗೆ ತೂರಿ ವಕೀಲರು ಎಂಬ ಅರಿವು ಇದ್ದರೂ ಸಹ ಮನ ಬಂದಂತೆ ಸೌಜನ್ಯವಿಲ್ಲದೇ ಅನಾಗರಿಕರಂತೆ ವರ್ತಿಸಿರುವುದನ್ನು ಖಂಡಿಸುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ. 

ಯಾವುದೇ ವಿಷಯದಲ್ಲಿ ಕಾನೂನಿಗೆ ವಿರುದ್ಧವಾಗಿ ವರ್ತಿಸಲು ಪೊಲೀಸರಿಗೆ ಯಾವುದೇ ಅಧಿಕಾರ ಇರುವುದಿಲ್ಲ ಈ ಪ್ರಕರಣದಲ್ಲಿ ತಪ್ಪಿತಸ್ಥ ಪೊಲೀಸರ ವಿರುದ್ಧ ಸರ್ಕಾರ ಸೂಕ್ತ  ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ವಕೀಲರ ಉಮೇಶ ನಾಯ್ಕ ಮನವಿ ಓದಿದರು. ನೋಟರಿ ಸಂಘದ ಜಿಲ್ಲಾಧ್ಯಕ್ಷ ಮತ್ತು ಹಿರಿಯ ವಕೀಲ ನಾಗಾನಂದ ಬಂಟ, ತಾಲೂಕಾ ವಕೀಲರ ಬಳಗದ ವಿನೋದ ಶಾನಭಾಗ್, ಬಿ.ಡಿ.ನಾಯ್ಕ, ತೇಜಸ್ ಬಂಟ್, ಮಮತಾ ಕೆರೆಮನೆ, ಜಗದೀಶ ಹಾರ್ವಾಡೇಕರ, ವಿನಾಯಕ ನಾಯ್ಕ, ಗಜಾನನ ನಾಯ್ಕ, ಸುರೇಶ್ ಬಾನಾವಳಿಕರ್ ಉಪಸ್ಥಿತಿರಿದ್ದರು. ಉಪ ತಹಶೀಲ್ದಾರ ಸುರೇಶ ಹರಿಕಂತ್ರ ಮನವಿ ಸ್ವೀಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version