Focus News
Trending

ಮಣಿಪುರ ಘಟನೆ ಖಂಡಿಸಿ ಅಂಕೋಲಾದಲ್ಲಿ ಸಾಮಾಜಿಕ ಕಾರ್ಯಕರ್ತರನೇಕರಿಂದ ಮನವಿ.

ಅಂಕೋಲಾ : ಮಣಿಪುರದಲ್ಲಿ ಇತ್ತೀಚೆಗೆ ನಡೆದ ಅಮಾನುಷ ಘಟನೆಯನ್ನು ಖಂಡಿಸಿ , ಅಂಕೋಲಾದಲ್ಲಿಯೂ ಸಾಮಾಜಿಕ ಕಾರ್ಯಕರ್ತರನೇಕರು ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡು,ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಕುಕಿ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಲೈಂಗಿಕ ದೌರ್ಜನ್ಯ ನಡೆಸಿದ ಹಾಗೂ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕೃತ್ಯವನ್ನು ಖಂಡಿಸಿ, ಅಂಕೋಲಾದ ಸಮಾನ ಮನಸ್ಕ ಸಾಮಾಜಿಕ ಕಾರ್ಯಕರ್ತರು ಮನವಿ ಸಲ್ಲಿಸಿದ್ದು,.ಈ ಸಂದರ್ಭದಲ್ಲಿ ಮಾತನಾಡಿದ ದಾಮೋದರ ಜಿ ನಾಯ್ಕ, ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವು ಮನುಷ್ಯತ್ವವೇ ತಲೆತಗ್ಗಿಸುವ ಕೃತ್ಯವಾಗಿದೆ.

ಭಾರತ ದೇಶದಲ್ಲಿ ಮಹಿಳೆಯರನ್ನು ದೇವತೆ ಎಂದು ಪೂಜಿಸುತ್ತಾರೆ. ಅಂತಹ ದೇವತೆಯನ್ನು ನೀಚ ಮಟ್ಟದಲ್ಲಿ ನಡೆಸಿಕೊಂಡಿರುವದು ಅಸಹ್ಯವೆನಿಸುತ್ತದೆ. ಮಣಿಪುರದಲ್ಲಿ ಸಂಘರ್ಷ ಆರಂಭಗೊಂಡು ಮೂರು ತಿಂಗಳಾಗಿದ್ದರೂ ಆಡಳಿತ ವ್ಯವಸ್ಥೆ ಕ್ರಮಕ್ಕೆ ಮುಂದಾಗುತ್ತಿಲ್ಲ.

ಸಂಘರ್ಷವನ್ನು ನಿಯಂತ್ರಣಕ್ಕೆ ತಂದು ಮಹಿಳೆಯರು ಹಾಗೂ ಮಕ್ಕಳು ನೆಮ್ಮದಿಯಿಂದ ಜೀವನ ನಡೆಸುವ ವ್ಯವಸ್ಥೆ ಸೃಷ್ಟಿಯಾಗಬೇಕಿದೆ ಎಂದು ಒತ್ತಾಯಿಸಿದರು.
ಹೆಣ್ಣಿಗೆ ಉತ್ತಮ ಸ್ಥಾನಮಾನ ನೀಡಿದ ನಮ್ಮ ದೇಶದ ಯಾವುದೇ ಮೂಲೆಯಲ್ಲೂ ಇಂತಹ ಕೃತ್ಯ ನಡೆಯಬಾರದು. ಇಂತಹ ನೀಚ ಕೃತ್ಯ ಎಸಗಿದ ದುಷ್ಕರ್ಮಿಗಳಿಗೆ ದಯಾ ದಾಕ್ಷಿಣ್ಯ ಇಲ್ಲದೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ತಹಶೀಲ್ದಾರರ ಪರವಾಗಿ ಉಪ ತಹಶೀಲ್ದಾರರಾದ ಸುರೇಶ ಹರಿಕಾಂತ ಮನವಿ ಸ್ವೀಕರಿಸಿದರು.

ಪ್ರಮುಖರಾದ ಮಂಜುನಾಥ ಡಿ ನಾಯ್ಕ ಬೇಳಾ, ಮಂಜುನಾಥ ವಿ ನಾಯ್ಕ, ನಾಗೇಂದ್ರ ದೇವಾ ನಾಯ್ಕ, ಗಜಾನನ ಗಣಪತಿ ನಾಯ್ಕ, ರಾಜು ಹರಿಕಂತ್ರ, ಸುರೇಶ ನಾಯ್ಕ ಅಸ್ಲಗದ್ದೆ, ಸಚೀನ ನಾಯ್ಕ ಹೊನ್ನಕೇರಿ, ಶಬ್ಬೀರ ಶೇಖ, ವಿಜಯ ಪಿಳ್ಳೈ, ಸುರೇಶ ಎನ್ ನಾಯ್ಕ, ತೌಸೀಫ ಎನ್ ನದಾಫ, ದರ್ಶನ ಕೆ ನಾಯ್ಕ ಅವರ್ಸಾ, ಸುದೀಪ ಬಂಟ ಕೇಣಿ ಮತ್ತಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button