ಖಾಸಗಿ ಬಸ್ ಡಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

ಹೊನ್ನಾವರ: ರಸ್ತೆ ದಾಟುತ್ತಿದ್ದ ಪಾದಚಾರಿ ಓರ್ವನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಪಾದಚಾರಿ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ, ಹೊನ್ನಾವರ ಪಟ್ಟಣದ ಮೂರುಕಟ್ಟೆ ಸಮೀಪ ನಡೆದಿದೆ.

ಹೊನ್ನಾವರ ಕಡೆಯಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಸಿಬರ್ಡ್ ಬಸ್ ಚಾಲಕ ಅತೀ ವೇಗವಾಗಿ ತನ್ನ ಬಸ್ ಚಲಾಯಿಸಿಕೊಂಡು ಬರುತ್ತಿದ್ದ ಎನ್ನಲಾಗಿದೆ. ಅದೇ ವೇಳೆ ಪಾದಚಾರಿ ಓರ್ವ ಹೆದ್ದಾರಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ದಾಟುತ್ತಿದ್ದು, ಅತಿವೇಗವಾಗಿ ಬಂದ ಖಾಸಗಿ ಬಸ್ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಅಪರಿಚಿತ ಪಾದಚಾರಿ ತಲೆಗೆ ಗಂಭೀರವಾಗಿ ಗಾಯಗೊಂಡು ಆತ ಸ್ಥಳದಲ್ಲೆ ಸಾವನಪ್ಪಿದ್ದಾನೆ. ಅಪಘಾತಕ್ಕೆ ಕಾರಣವಾಗಿರುವ ಸಿಬರ್ಡ್‌ ಬಸ್ ಚಾಲಕ ಸ್ಥಳದಲ್ಲೆ ಬಸ್ ಬಿಟ್ಟು ಪರಾರಿಯಾಗಿದ್ದು, ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪೊಲೀಸರು ತನಿಖೆ ಕೈಕೊಂಡಿದ್ದಾರೆ.

ವಿಸ್ಮಯ ನ್ಯೂಸ್ ಹೊನ್ನಾವರ

Exit mobile version