ಮಕ್ಕಳು, ಮಹಿಳೆಯರೆನ್ನದೆ ಕಂಡ ಕಂಡ ದಾರಿಹೋಕರ ಮೇಲೆ ಎರಗಿ ಹೋದ ರೆಬಿಸ್ ಸೋಂಕಿತ ಹಸು
ಹಸುವಿನ ವಿಚಿತ್ರ ವರ್ತನೆ ಕಂಡು ಆತಂಕಗೊಂಡ ಸಾರ್ಜನಿಕರು
![](http://i0.wp.com/vismaya24x7.com/wp-content/uploads/2023/08/ankola-januvaru.jpg?fit=1280%2C719&ssl=1)
ಅಂಕೋಲಾ: ಹಸುವೊಂದು ಸಿಕ್ಕ ಸಿಕ್ಕವರನ್ನು ಕೆಡವುತ್ತ ಭೀತಿ ಮೂಡಿಸಿದ ಘಟನೆ ಅಂಕೋಲಾ ಪಟ್ಟಣದಲ್ಲಿ ನಡೆದಿದ್ದು ಹುಚ್ಟು ನಾಯಿ ಕಡಿತದಿಂದ ರೇಬಿಸ್ ರೋಗ ತಗುಲಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಬೆಳಿಗ್ಗೆಯಿಂದಲೇ ಶಾಲಾ ಮಕ್ಕಳು, ಮಹಿಳೆಯರಿಗೂ ಮೈ ಮೇಲೆ ಎರಗಿ ಹೋಗಿತ್ತು ಎನ್ನ ಲಾದ ಈ ಹಸು ವಿಚಿತ್ರವಾಗಿ ವರ್ತಿಸುತ್ತಿತ್ತು. ಹಸುವನ್ನು ಕೆಲವರು ಕಟ್ಟಿ ಹಾಕಿದ್ದರು ಎನ್ನಲಾಗಿದ್ದು ಬಿಡಿಸಿಕೊಂಡು ಬಂದ ಹಸು ಮಾರುಕಟ್ಟೆಯಲ್ಲಿ ಸಿಕ್ಕ ಸಿಕ್ಕವರ ಮೇಲೇರಿ ಹೋಗಿದೆ. ಹಸುವಿನ ಹುಚ್ಚಾಟದಿಂದ ಕೆಲವು ದಾರಿ ಹೋಕರು ಎಡವಿ ಬಿದ್ದಿದ್ದು ದ್ವಿಚಕ್ರ ವಾಹನ ಚಾಲಕರು ಸಹ ಗಲಿಬಿಲಿಗೊಳಗಾಗಿದ್ದಾರೆ.
![](http://i0.wp.com/vismaya24x7.com/wp-content/uploads/2023/08/v-world-new.jpg?resize=708%2C398&ssl=1)
ಸುದ್ದಿ ತಿಳಿದ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು, ವಾಜಂತ್ರಿ ಕೇರಿ ಅಕ್ಕಪಕ್ಕದ ಸ್ಥಳೀಯ ಯುವಕರನೇಕರು ದೀಪಕ್ ಹೊಟೆಲ್ ಬಳಿ ಹಸುವನ್ನು ಕಟ್ಟಿ ಹಾಕಿದ್ದಾರೆ.ಪಶು ಇಲಾಖೆ ವೈದ್ಯರು, ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಪೋಲೀಸರು ಸ್ಥಳಕ್ಕೆ ಆಗಮಿಸಿ, ಕ್ರಮ ಕೈಗೊಳ್ಳುವಷ್ಟರಲ್ಲಿ ಹಸು, ಕಟ್ಟಿದ ಹಗ್ಗದಿಂದ ತಪ್ಪಿಸಿಕೊಂಡು, ರಥಬೀದಿ, ಕಾಕರಮಠ ಮಾರ್ಗವಾಗಿ ಅಂಬಾರಕೊಡ್ಲ ರಸ್ತೆಯತ್ತ ಓಡಿ ಹೋಗಿದೆ. ಅಲ್ಲಿಂದ ಓಣಿ ಓಣಿಗಳಲ್ಲಿ ಓಡಾಡುತ್ತ ಮುಂದೆ ಬರುವ ಸಾರ್ವಜನಿಕರು, ನಾಯಿ, ಇತರೆ ಜಾನುವಾರಗಳ ಮೇಲೆರಗಿ ಹೋಗುತ್ತ ಸ್ಥಳೀಯರ ಆತಂಕ ಹೆಚ್ಚು ಮಾಡಿತ್ತು..
ಪುರಸಭೆಯ 3 ಜನಪ್ರತಿನಿಧಿಗಳ ಮುಂದಾಳತ್ವದಲ್ಲಿ ಸ್ಥಳೀಯರನೇಕರು ಧೈರ್ಯ ಮಾಡಿ ಹಸುವನ್ನು ಭಂಧಿಸುವ ಕಾರ್ಯಾಚರಣೆ ನಡೆಸಿದರಾದರೂ ಮತ್ತೆ ಮತ್ತೆ ತಪ್ಪಿಸಿಕೊಂಡು ಅಕ್ಕ ಪಕ್ಕದ ಮನೆಯವರೆಲ್ಲ ಆತಂಕಗೊಳ್ಳುವಂತೆ ಆಗಿತ್ತು., ಅಂತೂ ಇಂತೂ ಎದೆ ಗುಂದದ ಸ್ಥಳೀಯ ಮುಖಂಡರು ಮತ್ತು ಯುವಕರ ತಂಡ ಬಹು ಹೊತ್ತಿನವರೆಗೆ 3 – 4 ಕಿ.ಮೀ ದೂರಸಾಗಿ ನಿರಂತರ ಕಾರ್ಯಾಚರಣೆ ನಡೆಸಿ, ಕೊನೆಗೂ ದೊಡ್ಡ ಮರವೊಂದರ ಬಳಿ ಹಸುವನ್ನು 2-3 ಹಗ್ಗ ಬಳಸಿ ಯಶಸ್ವಿಯಾಗಿ ಕಟ್ಟಿ ಹಾಕಿ ಹಲವರ ಆತಂಕ ದೂರಗೊಳಿಸಿದರು.
ರೆಬಿಸ್ ಸೋಂಕಿತ ಪ್ರಾಣಿಯ ಜೊಲ್ಲು ಸೋಕಿದರೂ ಅಪಾಯಕಾರಿ ಎನ್ನಲಾಗಿದ್ದು ಹಲವರು ಆತಂಕ ಗೊಳ್ಳುವಂತಾಗಿತ್ತು. ಪಶು ವೈದ್ಯಕೀಯ ಇಲಾಖೆಯವರು ತಡ ರಾತ್ರಿ ಆದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸಿ ಹಲವರ ಮೆಚ್ಚುಗೆಗೆ ಕಾರಣರಾದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ