Narayana Guru Jayanthi: ನಾರಾಯಣ ಗುರುಗಳ 169 ನೇ ಜಯಂತ್ಯೋತ್ಸವ: ಸ್ತಬ್ಧಚಿತ್ರದ ಅದ್ದೂರಿ ಮೆರವಣಿಗೆ

ಅಂಕೋಲಾ: ನಾರಾಯಣ ಗುರುಗಳ 169 ನೇ (Narayana Guru Jayanthi) ಜಯಂತ್ಯೋತ್ಸವ ಮತ್ತು ಶರಣ ನುಲಿಯ ಚಂದಯ್ಯ ಅವರ ಜಯಂತಿ ಕಾರ್ಯಕ್ರಮವನ್ನು ಅಂಕೋಲಾದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.ತಹಶೀಲ್ದಾರ ಅಶೋಕ ಭಟ್ಟ ಕಾರ್ಯಕ್ರಮ ಉದ್ಘಾಟಿಸಿದರು. ಕೇರಳದಲ್ಲಿ ಜಾತಿ ವ್ಯವಸ್ಥೆಯಿಂದ ಬಳಲಿ ಬೆಂಡಾಗಿರುವ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತವರು ಶ್ರೀ ನಾರಾಯಣ ಗುರುಗಳು. ಸಮಾನತೆಗಾಗಿ ಈಡೀ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಹೋರಾಟಗಾರ. ಈ ಮೂಲಕವಾಗಿ ದೇಶದಲ್ಲಿಯೇ ಮೌನ ಕ್ರಾಂತಿಯನ್ನು ಮಾಡಿದವರು. ಅವರ ಅನುಯಾಯಿಗಳು ಇಂದು ಭಾರತವಲ್ಲದೇ ಹೊರ ದೇಶದಲ್ಲಿಯೂ ಕೂಡ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸುತ್ತಿರುವುದು ಶ್ಲಾಘನೀಯವಾದದ್ದು ಎಂದು ತಹಸೀಲ್ದಾರ್ ಅಶೋಕ ಭಟ್ ಹೇಳಿದರು.

ತಾಲೂಕು ಆಡಳಿತದಿಂದ ಶ್ರೀ ನಾರಾಯಣ ಗುರುಗಳ 169 ನೇ ( Narayana Guru Jayanthi) ಜಯಂತೋತ್ಸವ ಹಾಗೂ ಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ನುಲಿಯ ಚಂದಯ್ಯನವರು, ವಚನಗಳನ್ನು ಸಂರಕ್ಷಿಸುವುದರಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದರು. ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಎಂ.ಪಿ.ನಾಯ್ಕ ಮಾತನಾಡಿ, ಶ್ರೀ ನಾರಾಯಣ ಗುರುಗಳು ಮನುಕುಲವನ್ನು ಒಂದೇ ಎನ್ನುವ ಸಾರಾಂಶವನ್ನು ತಿಳಿಸಿದವರು ಎಂದರು. ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ಮಾತನಾಡಿ, ಶ್ರೀ ನಾರಾಯಣ ಗುರುಗಳು ಹಲವು ಪವಾಡಗಳ ಮೂಲಕ ಮನುಷ್ಯತ್ವವನ್ನು ಪ್ರತಿಯೊಬ್ಬರಲ್ಲಿಯೂ ಕಾಣುವಂತೆ ಮಾಡಿದವರು ಎಂದರು.

ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಡಿ.ಜಿ.ನಾಯ್ಕ ಶ್ರೀ ನಾರಾಯಣಗುರು ಮತ್ತು ನುಲಿಯ ಚಂದಯ್ಯ ಕುರಿತು ಉಪನ್ಯಾಸ ನೀಡಿದರು. ಸಾಮಾಜಿಕ ಕಾರ್ಯಕರ್ತ ರಾಜೇಂದ್ರ ವಿ. ನಾಯ್ಕ ಮಾತನಾಡಿ, ನಾರಾಯಣ ಗುರುಗಳು ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಅವರು ಇಡೀ ಮನುಕುಲ ಒಂದೇ ಎಂದು ಸಾರಿದ ಮಹಾತ್ಮರು ಎಂದರು. ನಾಮಧಾರಿ ಈಡಿಗ ನೌಕರರ ಸಂಘದ ಅಧ್ಯಕ್ಷ ಗಣಪತಿ ನಾಯ್ಕ, ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ, ತಾ.ಪಂ. ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ., ಪಿಎಸ್‌ಐ ಉದ್ದಪ್ಪ ಧರೆಪ್ಪನವರ ಹಿರಿಯರ ಜಯಂತಿ ಆಚರಣೆ ಮಹತ್ವದ ಕುರಿತು ಮಾತನಾಡಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಜಗದೀಶ ನಾಯ್ಕ, ಸಿಡಿಪಿಓ ಸವಿತಾ ಶಾಸ್ತ್ರೀಮಠ, ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿ, ವಿವಿಧ ಸಂಘಟನೆಯ ಪ್ರಮುಖರಾದ ಮಾದೇವ ಎಂ. ನಾಯ್ಕ, ರಮೇಶ ಎನ್. ನಾಯ್ಕ, ಏಕನಾಥ ನಾಯ್ಕ, ಮಂಜುನಾಥ ಡಿ. ನಾಯ್ಕ, ಜಟ್ಟಿ ನಾಯ್ಕ, ಸುರೇಶ ನಾಯ್ಕ ಅಸ್ಲೆಗದ್ದೆ, ಮಂಜುಳಾ ನಾಯ್ಕ, ಸಂಜಯ ನಾಯ್ಕ, ಉಮೇಶ ನಾಯ್ಕ ಗುಡಿಗಾರಗಲ್ಲಿ, ಶ್ರೀಧರ ನಾಯ್ಕ, ಗೋವಿಂದ್ರಾಯ ನಾಯ್ಕ, ಮೋಹನ ಎಚ್. ನಾಯ್ಕ, ವಸಂತ ನಾಯ್ಕ, ಶ್ರೀಪಾದ ಟಿ. ನಾಯ್ಕ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಉಪಾಧ್ಯಕ್ಷ ವಕೀಲ ಉಮೇಶ ನಾಯ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾಗರಾಜ ಎಂ. ನಿರ್ವಹಿಸಿದರು. ರಾಜೇಶ ಮಿತ್ರಾ ನಾಯ್ಕ, ಡಾ. ವಿನಾಯಕ ಹೆಗಡೆ, ಮಂಜುನಾಥ ಇಟಗಿ, ಗಣೇಶ ನಾಯ್ಕ, ಗಜು ನಾಯ್ಕ ಸೇರಿದಂತೆ ಹಲವರು ಸಹಕರಿಸಿದರು. ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಿಂದ ನಾರಾಯಣಗುರು ಸ್ತಬ್ಧಚಿತ್ರದ ಅದ್ದೂರಿ ಮೆರವಣಿಗೆ ನಡೆಸಿ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ತಹಸೀಲ್ದಾರ್ ಕಚೇರಿಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಹಲವು ಪ್ರಮುಖರು, ಇತರರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version