Big News
Trending

Idagunji Ganesha: ಪುರಾಣ ಪ್ರಸಿದ್ಧ ಇಡಗುಂಜಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ: 50 ಸಾವಿರಕ್ಕೂ ಹೆಚ್ಚಿನ ಭಕ್ತರ ಆಗಮನ

100ಕ್ವಿಂಟಾಲ್ ನಷ್ಟು ಪಂಚಕಜ್ಜಾಯ ನೈವೇದ್ಯ, 40 ಸಾವಿರ ತೆಂಗಿನಕಾಯಿ ಸಮರ್ಪಣೆ

ಕಾರವಾರ: ಪುರಾಣ ಪ್ರಸಿದ್ಧ ಇಡಗುಂಜಿ ಶ್ರೀ ಮಹಾಗಣಪತಿ (Idagunji Ganesha) ಕ್ಷೇತ್ರದಲ್ಲಿ ಮಂಗಳವಾರ ಸಾವಿರಾರು ಸಂಖ್ಯೆಯ ಭಕ್ತಸಾಗರದ ನಡುವೆ ವಿಜೃಂಭಣೆಯಿoದ ಗಣೇಶ ಚತುರ್ಥಿ ಆಚರಿಸಲಾಯಿತು. ಗಣೇಶ ಚೌತಿಯಂದು ಪ್ರತಿ ವರ್ಷ ರಾಜ್ಯದ ಮೂಲೆ ಮೂಲೆಯಿಂದ 50 ಸಾವಿರಕ್ಕೂ ಹೆಚ್ಚಿನ ಭಕ್ತರು ಶ್ರೀ ಕ್ಷೇತ್ರ ಇಡಗುಂಜಿಗೆ ಭೇಟಿ ನೀಡಿ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಪ್ರಭಾತ ಕಾಲದಿಂದಲೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬೆಳಗಿನಜಾವ 4 ಗಂಟೆಗೆ ದೇವರ ದರ್ಶನಕ್ಕೆ ಭಕ್ತಾಧಿಗಳು ಆಗಮಿಸಿದ್ದರು.

ಶ್ರೀ ಕ್ಷೇತ್ರದಲ್ಲಿ ಗಣಹೋಮ, ಮಂಗಳಾರತಿ, ಸತ್ಯಗಣಪತಿ ವ್ರತ, ಅಭಿಷೇಕ ಹಾಗೂ ಪಂಚಕಜ್ಜಾಯ ಸೇವೆಗಳು ಒಳಗೊಂಡoತೆ ಕ್ಷೇತ್ರದಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪರಂಪರಾಗತವಾಗಿ ನಡೆದುಬಂದ ಎಲ್ಲಾ ಸಂಪ್ರದಾಯಗಳು ನಡೆದವು. 100ಕ್ವಿಂಟಾಲ್ ನಷ್ಟು ಪಂಚಕಜ್ಜಾಯ ನೈವೇದ್ಯವಾಗಿತ್ತು. 40 ಸಾವಿರ ತೆಂಗಿನಕಾಯಿ ಸಮರ್ಪಣೆಯಾಗಿದೆ. 250ಕ್ಕು ಹೆಚ್ಚು ಗಣಹೋಮ 100 ಕ್ಕೂ ಹೆಚ್ಚು ಸತ್ಯಗಣಪತಿ ವೃತ, ನಡೆಯಿತು.

ವಿಘ್ನಗಳ ದೂರ ಮಾಡುವ ಶ್ರೀ ಮಹಾಗಣಪತಿಯು (Idagunji Ganesha) ವಿಶ್ವಕ್ಕೆ ಬಂದoತಹ ವಿಪತ್ತು, ಸಂಕಷ್ಟವನ್ನು ದೂರಮಾಡಲಿ ಎಂದು ದೇವಾಲಯದ ಭಜಕರು ಲೋಕಕಲ್ಯಾಣಾರ್ಥವಾಗಿ ಪ್ರಾರ್ಥಿಸಿದರು. ಬೆಳಿಗ್ಗೆ ಶ್ರೀ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ ಕಾರಣ ಎರಡು ಕಿಲೋಮೀಟರ್ ವರೆಗೂ ಜನಸಂದಣಿ ಉಂಟಾಯಿತು. ವರುಣ ಅಬ್ಬರಿಸಿದ್ದರಿಂದ ಕೆಲಕಾಲ ಭಕ್ತಾಧಿಗಳು ಮಳೆಯಲ್ಲಿ ನೆನೆಯುವಂತಾಯಿತು.

ಸರತಿ ಸಾಲಿನ ಪ್ರಕಾರ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಪೊಲೀಸರು ಪರಿಸ್ಥಿತಿ ನಿಬಾಯಿಸುವಲ್ಲಿ ಹರಸಾಹಸಪಟ್ಟರು. ಭಕ್ತರು ಸರದಿ ಸಾಲಿನಲ್ಲಿ ನಿಂತು ಸಂಕಷ್ಟಹರ ಗಣಪನ ದರ್ಶನ ಪಡೆದು ಪುನೀತರಾದರು. ಈ ಸಂದರ್ಭದಲ್ಲಿ ನಮ್ಮ ವಿಸ್ಮಯ ಟಿವಿಯೋಂದಿಗೆ ದೇವಾಲಯದ ಪಾರಂಪರಿಕ ಅರ್ಚಕರಾದ ಮಂಜುನಾಥ ಭಟ್ಟ ಮಾತನಾಡಿ ಗಣೇಶ ಚತುರ್ಥಿಯ ಕುರಿತು ವಿವರಿಸಿದರು.

ನಂತರ ಅರ್ಚಕರಾದ ನರಸಿಂಹ ಭಟ್ಟ ಮಾತನಾಡಿ ಬೇಳಗಿನಜಾವ ನಾಲ್ಕು ಘಂಟೆಯಿoದ ಭಕ್ತರು ತಂಡೋಪ ತಂಡವಾಗಿ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ, ಮಂಗಳವಾರ ಗಣೇಶ ಚತುರ್ಥಿ ಬಂದಿರುವುದು ಬಹಳ ವಿಷೇಶ ಎಂದರು. ಪ್ರಧಾನ ಅರ್ಚಕರಾದ ವಿದ್ವಾನ ವಿಷ್ಣು ಭಟ್ಟ ಮಾತನಾಡಿ ಸುಮಾರು 85 ವರ್ಷದ ಹಿಂದೆ ಎರಡುದಿನ ಚೌತಿ ಬಂದಿತ್ತು ಎಂದು ಮಾಹಿತಿ ನೀಡಿದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Back to top button