Important
Trending

ಒಬ್ಬಂಟಿಯಾಗಿದ್ದ ವಿವಾಹ ವಿಚ್ಛೇದಿತನ ಬಾಳಿನ ದುರ್ವಿಧಿ: ಕಾಣೆಯಾಗಿದ್ದವ ಮೃತದೇಹವಾಗಿ ಪತ್ತೆ

ಅಂಕೋಲಾ: ತಾಲೂಕಿನ ಭಾವಿಕೇರಿಯಲ್ಲಿ ಇತ್ತೀಚೆಗೆ ಮನೆಯಿಂದ ಹೊರಗೆ ಹೋಗಿ ಕಾಣೆಯಾಗಿದ್ದ ವ್ಯಕ್ತಿ, ಕೆಲ ದಿನಗಳ ನಂತರ ಹತ್ತಿರದ ತೆಪ್ಪದಕೆರೆಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾನೆ. ಭಾವಿಕೇರಿಯ ಗಾಂವಕರಕೇರಿ ನಿವಾಸಿ ಅರವಿಂದ ವೆಂಕಟರಮಣ ನಾಯಕ (48) ಮೃತ ದುರ್ದೈವಿ ಯಾಗಿದ್ದಾನೆ., 2009 ರಲ್ಲಿ ವಿವಾಹವಾಗಿದ್ದ ಈತನಿಗೆ 2012ರಲ್ಲಿ ವಿಚ್ಛೇದನ ನೀಡಿ ಹೆಂಡತಿ ಬಿಟ್ಟು ಹೋಗಿದ್ದಳು.

ಮಕ್ಕಳಿರದ ಈತ ತನ್ನ ಮೂಲ ಮನೆಯಲ್ಲಿಯೇ ಒಬ್ಬಂಟಿಯಾಗಿ ವಾಸವಾಗಿದ್ದವ, ನಂತರ ವಿಪರೀತ ಸರಾಯಿ ಕುಡಿಯಲು ಆರಂಭಿಸಿದ್ದ ಎನ್ನಲಾಗಿದೆ. ಈ ನಡುವೆ ಇತ್ತಿಚೆಗೆ ಕಳೆದ ಕೆಲ ದಿನಗಳ ಹಿಂದಷ್ಟೇ ಬೆಳಿಗ್ಗೆ ತನ್ನ ತಾಯಿ ವಾಸವಾಗಿದ್ದ ಬಾಡಿಗೆ ಮನೆಗೆ ಹೋಗಿ ಅಲ್ಲಿ ಚಹಾ ಕುಡಿದು, ತನ್ನ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೊರಟವನು, ಮರಳಿ ತನ್ನ ಮನೆಗೆ ತಲುಪದೇ ಕಾಣೆಯಾಗಿದ್ದ ಕುರಿತು ಆತನ ಸಹೋದರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕುಟುಂಬಸ್ಥರು, ಸ್ಥಳೀಯರು ಮತ್ತು ಪೊಲೀಸರು ಕಾಣೆಯಾಗಿದ್ದ ವ್ಯಕ್ತಿಯನ್ನು ಹುಡುಕುವ ಯತ್ನ ಮುಂದುವರಿಸಿದ್ದಾಗಲೇ, ಅಂದು ಕಾಣೆಯಾಗಿದ್ದ ಅರವಿಂದ, ಕೆಲ ದಿನಗಳು ಕಳೆದ ಬಳಿಕ ಇದೀಗ ಭಾವಿಕೇರಿ ತೆಪ್ಪದಕೇರಿ – ಕೆರೆಯಲ್ಲಿ ಮೃತ ದೇಹವಾಗಿ ಪತ್ತೆಯಾಗಿದ್ದಾನೆ. ಯಾವುದೋ ವಿಷಯಕ್ಕೆ ಹೋದವನು, ಕೆರೆಯ ದಂಡೆಯ ಬಳಿ ಕಾಲು ಜಾರಿ ಇಲ್ಲವೇ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತ ಪಟ್ಟಿದ್ದಾರೆ ಎಂದು ತನ್ನ ಮಗನ ಸಾವಿನ ಕುರಿತಂತೆ ಮೃತನ ತಾಯಿ ಪೋಲೀಸ್ ದೂರು ನೀಡಿದ್ದು, ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟಿನಲ್ಲಿ ಜೀವನದಲ್ಲಿ ನಾನಾ ಕಾರಣಗಳಿಂದ ನೊಂದಿದ್ದ ವಿವಾಹ ವಿಚ್ಚೇಧಿತನ ಬಾಳಿನ ದುರ್ವಿಧಿ ಕೊನೆಗೂ ಸಾವಿನಲ್ಲಿಯೇ ಅಂತ್ಯ ಕಾಣಿಸಿದಂತಿದೆ. ಘಟನಾ ಸ್ಥಳದಿಂದ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯಕುಮಾರ್ ನಾಯ್ಕ, ರತನ ನಾಯ್ಕ,ಬಾವಿಕೇರಿ ಗ್ರಾಮಸ್ಥರು,ಪೊಲೀಸರಿಗೆ ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button