ಮನೆಯಲ್ಲಿರುವಾಗ ಹೃದಯಾಘಾತದಿಂದ ಕುಸಿದುಬಿದ್ದು ಬ್ಯಾಂಕ್ ಮ್ಯಾನೇಜರ್ ನಿಧನ

ಅಂಕೋಲಾ: ತಾಲೂಕಿನ ಬೊಬ್ರವಾಡ ಕೋಟೆಮನೆ ನಿವಾಸಿ ನಾಗರಾಜ ತುಳಸಿದಾಸ ಶೆಟ್ಟಿ(55) ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ರಸ್ತೆ ಅಪಘಾತವೊಂದರಲ್ಲಿ ಪೆಟ್ಟು ಮಾಡಿಕೊಂಡು, ನಂತರ ಚೇತರಿಕೆಯೊಂದಿಗೆ ಈ ಹಿಂದಿನಂತೆ ಬ್ಯಾಂಕಿಂಗ್ ಸೇವೆಗೆ ಅಣಿಯಾಗಬೇಕೆಂಬ ಕನಸು ಕಂಡಿದ್ದ ಇವರು, ದುರ್ವಿಧಿ ಎಂಬಂತೆ ತಮ್ಮ ಮನೆಯಲ್ಲಿಯೇ ಆಕಸ್ಮಿಕವಾಗಿ ಕುಸಿದು ಹೃದಯಾಘಾತದಿಂದ ಸಾವನ್ನಪಿದರು ಎನ್ನಲಾಗಿದೆ.

ಅಂಕೋಲಾ ಅರ್ಬನ್ ಬ್ಯಾಂಕಿನ ಯಲ್ಲಾಪುರ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಅವರು ಈ ಬ್ಯಾಂಕಿನ ಅಂಕೋಲಾ ಶಾಖೆಯಲ್ಲಿ ಸಹ ಸೇವೆ ಸಲ್ಲಿಸಿ ತಮ್ಮ ಪ್ರಾಮಾಣಿಕ ಸೇವೆಯೊಂದಿಗೆ ಗುರುತಿಸಿಕೊಂಡಿದ್ದರು. ಶಾಂತ ಸ್ವಭಾವದವರಾಗಿದ್ದ ಅವರು ಕನ್ನಡ ವೈಶ್ಯ ಸಮಾಜದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಮಗಳು ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ.

ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ್, ಬ್ಯಾಂಕಿನ ನಿರ್ದೇಶಕ ಮಂಡಳಿ, ಪ್ರಧಾನ ವ್ಯವಸ್ಥಾಪಕರು, ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು, ಗ್ರಾಮಸ್ಥರು, ಇತರರು ಸೇರಿದಂತೆ ನೂರಾರು ಜನರು ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಮೃತ ನಾಗರಾಜ ಶೆಟ್ಟಿ ಅವರು ಅಂಕೋಲಾ ಅರ್ಬನ್ ಬ್ಯಾಂಕಿನ ವ್ಯವಸ್ಥಾಪಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ಸದಾ ಬ್ಯಾಂಕಿನ ಏಳಿಗೆಗಾಗಿ ಕೆಲಸ ಮಾಡುತ್ತಿದ್ದರು ಒಬ್ಬ ಉತ್ತಮ ಸಹೃದಯಿ ಸಿಬ್ಬಂದಿಯನ್ನು ಬ್ಯಾಂಕ್ ಕಳೆದುಕೊಂಡಂತಾಗಿದೆ ಎಂದು ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ್ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version