ಇದೇ ಮೊದಲ ಬಾರಿಗೆ ಉತ್ತರಕನ್ನಡಕ್ಕೆ ಆಗಮಿಸಿದ ಮಂತ್ರಾಲಯ ಶ್ರೀಗಳು: ಭಕ್ತರಿಂದ ಶ್ರೀಗಳ ಪಾದಪೂಜೆ, ಭಿಕ್ಷಾ ಸೇವೆ

ಹೊನ್ನಾವರ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೆಂದ್ರ ತೀರ್ಥ ಸ್ವಾಮೀಜಿ ಉತ್ತರ ಕನ್ನಡಕ್ಕೆ ಪ್ರಥಮ ಭಾರಿಗೆ ಆಗಮಿಸಿದ್ದರು, ಹೊನ್ನಾವರ ತಾಲೂಕಿನ ಶ್ರೀಕ್ಷೇತ್ರ ಮುಗ್ವಾದ ಶ್ರೀ ಸುಬ್ರಹ್ಮಣ್ಯ ದೇವಾಲಯದ ಶ್ರೀ ಮಯೂರ ಸಭಾಭವನದಲ್ಲಿ ಶ್ರೀಗಳ ಪಾದ ಪೂಜೆ, ಭಿಕ್ಷೆ, ಧರ್ಮಸಭೆ ನಡೆಯಿತು.

ಈ ವೇಳೆ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ ಮಕ್ಕಳಿಗೆ ಹಿಂದು ಧರ್ಮದ ಶ್ರದ್ದೆಯ ಮಹತ್ವವನ್ನು ತಿಳಿಸಿಕೊಡಬೇಕು. ಹಿಂದು ಧರ್ಮದ ಜಾಗೃತಿಯಾಗಬೇಕು, ನಮ್ಮ ಸನಾತನ ಹಿಂದು ಧರ್ಮಕ್ಕೆ ಸಮಾನವಾದ ಧರ್ಮ ಇನ್ನೊಂದಿಲ್ಲ. ಅದು ಪರಧರ್ಮದ ಸಹಿಷ್ಣುವಾಗಿದೆ. ಆದರೆ ಪರಕೀಯರು ಹಿಂದು ಧರ್ಮದ ಅಸಹಿಷ್ಣುಗಳಾಗಿದ್ದಾರೆ. ಹಿಂದು ಧರ್ಮ ಗಟ್ಟಿಯಾಗಬೇಕು. ನಮ್ಮ ದೇಶ ಜಗದ್ಗುರುವಾಗಬೇಕು. ಹಿಂದು ಧರ್ಮ ಯಾವಕಾರಣಕ್ಕೂ ಕೂಡ ಅಳಿಯಬಾರದು. ಧರ್ಮಾಂತರವಾಗಬಾರದು ಎಂದರು.

ಶ್ರೀ ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ರಾಮಕಥಾ, ಗೋಸ್ವರ್ಗ, ಗೋಸಂರಕ್ಷಣೆ, ವೈದಿಕ ಸಂರಕ್ಷಣೆ ಇವೆಲ್ಲವೂ ಆದರ್ಶವಾದುದು. ಈ ನೆಲವೆಲ್ಲವೂ ರಾಮಕಥೆಯಿಂದ ಪುನೀತವಾಗಿದೆ ಎಂದು ಶ್ರೀಗಳು ನುಡಿದರು. ಮುಗ್ವಾದ ಶ್ರೀ ರಾಘವೇಶ್ವರ ಭಾರತೀ ಸಂಸ್ಕೃತ ಪಾಠಶಾಲೆಯ ನಿವೃತ್ತ ಪ್ರಾಧ್ಯಾಪಕ ವಿದ್ವಾನ್ ಗಣಪತಿ ಭಟ್ ಬರೆದ ”ಮಂತ್ರಾಲಯ ಪ್ರಭು ಮಹಾಪ್ರಭು” ಪುಸ್ತಕವವನ್ನು ಶ್ರೀಗಳು ಬಿಡುಗಡೆ ಗೋಳಿಸಿದರು.ವಿದ್ವಾನ್ ವಿ.ಜಿ.ಹೆಗಡೆ ಗುಡ್ಗೆ ಪುಸ್ತಕ ಪರಿಚಯ ಮಾಡಿದರು ಪುಸ್ತಕ ರಚನಕಾರರಾದ ವಿದ್ವಾಂನ್ ಗಣಪತಿ ಭಟ್ಟ ಮಾತನಾಡಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿ ಮಠದ ಮಹಿಮೆ ಅಪಾರವಾದುದು. ಪುಸ್ತಕ ಬರೆದುದು ತನ್ನ ಸೌಭಾಗ್ಯದಿಂದ ಒದಗಿ ಬಂದಿದೆ ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷ ವೆಂಕಟರಮಣ ಹೆಗಡೆ ಮಾತನಾಡಿ ನಮ್ಮ ಜಿಲ್ಲೆಗೆ ಸ್ವಾಮೀಜಿಯವರು ಬಂದಿರುವುದು ಪ್ರಥಮ, ಅದರಲ್ಲು ನಮ್ಮ ಊರಿಗೆ ಬಂದಿರುವುದು ನಮ್ಮ ಭಾಗ್ಯ, ವಿದ್ವಾನ್ ಗಣಪತಿ ಭಟ್ ಅವರು ನಮಗೆ ಹೇಳಿದಾಗ ಸಮಾನ ಮನಸ್ಕರು ಸೇರಿ ಸ್ವಾಗತ ಕಮೀಟಿ ಮಾಡಿಕೋಂಡು ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿದೆ ಎಂದರು. ಇದೇ ವೇಳೆ, ರಾಷ್ಟçಪತಿ ಪ್ರಶಸ್ತಿ ಪುರಸ್ಕೃತ ಡಾ. ಮಹಾಮಹೋಪಾಧ್ಯಾಯ ರಾಜಾ ಎಸ್. ಗಿರಿ ಆಚಾರ್ಯ, ವಿದ್ವಾನ್ ಕಡಪ ರಾಘವೇಂದ್ರಾಚಾರ್ಯ, ಡಾ. ಅಕ್ಕಿ ರಾಘವೇಂದ್ರಾಚಾರ್ಯ, ಡಾ. ಎನ್. ವಾದಿರಾಜಾಚಾರ್ಯ, ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ವೇ.ಮೂ. ರಾಮಚಂದ್ರ ಭಟ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ಜಿ.ಶಂಕರ, ಶಿವಾನಂದ ಹೆಗಡೆ ಕಡತೋಕಾ, ವಿದ್ವಾನ್ ವಿ.ಜಿ.ಹೆಗಡೆ ಗುಡ್ಗೆ, ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version