Important
Trending

ತುಕ್ಕುಹಿಡಿದ ಶವದಹನ ಟ್ರೇ: ನೇತಾಡುತ್ತಿದೆ ತಗಡಿನ ಶೀಟ್: ಶವವನ್ನಿಟ್ಟು ಪ್ರತಿಭಟಿಸುವ ಎಚ್ಚರಿಕೆ

ಅಂಕೋಲಾ: ತಾಲೂಕಿನ ಪುರಸಭೆಯ ಕೋಟೆವಾಡದಲ್ಲಿ ಈ ಹಿಂದಿನಿAದಲೂ ಹಿಂದೂ ಸ್ಮಶಾನ ಭೂಮಿ ಒಂದಿದ್ದು,ಇಲ್ಲಿನ ಅವ್ಯವಸ್ಥೆ ಮತ್ತಿತರ ಕಾರಣಗಳಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಕಳೆದ ವರ್ಷ ಬೇಸಿಗೆ ಕಾಲದ ಕೊನೆಯಲ್ಲಿ ಆಕಸ್ಮಿಕವಾಗಿ ಬೀಸಿದ ಭಾರೀ ಗಾಳಿಗೆ ಸ್ಮಶಾನದ ಮುಖ್ಯ ಶೆಡ್ ನ ಮೇಲ್ಚಾವಣಿಯ ತಗಡುಗಳು ಹಾರಿ ಹೋಗಿದ್ದವು. ಮುಂದೆ ಮಳೆಗಾಲ ಆರಂಭವಾಗಲಿದ್ದು,ಮೇಲ್ಚಾವಣಿ ಸೋರಿಕೆಯಿಂದ ನೀರು ಒಳ ನುಗ್ಗಿ ಶವ ಸಂಸ್ಕಾರ ನಡೆಸಲು ತೊಂದರೆಯಾಗುವ ಸಾಧ್ಯತೆ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯಕುಮಾರ ನಾಯ್ಕ ಸಂಬoಧಿತ ಪುರಸಭೆಯ ಗಮನಕ್ಕೆ ತಂದಿದ್ದರು.

ಕೆಲ ದಿನಗಳಲ್ಲಿಯೇ ಮಳೆಗಾಲವೂ ಆರಂಭವಾಗಿ ಶೆಡ್ ನ ಒಳಗಡೆ ಶವ ಸಂಸ್ಕಾರಕ್ಕೂ ತೀವ್ರ ತೊಂದರೆಯಾಗಲಾರoಭಿಸಿತ್ತು. ಈ ಬಾರಿ ಸಾಮಾಜಿಕ ಕಳಕಳಿಯಿಂದ ಧ್ವನಿ ಎತ್ತಿದ್ದ ವಿಜಯಕುಮಾರ ನಾಯ್ಕ ಇಲ್ಲಿನ ಅವ್ಯವಸ್ಥೆಗಳನ್ನು ಮಾಧ್ಯಮದವರ ಮೂಲಕ ಬಿಚ್ಚಿಡುವ ಯತ್ನ ಮಾಡಿದ್ದರಲ್ಲದೇ ಅಗಸ್ಟ್ 15 ರಂದು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು.

ಇದರಿಂದ ಎಚ್ಚೆತ್ತುಕೊಂಡಿದ್ದ ಪುರಸಭೆಯವರು,ತುಕ್ಕು ಹಿಡಿದ ಮೇಲ್ಚಾವಣಿ ಅಡ್ಡ ಪಟ್ಟಿಗಳು,ಮಳೆಗಾಲದ ಜಾರುವಿಕೆ ಮತ್ತಿತರ ಕಾರಣಗಳಿಂದ ತಕ್ಷಣಕ್ಕೆ ಕಾಮಗಾರಿ ಆರಂಭಿಸಲು ತೊಂದರೆಯಾಗುತ್ತದೆ. ಮಳೆ ಮುಗಿದ ತಕ್ಷಣ ವ್ಯವಸ್ಥಿತ ದುರಸ್ಥಿ ಕಾರ್ಯ ನಡೆಸಿಕೊಡುವುದಾಗಿ ಹೇಳಿ ಪ್ರತಿಭಟನೆ ನಡೆಸದಂತೆ ಮನವೊಲಿಸಿದ್ದರಲ್ಲದೇ ,ಸ್ಮಶಾನದ ಆವರಣದಲ್ಲಿ ಬೇಕಾಬಿಟ್ಟಿ ಬೆಳೆದಿದ್ದ ಗಿಡಗಂಟಿಗಳನ್ನು ಅಲ್ಪ ಪ್ರಮಾಣದಲ್ಲಿ ಸ್ವಚ್ಛಗೊಳಿಸಿ ತಾವು ಇಲ್ಲಿನ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು.


ಸ್ವತಃ ಮುಖ್ಯಾಧಿಕಾರಿಗಳೇ ಸ್ಮಶಾನದ ಅವ್ಯವಸ್ಥೆ ಪರಿಶೀಲಿಸಿ,ಸೂಕ್ತ ಕ್ರಮದ ಭರವಸೆ ನೀಡಿದ್ದರು.ಆದರೆ ಅದಾಗಿ 8-10 ತಿಂಗಳು ಕಳೆಯುತ್ತಾ ಬಂದರೂ,ಮುಖ್ಯಾ ಧಿಕಾರಿಗಳಿಗಾಗಲಿ,ಸಂಬoಧಿಸಿದ ಇಂಜಿನಿಯರಿಗಾಗಲಿ ಇಲ್ಲಿನ ಸಮಸ್ಯೆ ಬಗೆಹರಿಸುವ ಇರಾದೆ ಇದ್ದಂತಿಲ್ಲ ಎನ್ನುವ ಆರೋಪ ನಿಜವೆನಿಸತೊಡಗಿದೆ.ಕಳೆದ ಮಳೆಗಾಲ ಹೋಗಿ ಹೊಸ ಮಳೆಗಾಲ ಆರಂಭವಾಗುತ್ತಾ ಬಂದರೂ,ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸದ ಈ ಅಧಿಕಾರಿಗಳು,ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಯ ಎರಡನೇ ಅವಧಿಗೆ ಈ ವರೆಗೂ ಚುನಾವಣೆ ನಡೆಯದಿರುವುದರಿಂದ,ಈ ಅಧಿಕಾರಿಗಳಿಗೆ ತಾವು ಮಾಡಿದ್ದೆ ಕಾರುಬಾರು ಎನ್ನುವಂತಾಗಿದೆ.

ಸ್ಮಶಾನದ ಶೆಡ್ಡಿನಲ್ಲಿರುವ ಶವ ದಹನ ಮಾಡುವ ಟ್ರೇ ಸಹ ತುಕ್ಕು ಹಿಡಿದು ಪಟ್ಟಿಗಳು ಕಿತ್ತು, ಕೈಗೆ ತಾಗಿದರೆ ಸಪ್ಟಿಕ್ ಆಗುತ್ತದೆ ಎಂಬಷ್ಟರ ಮಟ್ಟಿಗೆ ಹಾಳಾಗಿ ಹೋಗಿದೆ.ಮೇಲ್ಚಾವಣಿ ಶೀಟ್ ಗಳು ಕೆಲವು ಹಾರಿಹೋಗಿದ್ದು,ಇನ್ನು ಕೆಲವು ಗುಜರಿ ಮತ್ತಿತರರ ಪಾಲಾಗಿರುವ ಸಾಧ್ಯತೆ ಕೇಳಿ ಬಂದಿದೆ. ಈ ನಡುವೆ ಅರ್ಧ ಕಿತ್ತು ಬಂದ ಸ್ಥಿತಿಯಲ್ಲಿ ತಗಡಿನ ಸೀಟ್ ಒಂದು ನೇತಾಡುತ್ತಿದ್ದು,ಯಾವುದೇ ಕ್ಷಣದಲ್ಲಿ ಬೀಳುವ ಸಾಧ್ಯತೆ ಇದ್ದು,ಕೆಳಗಡೆ ನಿಂತವರ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇದೆ.

ಇಲ್ಲಿನ ಅವ್ಯವಸ್ಥೆ ಕುರಿತು ಮತ್ತೆ ಧ್ವನಿಯೆತ್ತಿರುವ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ, ಸ್ಮಶಾನದ ಅಭಿವೃದ್ಧಿ ಮಾಡದೇ ಸುಳ್ಳು ಭರವಸೆ ನೀಡುತ್ತ, ಹಾರಿಕೆ ಉತ್ತರ ಕೊಡುವ ಪುರಸಭೆಯ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈಗಲಾದರೂ ಸಾರ್ವಜನಿಕ ಹಿತದೃಷ್ಟಿಯಿಂದ ಸಂಬAಧಿತ ಪುರಸಭೆಯವರು ಇಲ್ಲಿನ ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ,ಮುಂದಿನ ದಿನಗಳಲ್ಲಿ ಪುರಸಭೆ ಎದುರೇ ಶವವನ್ನಿಟ್ಟು ಪ್ರತಿಭಟಿಸಬೇಕಾದ ಅನಿವಾರ್ಯತೆ ಬಂದೀತೂ ಎಂದು ಎಚ್ಚರಿಸಿದ್ದಾರೆ.

ಇಲ್ಲಿ ಸ್ಮಶಾನದ ಆವರಣ ಎನ್ನುವುದು ಕಸ ತಾಜ್ಯಗಳ ಡಂಪ್ ಯಾರ್ಡ್ ನಂತೆ ಇದ್ದು, ಇಲ್ಲಿ ಯಾರ್ಯಾರೋ ಬೇಕಾ ಬಿಟ್ಟಿಯಾಗಿ ತ್ಯಾಜ್ಯ ತಂದು ಸುರಿದರೂ ಕೇಳುವವರೇ ಇಲ್ಲ ಎನ್ನುವಂತಾಗಿದೆ. ಇಷ್ಟೇ ಅಲ್ಲದೇ ರಸ್ತೆಯಂಚಿನ ವಿದ್ಯುತ್ ಕಂಬಗಳಿಗೆ ಸರಿಯಾಗಿ ಇರದ ದೀಪಗಳು, ಸ್ನಾನಗೃಹ ಮತ್ತಿತರೆಡೆ ಇರುವ ನೀರು ಹಾಗೂ ಶುಚಿತ್ವ ಕೊರತೆ, ಅಡ್ಡಲಾಗಿ ಬಿದ್ದಿರುವ ದೊಡ್ಡ ಮರ ಹಾಗೂ ಅವಕ್ಕೆ ಕಟ್ಟಿರುವ ಹಾಗೂ ಸ್ಮಶಾನದಲ್ಲಿ ಇಟ್ಟಿರುವ ಕೆಲ ಬಾನಾಮತಿಯಂಥ ಕೆಲ ಪರಿಕರಗಳು ಎಂಥವರೂ ಕ್ಷಣಕಾಲ ಬೆಚ್ಚುವಂತೆ ಮಾಡುತ್ತಿದೆ.

ಒಟ್ಟಿನಲ್ಲಿ ಅವ್ಯವಸ್ಥೆಯ ಆಗರವಾಗಿರುವ ಹಿಂದೂ ಸ್ಮಶಾನ ಭೂಮಿಗೆ ಮುಕ್ತಿಧಾಮ ಎನ್ನುವ ಹೆಸರಿದ್ದರೂ, ಇಲ್ಲಿನ ಹತ್ತಾರು ಸಮಸ್ಯೆಗಳಿಗೆ ಮುಕ್ತಿ ನೀಡುವವರಾರು ಎನ್ನುವದೇ ಪ್ರಶ್ನೆಯಾಗಿದ್ದು,ಪುರಸಭೆಯ ಆಡಳಿತ ಅಧಿಕಾರಿಗಳು ಆಗಿರುವ ಕುಮಟಾ ಉಪವಿಭಾಗಾಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ಕೂಡಲೇ ಗಮನ ಹರಿಸಿ,ಜಿಡ್ಡು ಗಟ್ಟಿರುವ ಪುರಸಭೆ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುವರೇ ಕಾದು ನೋಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button