![](http://i0.wp.com/vismaya24x7.com/wp-content/uploads/2024/05/badukina-shibira.jpg?fit=1280%2C720&ssl=1)
ಭಟ್ಕಳ: ಸಮುದಾಯ ಬದುಕಿನ ಶಿಬಿರ ಬದುಕುವ ಶಿಕ್ಷಣ ನೀಡಲಿದೆ ಎಂದು ಭಟ್ಕಳ ಏಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ್ ಹೇಳಿದರು. ಅವರು ಭಟ್ಕಳ ತಾಲೂಕಿನ ಹದ್ಲೂರಿನ ಶ್ರೀ ದುರ್ಗಾ ಪರಮೇಶ್ವರಿ ಗಿರಿಜನ ಯುವಕ ಸಂಘದ ರಂಗಮಂದಿರದಲ್ಲಿ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯ ಭಟ್ಕಳ ಇವರು ಆಯೋಜಿಸಿದ್ದ ಮೂರು ದಿನಗಳ ಸಮುದಾಯ ಬದುಕಿನ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಶಿಬಿರವು ತಾಳ್ಮೆ, ಸಹನೆ, ಹೊಂದಾಣಿಕೆ, ನಾಯಕತ್ವ ಗುಣಗಳನ್ನು ಕಲಿಸುವುದರ ಜೊತೆಗೆ ಪರಿಸರದೊಂದಿಗೆ ಬದುಕಲು ಕಲಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಊರಿನ ಹಿರಿಯರಾದ ಕೃಷ್ಣಾ ಮಾಸ್ತಿ ಗೊಂಡ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಭಟ್ಕಳದ ರಾಜ್ಯ ಪರಿಷತ್ತ ಸದಸ್ಯರಾದ ಪ್ರಕಾಶ ಶಿರಾಲಿ, ಹದ್ಲೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜೇಶ ನಾಯ್ಕ, ಕೋಣಾರ ಗ್ರಾಮ ಪಂಚಾಯತದ ಸದಸ್ಯರಾದ ನಾಗರತ್ನಾ ನಾಯ್ಕ, ಶ್ರೀ ದುರ್ಗಾ ಪರಮೇಶ್ವರಿ ಗಿರಿಜನ ಯುವಕ ಸಂಘದ ಅಧ್ಯಕ್ಷರಾದ ಗಣೇಶ ಗೊಂಡ, ಊರಿನ ಪ್ರಮುಖರಾದ ಸುಕ್ರು ಗೊಂಡ, ಸಣ್ಣು ಗೊಂಡ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ ವಿರೇಂದ್ರ ವಿ. ಶ್ಯಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಿಕ್ಷಣಾರ್ಥಿಗಳಾದ ಹೇಮಂತ ದೇವಾಡಿಗ ಸ್ವಾಗತಿಸಿದರು, ಅನುಶ್ರೀ ಮತ್ತು ದಿವ್ಯಾ ನೀರೂಪಿಸಿದರು, ನಿರ್ಮಲಾ ಮೊಗೇರ ವಂದಿಸಿದರು. ಹಾಗೂ ಪ್ರಿಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು.
ನಂತರ ನಡೆದ ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಜನಪದ ಕಲಾವಿದರಾದ ದಾಮೋದರ ಗೊಂಡ ಇವರಿಂದ ಜನಪದ ಕಲೆಯ ಶ್ರೀಮಂತಿಕೆಯ ಪರಿಚಯ ಮತ್ತು ಪ್ರಾತ್ಯಕ್ಷಿಕೆ ಎನ್ನುವ ವಿಷಯದ ಮೇಲೆ, ಶ್ರೀ ಕೃಷ್ಣ ಮಾಸ್ತಿ ಗೊಂಡ ಇವರಿಂದ ಗೊಂಡ ಜನಾಂಗದ ಸಾಮಾಜಿಕ ಮತ್ತು ಸಾಂಸ್ಕಂತಿಕ ಜೀವನದ ಪರಿಚಯ ಎನ್ನುವ ವಿಷಯದ ಮೇಲೆ ಉಪನ್ಯಾಸಗಳು ನಡೆದವು.
ಯಕ್ಷಗಾನ ಕಲಾವಿದ ಪ್ರಸಾದ ಭಟ್ಕಳ ಇವರ ಪರಿಕಲ್ಪನೆಯಲ್ಲಿ ಪ್ರಶಿಕ್ಷಣಾರ್ಥಿಗಳಿಂದ ತಾಳ ಮದ್ದಳೆಯ ಯುಗ್ಮ ಸಂವಾದ ನಡೆಯಿತು. ಪ್ರಶಿಕ್ಷಣಾರ್ಥಿಗಳಿಂದ ಮನೋರಂಜನೆಯ ಕಾರ್ಯಕ್ರಮ, ಹದ್ಲೂರಿನ ಶ್ರೀ ದುರ್ಗಾ ಪರಮೇಶ್ವರಿ ಗಿರಿಜನ ಯುವಕ ಸಂಘದ ಸದಸ್ಯರಿಂದ ಜನಪದ ಕಲಾ ವೈಭವ ಮತ್ತು ರಾಮಚಂದ್ರ ನಾಯ್ಕ ಇವರ ತಂಡದಿಂದ ಭಜನಾ ಕುಣಿತ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪ್ರಾಂಶುಪಾಲ ಡಾ ವಿರೇಂದ್ರ ವಿ. ಶ್ಯಾನಭಾಗ ಮತ್ತು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಭಟ್ಕಳದ ರಾಜ್ಯ ಪರಿಷತ್ತ ಸದಸ್ಯರಾದ ಪ್ರಕಾಶ ಶಿರಾಲಿ ಅವರನ್ನು ಊರಿನ ನಾಗರಿಕರು ಸನ್ಮಾನಿಸಿದರು.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ, ಭಟ್ಕಳ