ಅಲಗೇರಿ ವಿಮಾನ ನಿಲ್ದಾಣ ಯೋಜನೆಗೆ ಸ್ಥಳಿಯರಿಂದ ವಿರೋಧ : ಹೋರಾಟ ಸಮಿತಿ ಅಸ್ತಿತ್ವಕ್ಕೆ

[sliders_pack id=”3491″]

ಅಂಕೋಲಾ : ಪ್ರಸ್ತಾವಿತ ಅಲಗೇರಿ ವಿಮಾನ ನಿಲ್ದಾಣ ಯೋಜನೆ ಅನಿಷ್ಠಾನಕ್ಕೆ ಸರ್ಕಾರದ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರುತ್ತಿರುವ ನಡುವೆಯೇ, ಸ್ಥಳೀಯರಿಂದ ಭಾರಿ ವಿರೋದ ವ್ಯಕ್ತವಾಗುವ ಲಕ್ಷಣಗಳು ಕಂಡುಬರುತ್ತಿವೆ. ‘ಸಣ್ಣಮ್ಮ ದೇವಿ ನಾಗರಿಕ ವಿಮಾನ ನಿಲ್ದಾಣ ವಿರೋಧಿ ಹೋರಾಟ ಸಮಿತಿಯು ಅಲಗೇರಿಯ ಈಶ್ವರ ದೇವಸ್ಥಾನದಲ್ಲಿ ಶುಕ್ರವಾರ ಅಸ್ತಿತ್ವಕ್ಕೆ ಬಂದಿದ್ದು, ಸಭಾಕಾರ್ಯಕ್ರಮಕ್ಕೂ ಮಹಾದೇವನಿಗೆ ಪೂಜಿಸಿ, ಪ್ರಾರ್ಥಿಸಲಾಯಿತು.

ಭೂಮಿಯನ್ನು ವಶಪಡಿಸಿಕೊಳ್ಳಲು ಬಿಡಲ್ಲ: ಗುಂಡೇಟು ಎದುರಿಸಲು ಸಿದ್ಧ

ಪದ್ಮಶ್ರೀ ಸುಕ್ರಜ್ಜಿ : ದೀಪ ಬೆಳಗುವ ಮೂಲಕ ಸರಳ ಕಾರ್ಯಕ್ರಮ ಉದ್ಗಾಟಿಸಿದ ಪದ್ಮಶ್ರೀ ಪುರಸ್ಕøತೆ ಬಡಗೇರಿಯ ಸುಕ್ರಜ್ಜಿ ಮಾತನಾಡಿ, ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣ ಯೋಜನೆಗೆ ತೀವ್ರ ವಿರೋಧವಿದೆ. ನಮ್ಮ ಭಾಗದ ಭೂಮಿಯನ್ನು ಕೊಡಲಾರೆವು. ಸರ್ಕಾರ ಹಟಕ್ಕೆ ಬಿದ್ದು ನಮ್ಮ ಭೂಮಿಯನ್ನು ವಶಪಡಿಸಿಕೊಳ್ಳುವುದ್ದಿದ್ದರೆ ನಮಗೆ ಗುಂಡೇಟು ನೀಡಲಿ ನಾವು ಸಾಯುವುದ್ದಿದ್ದರೆ ಇಲ್ಲಿಯೇ ಸಾಯುತ್ತೇವೆ ಎಂದು ಆಕ್ರೋಶಭರಿತರಾಗಿ ನುಡಿದರು.

ಶಿವರಾಮ ಸವಾಲು : ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವಕರ ಸಂಘದ ನೋಂದಣಿ ಪತ್ರ ಬಿಡುಗಡೆ ಮಾಡಿ ಮಾತನಾಡಿ, ವಿಮಾನ ನಿಲ್ದಾಣ ಮತ್ತಿತರ ಅಭಿವೃದ್ದಿ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಪರಂಪರಾಗತವಾಗಿ ಬಿತ್ತಿ ಬೆಳೆದುಕೊಂಡು ಬಂದ ಕೃಷಿಭೂಮಿಯನ್ನು ಆಪೋಶನಾ ತೆಗೆದುಕೊಳ್ಳುವ ಯೋಜನೆಗಳನ್ನು ವಿರೋಧಿಸಲೇ ಬೇಕಾಗುತ್ತದೆ. ಕಳೆದ ಬಾರಿಯ ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಸರ್ಕಾರಕ್ಕೆ ಅಂಕೋಲಾ ಹುಬ್ಬಳ್ಳಿ ರೈಲು ಮಾರ್ಗದ ಅನುಷ್ಠಾನಕ್ಕೆ ಇಚ್ಛಾಶಕ್ತಿ ಇದೆಯೇ ಎಂದು ಪ್ರಶ್ನಿಸಿದ್ದೆ; ಈ ಬಾರಿ ಇನ್ನೊಂದು ಪ್ರಮುಖ ಪ್ರಶ್ನೆ ಇಡುತ್ತಿರುವೆ, ವಿಮಾನ ಹಾರಿಸುವುದಕ್ಕೂ ಮೊದಲು ಜನಸಾಮಾನ್ಯರು ಓಡಾಡುವ ಜಿಲ್ಲೆಯ ಎಲ್ಲಾ ರಸ್ತೆಗಳ ಅಭಿವೃದ್ದಿ ಮಾಡಿ ತೋರಿಸುವಂತೆ ಸವಾಲೆಸೆದರು. ಮುಂದುವರಿದು ಮಾತನಾಡಿದ ಅವರು ಕಾನೂನು ರೀತ್ಯಾ ಕೃಷಿ ಜಮೀನು ಉಳಿವಿಗಾಗಿ ನಿಮ್ಮ ಜೊತೆ ಹೋರಾಟದಲ್ಲಿ ನಾನಿದ್ದೇನೆ ಎಂದರು.

ಕಾರ್ಯಕ್ರಮ : ಸಮಿತಿಯ ಉಪಾಧ್ಯಕ್ಷ ವಿನೋದ ಆರ್ ಗಾಂವಕರ ಸ್ವಾಗತಿಸಿದರು. ಕಾರ್ಯದರ್ಶಿ ಮಹೇಶ ಗೌಡ ಬಡಗೇರಿ ಪ್ರಾಸ್ತಾವಿಕ ಮಾತನಾಡಿದರು. ಸಮಿತಿಯ ಅಧ್ಯಕ್ಷ ಸುರೇಶ ಆರ್ ನಾಯಕ ಮಾತನಾಡಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ, ಅನಿವಾರ್ಯವಾದರೆ ಜೈಲೂ ಶಿಕ್ಷೆಯನ್ನು ಅನುಭವಿಸಲು ಸಿದ್ದರಾಗೋಣ ಎಂದರು. ಪ್ರಮುಖರಾದ ಲಕ್ಷ್ಮಣ ನಾಯಕ ಸಾಂಧರ್ಭಿಕವಾಗಿ ಮಾತನಾಡಿದರು. ಸಮಿತಿಯ ಸದಸ್ಯ ಗಣೇಶ ಚಿನ್ನಾ ನಾಯ್ಕ ವಂದಿಸಿದರು. ಸಹಕಾರ್ಯದಶಿ ದಿನೇಶ ಡಿ. ನಾಯ್ಕ ನಿರೂಪಿಸಿದರು. ವಿವಿಧ ಸಮಾಜದ ಪ್ರಮುಖರಾದ ರಾಮಚಂದ್ರ ನಾಯಕ ಬೇಲೇಕೇರಿ, ನಾಗೇಶ ಆಗೇರ, ಕಾಮೇಶ್ವರ ಗೌಡ, ಕಿರಣ ಆಚಾರಿ, ಶ್ರೀಕಾಂತ ನಾಯ್ಕ, ನಾಗೇಶ ಡಿ. ಗಾಂವಕರ ಮತ್ತಿತರರು ವೇದಿಕೆಯಲ್ಲಿ ಉಪಸ್ಥತರಿದ್ದರು. ಸಮಿತಿಯ ಪದಾಧಿಕಾರಿಗಳು ಮತ್ತು ಊರನಾಗರಿಕರು ಸಹಕರಿಸಿದರು.

ಬಡಗೇರಿ, ಭಾವಿಕೇರಿ, ಬೇಲೇಕೇರಿ, ಖಂಡುಗದ್ದೆ, ಹೊಸಭಾಗ ಹಾಗೂ ಅಲಗೇರಿ ಸುತ್ತಮುತ್ತಲ ಮಜರೆಗಳ ನೂರಾರು ರೈತರು, ಮಹಿಳೆಯರು ಮತ್ತು ಊರ ನಾಗರಿಕರು ಪಾಲ್ಗೊಂಡಿದ್ದರು

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version