ದೇವಳಮಕ್ಕಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ : ಶಾಸಕಿ ರೂಪಾಲಿ ನಾಯ್ಕ

ಕಾರವಾರ : ತಾಲೂಕಿನ ದೇವಳಮಕ್ಕಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ಶಾಸಕಿ ರೂಪಾಲಿ ನಾಯ್ಕ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಇದೇ ವೇಳೆ ಗ್ರಾಮಪಂಚಾಯತ್ ವ್ಯಾಪ್ತಿಯ ಕೆಲವೆಡೆ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು.

ಕೋಟಿ ಮೊತ್ತದ ಕಾಮಗಾರಿ : ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ(ಜಿ.ಪಂ. ಉತ್ತರಕನ್ನಡ) ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮಪಂಚಾಯತದ ಬಣಗೆ ರಸ್ತೆ ಸುಧಾರಣೆ ಅಂದಾಜು ಮೊತ್ತ 105.00 ಲಕ್ಷ ರೂ.ಗಳಲ್ಲಿ 1.75 ಕಿ.ಮೀ ಉದ್ದದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕಿ ರೂಪಾಲಿ ನಾಯ್ಕ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ-ಸೇತುವೆ-ಕ್ರೀಡಾಂಗಣ ಮತ್ತಿತರ ಅಭಿವೃದ್ದಿ ಕಾರ್ಯಗಳಿಗೆ ನನ್ನದೇ ಆದ ಕನಸುಗಳಿದ್ದು ಕ್ಷೇತ್ರದ ಸಂಪೂರ್ಣ ಅಭಿವೃದ್ದಿ ದೃಷ್ಠಿಯಿಂದ ಸರ್ವರ ಸಹಕಾರದ ಅಗತ್ಯತೆ ಇದೆ. ನಮ್ಮ ಸರ್ಕಾರವು ಸಹ ಗ್ರಾಮೀಣ ಭಾಗ ಸೇರಿದಂತೆ ರಾಜ್ಯದ ಜನತೆಯ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ,ಅಂತೆಯೇ ಒಟ್ಟಾರೆಯಾಗಿ ದೇವಳಮಕ್ಕಿ ಗ್ರಾ.ಪಂ ವ್ಯಾಪ್ತಿಯಲ್ಲಿಯೂ 4.5 ಕೋಟಿ ರೂ. ಒದಗಿಸಲಾಗಿದೆ ಎಂದರು. ಗ್ರಾ.ಪಂ ಪಿ.ಡಿ.ಓ, ಪ್ರಮುಖರಾದ ದೇವಿದಾಸ ಬೇಳುರಕರ್, ಸುಭಾಷ ಗುನಗಿ, ಮತ್ತಿತರರು ಉಪಸ್ಥತರಿದ್ದರು.

ಕಾರ್ಯಕರ್ತರ ಸಭೆ : ದೇವಳಮಕ್ಕಿ ಗ್ರಾ.ಪಂ ವ್ಯಾಪ್ತಿಯ ನೈತಿಸಾವರ, ಶಿರವೆ, ನಗೆಕೋವೆ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಸಭೆ ಕರೆದು ಪಕ್ಷದ ಹಿರಿ-ಕಿರಿಯ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿದ ಶಾಸಕಿ ರೂಪಾಲಿ ನಾಯ್ಕ ಪಕ್ಷ ಸಂಘಟನೆಯಲ್ಲಿ ಮತ್ತಷ್ಟು ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವ ಪೂರ್ಣ ಯೋಜನೆಗಳು ಪ್ರತಿಯೊಬ್ಬರ ಮನೆ-ಮನ ತಲುಪಲು ಕಾರ್ಯಕರ್ತರ ಸಾರ್ಥಕ ಸೇವೆ ಅವಶ್ಯವಿದೆ ಎಂದರು.

ವಿವಿಧ ಕಾಮಗಾರಿಗಳಿಗೆ ಚಾಲನೆ : ದೇವಳಮಕ್ಕಿ ಗ್ರಾ.ಪಂ ವ್ಯಾಪ್ತಿಯ ಧಾಕುಮಳ ರಾಜೇಂದ್ರ ಗಂಗಾಧರ ಹುಲಸ್ವಾರ ಮನೆ ಹತ್ತಿರ ಅಂದಾಜು 35ಲಕ್ಷ ರೂ. ಮೊತ್ತದ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿ, ಕೋವೆ ಗ್ರಾಮದ ಕುಷ್ಠ ವಾಗು ಹುಲಸ್ವಾರ ಮನೆ ಹತ್ತಿರ ಅಂದಾಜು 20ಲಕ್ಷ ರೂ. ಮೊತ್ತದ ರಸ್ತೆ ನಿರ್ಮಾಣ, ಗ್ರಾ.ಪಂ ವ್ಯಾಪ್ತಿಯ ಮುಖ್ಯ ರಸ್ತೆಯಿಂದ ಗಣೇಶ ಪಾಟೀಲ್ ಮನೆಯವರೆಗೆ ಅಂದಾಜು 25ಲಕ್ಷ ರೂ. ಮೊತ್ತದ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಬಂಧಿಸಿದ ಗುತ್ತಿಗೆದಾರರು, ಬಿಜೆಪಿ ಪಕ್ಷದ ಹಿರಿ-ಕಿರಿಯ ಮುಖಂಡರು, ಕಾರ್ಯಕರ್ತರು, ದೇವಳಮಕ್ಕಿ ಗಾ.ಪಂ ವ್ಯಾಪ್ತಿಯ ಮಾಜಿ ಜನಪ್ರತಿನಿಧಿಗಳು, ಸಾರ್ವಜನಿಕ ಪ್ರಮುಖರು ಮತ್ತಿತರರು ಪಾಲ್ಗೊಂಡಿದ್ದರು.

ಲಾಕ್-ಡೌನ್ ಅವಧಿಯಲ್ಲಿ ತನ್ನದೇ ಆದ ನೆಲೆಯಲ್ಲಿ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿದ್ದ ಶಾಸಕಿ ರೂಪಾಲಿ ನಾಯ್ಕ ಲಾಕ್-ಡೌನ್ ತೆರವಿನ ನಂತರ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ತನ್ನ ಇಚ್ಛಾ ಶಕ್ತಿ ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಕೆಲಸ ಎಂದು ಹಲವು ಜನತೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕಿಯವರು ಕಾರವಾರ-ಅಂಕೋಲಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ತನ್ನನ್ನು ತೊಡಗಿಸಿ ಕೊಳ್ಳುವಂತಾಗಲಿ ಎನ್ನುವುದು ಪ್ರಜ್ನಾವಂತರ ಅನಿಸಿಕೆಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Exit mobile version