Follow Us On

Google News
Focus News
Trending

ಪೂಜಗೇರಿ ವಿನಾಯಕ ಗಾಂವಕರ ವಿಧಿವಶ: ಸಂಸದ ಕಾಗೇರಿ ಸೇರಿದಂತೆ ಹಲವು ಗಣ್ಯರಿಂದ ಸಂತಾಪ ಸೂಚನೆ

ಅಂಕೋಲಾ : ತಾಲೂಕಿನ ಪೂಜಗೇರಿಯ ಸಾಮಾಜಿಕ ಕಾರ್ಯಕರ್ತ ಮತ್ತು ಹಿರಿಯ ಮುಖಂಡ ವಿನಾಯಕ ಬೀದಿ ಗಾಂವಕರ (ಪಡ್ತಿ )ಜುಲೈ 18 ರ ಗುರುವಾರ ವಿಧಿವಶರಾದರು. ಇತ್ತೀಚೆಗೆ ಅವರನ್ನು ಅತಿಯಾಗಿ ಕಾಡಿದ್ದ ರೋಗ ಲಕ್ಷಣಗಳು ಉಲ್ಬಣಗೊಂಡು ಕೊನೆಯ ಹಂತದಲ್ಲಿ ಮನೆಯಲ್ಲಿಯೇ ಹಾಸಿಗೆ ಹಿಡಿದು,ಕುಟುಂಬಸ್ಥರಿಂದ ಉಪಚಾರಕ್ಕೆ ಒಳಗಾಗಿದ್ದರು. ಪ್ರಗತಿಪರ ಕೃಷಿಕರಾಗಿ,ಸಾಮಾಜಿಕ ಕಾರ್ಯಕರ್ತರಾಗಿ,ಸಾರ್ವಜನಿಕ ಬೀದಿ ಬೀರ ದೇವಸ್ಥಾನ ಸೇರಿದಂತೆ ಊರಿನ ಇತರ ಕೆಲ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಬಂಡಿಹಬ್ಬ ಮತ್ತಿತರ ಧಾರ್ಮಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು,ಮತ್ತಷ್ಟು ಸೇವೆ ಮಾಡುವ ಇಂಗಿತ ಹೊಂದಿದ್ದರು.

ಪೂಜಗೇರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬರಲು ಹಾಗೂ ಊರಿನ ಸ್ಮಶಾನ , ರಸ್ತೆ ಮತ್ತಿತರ ಅಭಿವೃದ್ಧಿಗೂ ಇವರ ಪ್ರಯತ್ನ ಅಪಾರವಾಗಿತ್ತು. ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದ ಇವರು ಶೆಟಗೇರಿ ಗ್ರಾಮ ಪಂಚಾಯತ ಸದಸ್ಯರಾಗಿ ಸೇವೆ ಸಲ್ಲಿಸಿದ್ದಲ್ಲದೇ, ಸಂಘ ಪರಿವಾರ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡು, ಸ್ಥಳೀಯ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಕೆಲವರ ಗೆಲುವಿಗೂ ತಮ್ಮದೇ ಆದ ಕಾಣಿಕೆ ನೀಡಿದ್ದರು. ಒಮ್ಮೊಮ್ಮೆ ತಮ್ಮ ಹಾಸ್ಯ ಚಟಾಕಿಗಳ ಮೂಲಕ ಹಲವರನ್ನು ನಗೆಗಡಲಲ್ಲಿ ತೇಲಿಸಿದರೆ,ತಮ್ಮ ನೇರ ನಿಷ್ಠುರ ನಡೆಯ ಮೂಲಕ ರಾಜಕೀಯ ಮತ್ತಿತರ ಕಾರಣಗಳಿಂದ ಕೆಲವರ ವಿರೋಧವನ್ನು ಕಟ್ಟಿಕೊಂಡಿದ್ದರು.

ಮೃತರು, ಮಗ, ಸೊಸೆ, ಮಗಳು,ಅಳಿಯ , ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ತೊರೆದಿದ್ದಾರೆ. ಮೃತರ,ಪುತ್ರ ಸಂಜು ಗಾಂವಕರ, ತನ್ನ ತಂದೆಯ ಚಿತೆಗೆ ಅಗ್ನಿಸ್ಪರ್ಶಮಾಡುವ ಮೂಲಕ ಗುರುವಾರ ರಾತ್ರಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಊರಿನ ಹಾಗೂ ಇತರೆಡೆಯ ನೂರಾರು ಜನ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ಉತ್ತರ ಕನ್ನಡ ಕ್ಷೇತ್ರದ ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಂಸದ ಅನಂತ ಕುಮಾರ ಹೆಗಡೆ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಮಾಜಿ ಸಚಿವ ಆನಂದ ಅಸ್ನೋಟಿಕರ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಸ್ಥಳೀಯ ಪ್ರಮುಖರಾದ ಅರುಣ ನಾಡಕರ್ಣಿ,ಗಣೇಶ್ ಕುಡ್ತಲಕರ ಸೇರಿದಂತೆ ಹಲವರು ವಿನಾಯಕ ಗಾಂವಕರ ಇವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button