ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶಿಕ್ಷಣ ಸಚಿವರ ಭೇಟಿ: ಪ್ರಮುಖ ಬೇಡಿಕೆ ಕುರಿತು ಮಾಹಿತಿ

ಭಟ್ಕಳ: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು‌ಬಂಗಾರಪ್ಪ ಭಟ್ಕಳ ಭೇಟಿಯ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಮೋಹನ್ ನಾಯ್ಕ ಶಿಕ್ಷಕರನ್ನೊಡಗೂಡಿ ಸಚಿವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅವರು 2017ರ ವೃಂದ ಮತ್ತು ನೇಮಕಾತಿ ನಿಯಮ ಬದಲಾವಣೆ, ಪಿ.ಎಸ್‌.ಟಿ ಶಿಕ್ಷಕರಿಗೆ ಅರ್ಹತೆ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡುವುದು. ಮುಖ್ಯಧ್ಯಾಪಕರ ಹುದ್ದೆಗೆ ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ ನೀಡುವುದು. ವರ್ಗಾವಣೆ ಸಮಯದಲ್ಲಿ 6-7ನೇ ತರಗತಿಯ ಖಾಲಿ ಹುದ್ದೆಗೆ ಪಿ.ಎಸ್‌.ಟಿ ಶಿಕ್ಷಕರಿಗೆ ಅವಕಾಶ ನೀಡುವುದು ಮುಂತಾದ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಸಚಿವರಿಗೆ ಮನದಟ್ಟು‌ ಮಾಡಿಸುವ ಪ್ರಯತ್ನ ಮಾಡಿದರು.

ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವರು ಇವೆಲ್ಲಾ ತಮ್ಮ ಗಮನಕ್ಕಿದ್ದು ಆಯುಕ್ತರ ಬಳಿ ಚರ್ಚಿಸಿ ಶಿಕ್ಷಕರಿಗೆ ಅನುಕೂಲವಾಗುವಂತೆ ನಿಯಮ ತಿದ್ದುಪಡಿ ಮಾಡುತ್ತೇವೆ ಎಂಬ ಭರವಸೆ ನೀಡಿದರು. ಏಳನೇ ವೇತನ ಆಯೋಗ ನಮ್ಮ ಸರ್ಕಾರ ಹೇಳಿದಂತೆ ನಡೆದುಕೊಂಡಿದೆ. ಮುಂದೆ ಆರೋಗ್ಯ ಸಂಜೀವಿನಿ ಹಾಗೂ N.P.S ಅನ್ನು O.P.S ಮಾಡುವಂತಹದ್ದು ನಮ್ಮ ಸರ್ಕಾರದ ಮುಂದಿದೆ ಎಂದು ತಿಳಿಸಿದರು ಹಾಗೂ ಅನುದಾನಿತ ಶಾಲೆಯ ಶಿಕ್ಷಕರ ನೇಮಕಾತಿ 2020ರ ಪೂರ್ವದಲ್ಲಿ ಇದ್ದ ಖಾಲಿ ಹುದ್ದೆಯ ಭರ್ತಿಗೆ ಅವಕಾಶ ನೀಡಲು ಆದೇಶ ಮಾಡಲಾಗಿದೆ ಎಂದು ಹೇಳಿದರು. ಹಂತ ಹಂತವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು. ರಾಜ್ಯ ಪರಿಷತ್ ಸದಸ್ಯರಾದ ಶ್ರೀ ಪ್ರಕಾಶ ಶಿರಾಲಿ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಮಸ್ಯೆಯ ಬಗ್ಗೆ ತಿಳಿಸಿದಾಗ ಪರಿಹರಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೌಕರ ಸಂಘದ ಅಧ್ಯಕ್ಷರಾದ ಶ್ರೀ ಮೋಹನ್ ನಾಯ್ಕ ರಾಜ್ಯಪರಿಷತ್ ಸದಸ್ಯರಾದ ಶ್ರೀ ಪ್ರಕಾಶ್ ಶಿರಾಲಿ, ಸದಸ್ಯರಾದ ಶ್ರೀ ಕೇಶವ್ ಮೊಗೇರ, ಶ್ರೀ ಸಿ.ಡಿ ಪಡುವಣಿ, ಶಿಕ್ಷಕರಾದ ಶ್ರೀ ರಾಮಗೌಡ ,ಶ್ರೀ ಶಂಕರ್ ನಾಯ್ಕ್ ಶ್ರೀಮತಿ ಶ್ವೇತಾ ನಾಯ್ಕ, ಶ್ರೀ ಹರೀಶ್ ಗೌಡ ,ಶ್ರೀ ಪ್ರವೀಣ್ ರಾಥೋಡ್, ಶ್ರೀ ಮಹೇಶ್ ನಾಯ್ಕ ಇತರರು ಹಾಜರಿದ್ದರು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Exit mobile version