Follow Us On

WhatsApp Group
Big News
Trending

ರಾಜು ತಾಂಡೇಲರಿಗೆ ನುಡಿನಮನ – ಅಭಿಮಾನ ತೋರಣ.

ಅಗಲಿದ ಮೀನುಗಾರ ಮುಖಂಡನ ವ್ಯಕ್ತಿತ್ವ ಸ್ಮರಿಸಿ,ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಗಣ್ಯರು ಮತ್ತು ಸಮಾಜ ಬಾಂಧವರು

ಕಾರವಾರ: ರಾಜಕೀಯದ ಹೊರತಾಗಿ ಪಕ್ಷಾತೀತವಾಗಿ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ, ಸಮಾಜಮುಖಿ ಕಾರ್ಯಗಳ ಜೊತೆಗೆ ವಿವಿಧ ಸಮಾಜದೊಂದಿಗೆ ವಿಶೇಷ ಸಹಕಾರ ಮನೋಭಾವ ಹೊಂದಿದ್ದ ರಾಜು ತಾಂಡೇಲ್ ನಿಧನ ಅತ್ಯಂತ ದುಃಖಕರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮತ್ತು ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಹೇಳಿದರು.

ಅವರು ಬುಧವಾರ ಪಟ್ಟಣದ ಆಜ್ವಿ ಹೋಟೆಲ್ ಸಭಾಭವನದಲ್ಲಿ ಸಮಸ್ತ ಮೀನುಗಾರ ಸಮುದಾಯ, ರಾಜು ತಾಂಡೇಲ್ ಹಿತೈಷಿಗಳು, ಸ್ನೇಹಿತರು ಮತ್ತು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆಯೋಜಿಸಿದ್ದ ಅಮರ ಮೀನುಗಾರ ರಾಜು ತಾಂಡೇಲರಿಗೆ ನುಡಿನಮನ – ಅಭಿಮಾನ ತೋರಣ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜು ತಾಂಡೇಲ್ ಅವರು ಸಮಾಜದಲ್ಲಿ ಅಪರೂಪದ ವ್ಯಕ್ತಿತ್ವ ಹೊಂದಿದವರು. ಹಿಂದಿನಿಂದಲೂ ಅವರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದೆ. ಹಿರಿಯರಾಗಿದ್ದರಿಂದ ಗೌರವ ನೀಡುತ್ತಿದ್ದೆ. ಅವರ ಹೆಸರನ್ನು ಅಜರಾಮರವಾಗಿಸಬೇಕು. ಅವರ ಹೋರಾಟ ಮತ್ತು ಜೀವನ ಇತರರಿಗೆ ಮಾದರಿ ಎಂದರು.

ಹಿರಿಯ ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ, 30 ವರ್ಷಗಳಿಂದ ರಾಜು ತಾಂಡೇಲ್ ನನ್ನ ಒಡನಾಟದಲ್ಲಿ ಇದ್ದ ಸಹೋದರ. ನನ್ನ ಹಿರಿಯ ಮಗನಂತೆ. ಯಾವುದೇ ಕಾರ್ಯಗಳನ್ನು ಕೈಗೆತ್ತಿಕೊಂಡರೆ ಅದನ್ನು ಪೂರ್ಣಗೊಳಿಸುವವರೆಗೆ ನಿಲ್ಲುತ್ತಿರಲಿಲ್ಲ. ಆರೋಗ್ಯ, ವೈಯಕ್ತಿಕ ಬದುಕನ್ನೂ ಮರೆತು ಇನ್ನೊಬ್ಬರ ಸಹಾಯಕ್ಕೆ ಮುಂದಾಗುತ್ತಿದ್ದರು ಎಂದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಚೈತ್ರಾ ಕೊಠಾರಕರ ಮಾತನಾಡಿ, ದಿ. ರಾಜು ತಾಂಡೇಲ್ ನಮ್ಮ ಕುಟುಂಬದಲ್ಲಿ ಒಬ್ಬರಂತೆ ಇದ್ದರು. ಸದಾ ಸಹಾಯಕ್ಕೆ ಮುಂದಾಗುತ್ತಿದ್ದರು. ಯಾವುದೇ ಸಮುದಾಯದವರು ನೆರವಿಗೆ ಕರೆದರೂ ಹಗಲು ರಾತ್ರಿಯೆನ್ನದೆ ಮುಂದೆ ಬರುವ ವ್ಯಕ್ತಿತ್ವ ಎಲ್ಲರಲ್ಲೂ ಇರಲು ಸಾಧ್ಯವಿಲ್ಲ. ತನ್ನಲ್ಲಿ ಇದ್ದದ್ದನ್ನು ಸಮಾಜಕ್ಕೆ ನೀಡಿ ಸರಳವಾಗಿ ಬದುಕು ಸಾಗಿಸಿದ ಮಹಾನ್ ನಾಯಕ ಅವರು. ಅವರ ನೆನಪಿನ, ಅಮರ ಮೀನುಗಾರ ರಾಜು ತಾಂಡೇಲರಿಗೆ ನುಡಿನಮನ – ಅಭಿಮಾನ ತೋರಣ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ. ಇದ್ದಾಗ ಮನುಷ್ಯನ ಸಹಾಯ ಪಡೆದು ಅಗಲಿದಾಗ ನೆನೆಯದಿದ್ದರೆ, ಉಪಕಾರ ಸ್ಮರಣೆ ಮಾಡದಿದ್ದರೆ ಮನುಷ್ಯರಾಗಲು ಸಾಧ್ಯವಿಲ್ಲ ಎಂದರು.

ನಿವೃತ್ತ ಶಿಕ್ಷಕ ಪಿ ಎಸ್ ರಾಣೆ ಮಾತನಾಡಿ, ರಾಜು ತಾಂಡೇಲರ ಕುರಿತು ಸಾಹಿತ್ಯದ ನಿದರ್ಶನಗಳ ಮೂಲಕ ಅವರ ಸಹಾಯ ಮನೋಧರ್ಮ, ಹೋರಾಟದ ಕುರಿತು ಎಳೆ ಎಳೆಯಾಗಿ ಬಿಡಿಸಿಟ್ಟರು. ಮಾಜಿ ನಗರಸಭಾ ಸದಸ್ಯ ದೇವಿದಾಸ ನಾಯ್ಕ, ರಾಜು ತಾಂಡೇಲರ ನಿಧನದಿಂದ ಸಮಾಜಕ್ಕೆ ಮತ್ತು ಜಿಲ್ಲೆಗೆ ನಷ್ಟವಾಗಿದೆ ಎಂದರು. ಮೀನುಗಾರ ಮುಖಂಡ ಹರಿಹರ ಹರಿಕಂತ್ರ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಡತನ ಅಡ್ಡಿಯಾದರೆ ರಾಜು ತಾಂಡೇಲ ಅದಕ್ಕೆ ಸ್ಪಂದಿಸಿ ನೂರಾರು ಜನರ ಓದಿಗೆ ನೆರವಾಗಿದ್ದಾರೆ ಎಂದರು.

ಅರವಿಂದ ಕುಡ್ತಾಳಕರ, ರಾಜು ತಾಂಡೇಲರು ಹೇಗೆ ಬಡವರಿಗೆ ನೆರವಾದರು ಎಂದು ತಿಳಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ನಾಗೇಶ ಕುರ್ಡೆಕರ,
ಬಿಜೆಪಿ ಮಂಡಲ ಗ್ರಾಮೀಣ ಅಧ್ಯಕ್ಷ ಸುಭಾಸ್ ಗುನಗಿ, ಬಿಲ್ಟ್ ನಿವೃತ್ತ ಮ್ಯಾನೇಜರ್ ಎಂ ಗೋವಿಂದ ದಿ. ರಾಜು ತಾಂಡೇಲ್ ಅವರ ಕುರಿತು ಮಾತನಾಡಿ ಉಪಕಾರ ಸ್ಮರಿಸಿ ಮಾತನಾಡಿದರು.

ಸಭೆಯಲ್ಲಿ ದಿ. ರಾಜು ತಾಂಡೇಲ್ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಕಾರ್ಯಕ್ರಮದ ಆಶಯದಂತೆ ರಾಜು ತಾಂಡೇಲ್ ಅವರ ಹೆಸರು ಅಜಾರಮರವಾಗುವಂತೆ ಶ್ರೀಗಂಧದ ಸಸಿಯನ್ನು ಅತಿಥಿಗಳಿಂದ ಹಸ್ತಾಂತರ ಮಾಡಿಕೊಂಡು ಹರಿಕಂತ್ರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಅದನ್ನು ಪೊಲೀಸ್ ಇಲಾಖೆಯ ಆವರಣದಲ್ಲಿ ನೆಡಲು ವ್ಯವಸ್ಥೆ ಮಾಡಲಾಯಿತು.

ನಗರ ಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ, ಮಾಜಿ ನಗರಸಭಾ ಸದಸ್ಯೆ ದಿವ್ಯಾ ದೇವಿವಾಸ ನಾಯ್ಕ, ನಗರಸಭಾ ಸದಸ್ಯ ಹನುಮಂತ ತಳವಾರ, ಬಾಬು ಶೇಕ್, ಕಸಾಪ ಅಧ್ಯಕ್ಷ ರಾಮ ನಾಯ್ಕ, ಮುಖಂಡ ರಾಜಾ ಪೆಡ್ನೇಕರ, ಆಟೋ ಯೂನಿಯನ್ ಅಧ್ಯಕ್ಷ ಸಂಜೀವ ಬಲೆಗಾರ, ಗ್ರಾಮ ಪಂಚಾಯತಿ ಸದಸ್ಯರಾದ ಮಲ್ಲಿಕಾ ಬಲೆಗಾರ, ದಿವ್ಯಾ ತಾರಿ, ಕಾರವಾರ ಹರಿಕಂತ್ರ ಸಮಾಜದ ಬುಧವಂತ ಅನಿಲ್ ಹರಿಕಂತ್ರ, ವಿಕಾಸ ಕೆ ತಾಂಡೇಲ್, ನಿಲೇಶ್ ದುರ್ಗೆಕರ ಹಾರವಾಡ, ಬಾಲಚಂದ್ರ ಕೊಡರ್ಕಾರ್ ಬೈತಕೋಲ್, ಗಣರಾಜ ಟಾಕೇಕಾರ್, ಸುದೇಶ್ ನಾಯ್ಕ, ಪ್ರಕಾಶ ಹರಿಕಂತ್ರ, ರೋಹಿದಾಸ್ ಬಾನವಳಿಕರ್, ವಿನಾಯಕ ಹರಿಕಂತ್ರ, ಚೇತನ ಹರಿಕಂತ್ರ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಉಪನ್ಯಾಸಕ ಮಾರುತಿ ಹರಿಕಂತ್ರ ಪ್ರಾಸ್ತಾವಿಕ ಮಾತನಾಡಿ ಇಂದಿನ ನುಡಿನಮನ ಮೀನುಗಾರ ಸಮುದಾಯದಲ್ಲಿ ಮೊದಲ ಪದ್ಧತಿಯಾಗಿದೆ. ರಾಜು ತಾಂಡೇಲರ ಹೆಸರು ಮತ್ತು ಕಾರ್ಯ ಮುಂದಿನ ಪೀಳಿಗೆಗೆ ಅದರ್ಶವಾಗಿರಬೇಕು ಎನ್ನುವುದು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ದಿ ಸಂಘದ ಆಶಯ ಎಂದರು.

ಹರಿಕಂತ್ರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ದಿಲೀಪ್ ಅರ್ಗೇಕರ್, ಅಧ್ಯಕ್ಷ ರೋಷನ್ ಹರಿಕಂತ್ರ, ಸಂಘದ ಪ್ರಮುಖರಾದ ರೋಷನ್ ತಾಂಡೇಲ್, ಸುನೀಲ್ ತಾಂಡೇಲ್, ಸಚಿನ್ ಹರಿಕಂತ್ರ, ನಂದೀಶ್ ಮಾಜಾಳಿಕಾರ, ಕೃಷ್ಣಾ ತಾಂಡೇಲ್, ಪ್ರವೀಣ ತಾಂಡೇಲ್, ವಿನಾಯಕ ಖಾರ್ವಿ, ವಿಠೋಬಾ ತಾಂಡೇಲ್, ಉಮಾಕಾಂತ(ಪ್ರಕಾಶ್) ಕುಮಾರಸ್, ಮಹೇಶ ದುರ್ಗೇಕರ ಮತ್ತು ವಿವಿಧ ಸಮುದಾಯದ ಹಲವರು ಪಾಲ್ಗೊಂಡು ಶ್ರದ್ಧಾಂಜಲಿ ಅರ್ಪಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button