ಅಡಿಕೆ ಚಾಕೊಲೇಟ್, ವೈನ್ ಆಯ್ತು: ಮಾರುಕಟ್ಟೆಗೆ ಬಂದ ಅಡಿಕೆ ಸೋಪು: ಕೃಷಿಕನ ಸಾಧನೆ ನೋಡಿ

ಅಡಿಕೆ ದರ ಕುಸಿಯುತ್ತಿರುವ ಬೆನ್ನಲ್ಲೆ, ಅಡಿಕೆ ಕುರಿತ ಹೊಸ ಹೊಸ ಸಂಶೋಧನೆಗಳು, ಪ್ರಯೋಗಗಳು ರೈತರಲ್ಲಿ ಹೊಸ ಆಶಾಭಾವ ಮೂಡಿಸಿದೆ. ಅಡಿಕೆಯ ಮೌಲ್ಯವರ್ದನೆಯಿಂದ ಮಾಡಿದ ಅಡಿಕೆ ಟೀ ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಳಿಸಿದೆ. ಇತ್ತಿಚಿಗೆ ಅಡಿಕೆ ಚೊಗರಿನಲ್ಲಿ ಸೀರಿಗೆ ಬಣ್ಣ ಹಾಕುವ ಪ್ರಯೋಗ ಕೂಡಾ ಯಶಸ್ವಿಯಾಗಿದೆ. ಚಾಕೊಲೇಟ್ , ವೈನ್ ಕೂಡಾ ತಯಾರಾಗುತ್ತಿದೆ. ಇದೀಗ ಔಷಧಿಯ ಗುಣವುಳ್ಳ ಅಡಿಕೆ ಸಿಪ್ಪೆಯಿಂದ ಸೋಪ್ ಅನ್ನು ತಯಾರಿಸಲಾಗಿದ್ದು, ವಿಶೇಷವಾಗಿ ಗಮನಸೆಳೆದಿದೆ.

ಇದನ್ನೂ ಓದಿ: ನೇಮಕಾತಿ: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ: Canara Bank Recruitment

ಹಸಿಅಡಿಕೆ ಸಿಪ್ಪೆಯಲ್ಲಿ ಔಷದೀಯ ಗುಣವಿದ್ದು, ಹಿಂದಿನ ಕಾಲದಲ್ಲಿ ಮೈಯಲ್ಲಿ ಗಾಯವಾದಾಗ, ತುರುಕೆಯಿದ್ದಾಗ , ಹಣ್ಣಾದ ಅಡಿಕೆ ಸಿಪ್ಪೆಯನ್ನು ಉಜ್ಜುತ್ತಿದ್ದರು. ತುರಿಕೆ, ಗಾಯ ಕೆಲವೇ ದಿನಗಳಲ್ಲಿ ಮಾಯವಾಗುತ್ತಿತ್ತು ಎಂದು ಹಿರಿಯರು ಹೇಳುತ್ತಿದ್ದರು. ಅಡಿಕೆಯ ಈ ಔಷದೀಯ ಗುಣವನ್ನೇ ಮೂಲವನ್ನಾಗಿರಿಸಿ, ಅಡಿಕೆಯ ಹಣ್ಣಿನ ಸಿಪ್ಪೆಯ ರಸ, ಅರಿಶಿನ ಎಣ್ಣೆ , ತೆಂಗಿನ ಎಣ್ಣೆ , ಸಾಗುವಾನಿ ಎಲೆ ಮತ್ತು ಕೊತ್ತಂಬರಿ ಲಾವಂಚದoತಹ ಗಿಡಮೂಲಿಕೆ ಬಳಸಿಕೊಂಡು ಇದೀಗ ಅಡಿಕೆ ಸೋಪು ( Satvam Soap ) ತಯಾರಾಗಿದೆ.

ಪುತ್ತೂರಿನ ಹಾರ್ದಿಕ ಹರ್ಬಲ್‌ನ ಮುಖ್ಯಸ್ಥರಾಗಿರುವ ಮತ್ತು ಸ್ವತ: ಕೃಷಿಕರೂ ಆಗಿರುವ, ಸಂಸ್ಥೆಯ ಮುಖ್ಯಸ್ಥರಾಗಿರುವ ಮುರಳೀಧರ ಹಾಗೂ ಮೀರಾ ಮುರಳೀಧರ ಅವರು ಈ ಸೋಪಿನ ರೂವಾರಿಗಳು. ಇದಕ್ಕೆ ಈಗ ಪೇಟೆಂಟ್ ಕೂಡಾ ಪಡೆದುಕೊಳ್ಳಲಾಗಿದೆ. ವಿವಿಧ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರು ಮಾಡುವ ಹಾಗೂ ಅಡಿಕೆ ಬೆಳೆಗಾರರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಅಡಿಕೆ ಸಿಪ್ಪೆಯ ರಸದಿಂದ ತಯಾರು ಮಾಡಬಹುದಾದ ಸಾಬೂನು ಬಗ್ಗೆ ಅಡಿಕೆ ಕೃಷಿಕ , ಸಂಶೋಧಕ ಬದನಾಜೆ ಶಂಕರ ಭಟ್ ಬಳಿ ಮಾಹಿತಿ ಪಡೆದಿದ್ದರಂತೆ. ಅಲ್ಲದೆ, ಹಲವು ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದು ಸಾಬೂನು ತಯಾರಿಕೆಗೆ ಇಳಿದಿದ್ದರು. ಇದೀಗ ಎಲ್ಲಾ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಅಡಿಕೆ ಸೋಪು ಮಾರುಕಟ್ಟೆಗೆ ಬಂದಿದೆ.

ಅಡಿಕೆಯ ಸೋಗೆ, ಹಾಳೆ ಮತ್ತು ಸಿಪ್ಪೆ ಇದ್ಯಾವದೂ ಕೇವಲ ತ್ಯಾಜ್ಯಗಳಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಈ ವಸ್ತುಗಳನ್ನೇ ಲಾಭದಾಯಕವಾಗಿ ಮೌಲ್ಯವರ್ಧನೆ ಮಾಡಿಕೊಂಡ ಹಲವರಿದ್ದಾರೆ.. ಅಡಿಕೆಯ ಹಾಳೆ ತಟ್ಟೆಗಳನ್ನು ತಯಾರಿಸುವ ಉದ್ಯಮ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿದೆ. ವಿದೇಶಗಳಿಗೂ ಇವುಗಳು ರಫ್ತಾಗುತ್ತಿದೆ.

ಅಡಿಕೆಯ ಮೌಲ್ಯವರ್ಧನೆಯ ಬಗ್ಗೆ ಇನ್ನಷ್ಟು ಹೊಸ ಪ್ರಯೋಗಗಳು ನಡೆಯುತ್ತಿದೆ. ಇಂಥ ಪ್ರಯತ್ನಗಳು ಇನ್ನಷ್ಟು ನಡೆಯಲಿ. ಮತ್ತು ಇಂಥ ಪ್ರಯತ್ನಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಬೇಕಿದೆ. ಪ್ರತಿದಿನದ ಅಡಿಕೆ ಧಾರಣೆ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version