ಖ್ಯಾತ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳ್ ಇನ್ನಿಲ್ಲ

ಖ್ಯಾತ ಯಕ್ಷಗಾನ ಕಲಾವಿದನಿಗೆ ಏನಾಗಿತ್ತು?
ಅವರ ಕೊನೆಯ ದಿನಗಳು ಹೇಗಿದ್ದವು?

ಹೊನ್ನಾವರ: ವಿಭಿನ್ನತೆಯಿಂದ ತನ್ನೆಡೆಗೆ ಸೆಳೆದುಕೊಳ್ಳುವ ಆಯಸ್ಕಾಂತೀಯ ಗುಣವುಳ್ಳ ಕಲೆ ಯಕ್ಷಗಾನ. ಇಲ್ಲಿ ಪ್ರಬುದ್ಧ ಎಂದು ಕರೆಯಬಹುದಾದ ಕಲಾವಿದರ ಸಂಖ್ಯೆ ಬಹಳಷ್ಟಿಲ್ಲ. ಎಲ್ಲಾ ರೀತಿಯ ಪಾತ್ರಗಳನ್ನು ಮಾಡುವವರಂತೂ ಅಪರೂಪ. ಎಲ್ಲ ಪಾತ್ರಕ್ಕೂ ಸೈ ಎನಿಸಿಕೊಂಡವರು ವೀರಳಾತೀವಿರಳ.. ಹೀಗಾಗಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ಯಕ್ಷರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕಲಾವಿದರು ಹೆಚ್ಚು ಇಷ್ಟವಾಗುತ್ತಾರೆ. ಅಂಥವರ ಸಾಲಿಗೆ ಸೇರಿದವರು ಹಡಿನಬಾಳು ಶ್ರೀಪಾದ ಹೆಗಡೆ. ಈ ಅಪ್ರತಿಮ ಯಕ್ಷಗಾನ ಕಲಾವಿದ ಇನ್ನಿಲ್ಲ.

ಹೌದು, ಯಕ್ಷಗಾನದ ಮೇರು ಕಲಾವಿದರ ಸಾಲಿನಲ್ಲಿ ಅಗ್ರಗಣ್ಯರಲ್ಲಿ ಒಬ್ಬರಾದ ಹಡಿಬಾಳ ಶ್ರೀಪಾದ ಹೆಗಡೆಯವರು, ರಸ್ತೆ ಅಪಘಾತದಿಂದ ಚೇತರಿಸಿಕೊಳ್ಳಲೇ ಇಲ್ಲ. ಅಂದಿನಿಂದ ಇಂದಿನ ವರೆಗೂ ಹಾಸಿಗೆಯಲ್ಲಿ ಕಾಲ ಕಳೆಯಬೇಕಾದ ದುಸ್ಥಿತಿ ಬಂದಿತ್ತು. ಸುಮಾರು ವರ್ಷಗಳ ಹಿಂದೆ ಹೊನ್ನಾವರದ ಕಡತೋಕಾ ಕ್ರಾಸ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡಿ, ಸಾವನ್ನೂ ಗೆದ್ದು ಬಂದಿದ್ದರು. ಆದರೆ ಶ್ರೀಪಾದ ಹೆಗಡೆಯವರ ಆರೋಗ್ಯ ಮಾತ್ರ ಮೊದಲಿನಂತೆ ಆಗಲೇ ಇಲ್ಲ… ಮಾತನಾಡಲು ಕಷ್ಟದ ಪರಿಸ್ಥಿತಿ ಅವರದ್ದಾಗಿತ್ತು.

ಯಕ್ಷಗಾನವನ್ನೇ ವೃತ್ತಿಯಾಗಿ ಸ್ವೀಕರಿಸಿದ ಇವರು ಗುಂಡಬಾಳ, ಇಡಗುಂಜಿ, ಪಂಚಲಿಂಗ, ಪೆರ್ಡೂರು, ಸಾಲಿಗ್ರಾಮ ಮೇಳ ಸೇರಿದಂತೆ ಹತ್ತಾರು ಮೇಳದಲ್ಲಿ ತಿರುಗಾಟ ಮಾಡಿದ್ದಾರೆ. ತಮ್ಮದೇ ಆದ ಅಭಿಮಾನಿಗಳನ್ನು ಇವರು ಹೊಂದಿದ್ದಾರೆ ಮೇರು ಕಲಾವಿದ ಶ್ರೀಪಾದ ಹೆಗಡೆಯವರು.


ಶ್ರೀಪಾದ ಹೆಗಡೆಯವರ ಆರೋಗ್ಯ ಸ್ಥಿತಿ ಕುರಿತು ವಿಸ್ಮಯ ಟಿ.ವಿ ಸವಿಸ್ತಾರವಾಗಿ ವರದಿ ಮಾಡಿತ್ತು. ಈ ಕುರಿತ ವಿಡಿಯೋ ಇಲ್ಲಿದೆ ನೋಡಿ.


ವಿಸ್ಮಯ ನ್ಯೂಸ್, ಹೊನ್ನಾವರ

Exit mobile version