Follow Us On

WhatsApp Group
Big News
Trending

ಸರಕಾರಿ ಕಾರ್ಯಾಲಯವನ್ನೇ ಕಲಾಕುಟಿರವಾಗಿಸಿ ಮೆರಗು ನೀಡಿದ ಅಧಿಕಾರಿ

ಲೇಖನ -ಉಮೇಶ ಮುಂಡಳ್ಳಿ ಭಟ್ಕಳ  9945840552

ಕಲೆಗೆ ಒಲಿಯದ ಮನಸೋಲದ ವ್ಯಕ್ತಿಗಳು ಬಹಳ ಅಪರೂಪ. ಯಾವುದಾದರೂ ಒಂದು ಕಲೆಗೆ ಅವರು ತಮಗರಿವಿದ್ದೊ ಅರಿವಿಲ್ಲದೆಯೊ ಅದರ ಪ್ರಭಾವಕ್ಕೆ ಒಳಗಾಗಿರುತ್ತಾರೆ.ಸಂಗೀತ ಸಾಹಿತ್ಯ ಚಿತ್ರಕಲೆ ನೃತ್ಯ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಆಸಕ್ತಿದಾಯಕ ಕ್ಷೇತ್ರವಾಗಿರತ್ತೆ. ವೃತ್ತಿಯಲ್ಲಿ ಅದೆಷ್ಟೋಒತ್ತಡವಿದ್ದರೂ ಸಹ ಅವನ ಆಸಕ್ತಿ ಅಭಿರುಚಿಯ ಕಲೆಯ ವಿಚಾರ ಬಂದಾಗ ಆತ ಹೇಗಾದರೂ ತನ್ನ ಸಮಯವನ್ನು ಹೊಂದಿಸಿಕೊಂಡು ಆ ತನ್ನ ಕಲೆಗಾಗಿಯೇ ಮಿಸಿಲಿಡುತ್ತಾನೆ. ಅಂತೆಯೇ  ಒಬ್ಬ ಅಧಿಕಾರಿ ಸಹೃದಯಿಯಾಗಿದ್ದು ಕಲಾಶಕ್ತ ನಾಗಿದ್ದಲ್ಲಿ ಆಗ ಆತ ತನ್ನ ಕೆಳಗಡೆ ಬರುವ ಸಿಬ್ಬಂದಿಗಳ ಒಳಗಿನ ಕಲೆಯನ್ನೂ ಸಹ ಗುರುತಿಸಬಲ್ಲ ಪ್ರೋತ್ಸಾಹಿಸಬಲ್ಲ ಪ್ರೇರೆಪಿಸಬಲ್ಲ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ಅಂತ ಕಲಾ ಆರಾಧಕ ಸಹೃದಯಿ ಅಧಿಕಾರಿಯ ಬಗ್ಗೆ ಹೇಳುವ ಸಣ್ಣ ಪ್ರಯತ್ನ ಇಂದಿನ ನನ್ನ ಲೇಖನ.

ಭಟ್ಕಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದೇವಿದಾಸ ಮೊಗೇರ ಅವರು ಈ ಮಹತ್ವದ ಕಾರ್ಯಮಾಡುವಲ್ಲಿ ಮುಂದಡಿ ಇಟ್ಟು ಆ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಶಾಲೆಗೆ ಮಕ್ಕಳು ಬಾರದಂತ ಪರಿಸ್ಥಿತಿ ಇರುವ ಈ ವಿಷಮ ಪರಿಸ್ಥಿತಿಯಲ್ಲಿ ತಮ್ಮ ತಾಲೂಕಿನಲ್ಲಿಯ ಎಲ್ಲಾ ಚಿತ್ರಕಲಾ ಶಿಕ್ಷಕರನ್ನು ಒಗ್ಗೂಡಿಸಿ ತಮ್ಮ ಕಾರ್ಯಾಲಯವನ್ನು ಕಲಾತ್ಮಕವಾಗಿ ಚಿತ್ರಿಸುವಲ್ಲಿ   ಅದಕ್ಕೊಂದು ಶೃದ್ಧಾ ಭಾವನೆ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಶಾಲೆಯ ಗೊಡೆಗಳ ಮೇಲೆ ಮಕ್ಕಳ ಅಭಿರುಚಿ ಹೆಚ್ಚಿಸುವಲ್ಲಿ ಅನೇಕ ಚಿತ್ರಗಳನ್ನು ಬಿಡುಸುವುದು ಮೊದಲಿನಿಂದ ಇದ್ದ ರೂಡಿ. ಈ ಕಾರ್ಯದಲ್ಲಿ ಅನೇಕ ಶಿಕ್ಷಕರು ತೊಡಗಿಸಿಕೊಂಡಿರುತ್ತಾರೆ.

ಶ್ರೀಯುತರು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಕಾರ್ಯಾಲಯವನ್ನೆ ಕಲಾಕುಠಿರವಾಗಿಸಿದ್ದಾರೆ. ಚಿತ್ರಕಲೆಯಲ್ಲಿ ಜಿಲ್ಲೆಯಲ್ಲಿಯೇ ಅತ್ಯಂತ ಗಮನ ಸೆಳೆದ ಕಲಾವಿದ ಶಿಕ್ಷಕ ಸಂಜಯ ಗುಡಿಗಾರ ಅವರೊಂದಿಗೆ ತಾಲೂಕಿನ ಎಲ್ಲಾ ಕಲಾ ಶಿಕ್ಷಕರನ್ನು ಒಗ್ಗೂಡಿಸಿ ಈ ಕಲಾತ್ಮಕ ಮಹತ್ವಪೂರ್ಣ ಪ್ರೇರಣದಾಯಕ ಕಾರ್ಯಕ್ಕೆ ಮುಂದಡಿ ಇಟ್ಟಿದ್ದಾರೆ. ತಾವು ಯಾವುದೇ ಹುದ್ದೆಯಲ್ಲಿದ್ದಾಗಲೂ ಅಲ್ಲೊಂದು ಹೊಸತನವನ್ನು ಕ್ರೀಯಾಶೀಲತೆಯನ್ನು ಜಾಗೃತಗೊಳಿಸಲು ಪ್ರಯತ್ನಿಸುವುದು ಅವರ ವ್ಯಕ್ತಿತ್ವದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಅವರೊಳಗೊಬ್ಬ ಕ್ರೀಡಾಪಟು, ಒಬ್ಬ ಸಮಾಜಮುಖಿ ಚಿಂತಕ, ಸಾಹಿತಿ, ಅತ್ಯುತ್ತಮ ಮಾತುಗಾರ ಎಲ್ಲದಕ್ಕೂ ಮಿಗಿಲಾದ ಸಹೃದಯಿ ಕಲಾರಾಧಕ ಇರುವುದನ್ನು ತಾಲೂಕಿನ ಜನತೆಗೆ ತಿಳಿದಿರುವ ವಿಚಾರ. ಅಧಿಕಾರಿಗಳೆಂದರೆ ಕೇವಲ ಅಧಿಕಾರ ಚಲಾಯಿಸಲು ಮಾತ್ರ ಎಂದು ಯಾವಾಗಲೂ ಸಿಡಿಮಿಡಿಗೊಳ್ಳುತ್ತಲೇ ಇರುವ ಕೆಲವರ ನಡುವೆ ನಗುನಗುತ್ತಲೇ  ಕ್ಲಿಷ್ಟಕರ ಪರಿಸ್ಥಿತಿಯನ್ನು ಸಮಸ್ಯೆಗಳನ್ನೂ ನಿರಾಯಾಸವಾಗಿ ಪರಿಹಾರ ಕಂಡುಕೊಳ್ಳಬಲ್ಲ ಅಧಿಕಾರಿ ಇಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಎಂಬುದು ಅನೇಕ ಬಾರಿ ಸಾಬೀತಾದಂತದ ಸಂಗತಿ. 

ಕೆಲವು ವರ್ಷಗಳ ಹಿಂದೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಪ್ರಭಾರಿ ವಹಿಸಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವುದನ್ನು ಇಂದಿಗೂ ತಾಲೂಕಿನ ಅನೇಕರು ನೆನಪು ಮಾಡಿಕೊಳ್ಳುತ್ತಾರೆ. ಸಾಮಾನ್ಯರೊಡನೆಯು ಬೆರೆಯುವ ಸಹಜವಾಗಿ ನಡೆದುಕೊಳ್ಳುವ ಅವರ ಸಹೃದಯತೆ ಇಂದು ಈ ಕಾರ್ಯಕ್ಕೂ ಕಾರಣವಾಗಿರಬಹುದು.ಸರಕಾರಿ ಕಾರ್ಯ ದೇವರ ಕಾರ್ಯ.ಸರಕಾರಿ ಕಛೇರಿ ದೇವಾಲಯದಂತೆ ಎಂಬ ಮಾತು ಇಂತಹ ಅಧಿಕಾರಿಗಳಿಂದ ಅನೇಕ ಬಾರಿ ಸತ್ಯದ ಅತೀ ಹತ್ತಿರಕ್ಕೆ ತಂದು ನಿಲ್ಲಿಸುತ್ತದೆ. ನಾನು ಗಮನಿಸಿದಂತೆ ಇಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಭೇಟಿ ನೀಡಿದ ಪ್ರತಿಯೊಬ್ಬರಿಗೂ ಒಂದು ಕ್ಷಣ ಕೈ ಎತ್ತಿ ಮುಗಿಯಬೇಕು ಎಂಬ ಭಾವನೆ ಬಾರದಿರದು.ಕಾರಣ ಕಲಾವಿದ ಶಿಕ್ಷಕರ ಪ್ರತಿಭೆಯ ಪ್ರತಿಬಿಂಬವೋ ಎನ್ನುವಂತೆ ಈ ಕಾರ್ಯಾಲಯ ಇಂದು ಕಲೆಯ ದೇವಾಲಯವೇ ಆಗಿ ಕಣ್ಣಿಗೂ ಮನಸ್ಸಿಗೂ ಮುದನೀಡುವಂತಾಗಿದೆ.

ಈ ಜನಹಿತ ಕಾರ್ಯದಲ್ಲಿ ಶ್ರೀವಲ್ಲಿ ಪ್ರೌಢಶಾಲಾ ಶಿಕ್ಷಕ ಸಂಜಯ ಗುಡಿಗಾರ, ಮುಂಡಳ್ಳಿ ಪ್ರೌಢಶಾಲೆಯ ಶಿಕ್ಷಕ ಚೆನ್ನವೀರ ಹೊಸಮನೆ, ಅಳ್ವೆಕೋಡಿ ದುರ್ಗಾಪರಮೇಶ್ವರಿ ಪ್ರೌಢಶಾಲಾ ಶಿಕ್ಷಕ ನಾರಾಯಣ ಮೊಗೇರ, ಸೋನಾರಕೇರಿ ಪ್ರೌಢಶಾಲಾ ಶಿಕ್ಷಕ ಮಹೇಶ ನಾಯ್ಕ, ಬೈಲೂರು  ಪ್ರೌಢಶಾಲಾ ಶಿಕ್ಷಕ ಮಂಜುನಾಥ ದೇವಾಡಿಗ ಹಾಗೂ ಅಂಜುಮನ್ ಪ್ರೌಢಶಾಲೆಯ ಶಿಕ್ಷಕ ಮಹಮ್ಮದ್ ಸಾದಿಕ್ ಶೇಖ್ ಅವರ ಕಲೆ ಹಾಗೂ ಅವಿರತ ಪ್ರಯತ್ನ ಶ್ಲಾಘನೀಯವಾದದ್ದು. ಅಬ್ಬರದ ಪ್ರಚಾರ ಹೊಗಳಿಕೆಗೆ ಆಡಂಭರಕ್ಕೆ ಆಸೆ ಪಡದೆ ಶೃದ್ದೆಯಿಂದ ತಮ್ಮ ಕಾರ್ಯದಲ್ಲಿ ಯಶಸ್ಸು ಕಾಣುವ ಉದ್ದಾತ್ತ  ಭಾವನೆಯ ದೇವಿದಾಸ ಮೊಗೇರ ಅವರ ಕಾರ್ಯ ಕೇವಲ ತಾಲೂಕು ಜಿಲ್ಲೆಗಷ್ಟೇ ಸೀಮೀತವಾಗದೇ ಇದು ರಾಜ್ಯದ ಎಲ್ಲ ಅಧಿಕಾರಿಗಳು ಶಿಕ್ಷಣ ಸಚಿವಾಲಯದವರೆಗೂ ಮುಟ್ಟಲ್ಲಿ ಅವರ ಇನ್ನು ಉಳಿದಿರುವ ಕೆಲವು ಮೂರು ನಾಲ್ಕು ವರ್ಷದ ಸರಕಾರಿ ಕಾರ್ಯದ ಜೀವನದಲ್ಲಿ ಅವರಿಂದ ಇನ್ನಷ್ಟು ಹೊಸತನದ ಕಾರ್ಯವಾಗಲಿ ಅವೆಲ್ಲವೂ ಮುಂದಿನ ಶಿಕ್ಷಕರು ಅಧಿಕಾರಿಗಳು ರೂಡಿಸಿಕೊಳ್ಳುವಂತಾಗಲಿ ಎಂಬ ಆಶಯ ತಾಲೂಕಿನ ಎಲ್ಲ ಜನತೆಯದಾಗಿದೆ.

ಒಟ್ಟಾರೆಯಾಗಿ ಇಲ್ಲಿನ ಚಿತ್ರಗಳ ವರ್ಣನೆ ನಾನು ಹೆಚ್ಚಾಗಿ ಮಾಡದೇ ತಮಗಾಗಿ ಬಿಟ್ಟಿರುತ್ತೇನೆ. ಒಂದಕ್ಕಿಂತ ಒಂದು ವಿಭಿನ್ನ ಭವ್ಯ ಚಿತ್ರವನ್ನು ತಮ್ಮ ಕುಂಚಗಳಿಂದ ಗೋಡೆಯ ಮೇಲೆ ಪಡಿಮೂಡಿಸಿರುವ ಈ ಕಲಾವಿದ ಶಿಕ್ಷಕರ ಕಲೆಯ ಸವಿಯನ್ನೊಮ್ಮೆ ಸವಿಯಲಾದರೂ ನೀವೂ ಒಮ್ಮೆ ಭೇಟಿ ನೀಡಲೇಬೇಕು ಎನ್ನುವುದು ಲೇಖಕನಾದ ನನ್ನ ಅಭಿಪ್ರಾಯ. ಕಲಾವಿದ ಅಳಿದರೂ ಕಲೆಯು ಎಂದೂ ಅಳಿಯುವುದಿಲ್ಲ.

Back to top button