ಮದುವೆ ಮನೆಯಲ್ಲಿ ಗುಂಡಿನ ದಾಳಿ: ಪ್ರಕರಣದ ಹಿಂದಿರೋದು ಯಾರ ಕೈವಾಡ ಗೊತ್ತಾ?

ಅಂಕೋಲಾ : ತಾಲೂಕಿನಲ್ಲಿ ಆಗಾಗ ಗುಂಡಿನ ಮೊರೆತದ ಸದ್ದು ಕೇಳಿ ಬರುತ್ತಲೇ ಇದ್ದು, ಅವರ್ಸಾದ ಸಕಲಬೇಣದಲ್ಲಿ ಶನಿವಾರ ಬೆಳಗಿನಜಾವ ಮತ್ತೆ ಸ್ಪೋಟದ ಸದ್ದು ಕೇಳಿ ಬಂದಿರುವುದು ನಾಗರಿಕರ ನೆಮ್ಮದಿ ಕೆಡಿಸುವಂತಾಗಿದೆ. ತಮ್ಮ ಸಹೋದರ ಸಂಬಂಧಿ ಮಗಳ ಮದುವೆ ನಡೆಸಲು ಸಿದ್ದತೆ ನಡೆಸಿದ್ದ ಕುಟುಂಬವೊಂದರ ಮನೆ ಯೇ ಕಿಟಕಿ ಬಳಿ ಬೆಳಗಿನ ಜಾವ 4.10ರ ಸುಮಾರಿಗೆ ಗುಂಡಿನ ದಾಳಿ ನಡೆದಿದ್ದು, ಗುಂಡಿನ ಸ್ಫೋಟದ ಸಪ್ಪಳ ಕೇಳಿ ಗಾಬರಿಯಾದ ಮನೆಯವರು ಹೊರ ಬಂದು ನೋಡುವರಷ್ಟರಲ್ಲಿ ಗುಂಡು ಹಾರಿಸಿದ ಅಪ ರಿಚಿತರು ಸ್ಥಳದಿಂದ ಕಾಲ್ಕಿತ್ತು ಕತ್ತಲೇಯಲ್ಲಿಯೇ ಪರಾರಿಯಾಗಿದ್ದಾರೆ.

ಕೂಡಲೇ ಮನೆಯವರು ಘಟನೆ ಯ ವಿಷಯ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಿತಿ ಕಲೆ ಹಾಕಿದರು. ಪೊಲೀಸರ ಬಿಗಿ ಬಂದಾಬಸ್ತನಲ್ಲಿ ಪೂರ್ವ ನಿಗದಿಯಂತೆ ಮಂಗಲ ಕಾರ್ಯ ಸುಸೂತ್ರವಾಗಿ ನಡೆಯಿತು. ಎಸ್ಪಿ ಶಿವಪ್ರಕಾಶ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಎಸ್. ಬದರಿನಾಥ, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಸಿಪಿಐ ಕೃಷ್ಣಾನಂದ ನಾಯಕ ಇವರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಿಎಸ್‍ಐ ಈ.ಸಿ.ಸಂಪತ್ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ವಿಶೇಷ ತಂಡ ರಚಿ ಸಲಾಗಿದೆ.

ನಾಪತ್ತೆಯಾದವನ ಸುತ್ತ ಅನುಮಾನದ ಹುತ್ತ ?


ಇತ್ತೀಚಿಗೆ ವ್ಯಕ್ತಿಯೊರ್ವ ನಾಪತ್ತೆಯಾದ ಕುರಿತು ಕುಟುಂಬಸ್ಥರು, ಪ್ರಕರಣ ದಾಖಲಿಸಿದ್ದು, ತನಿಖೆ ಪ್ರಗತಿ ಹಂತದಲ್ಲಿದೆ. ನಾಪತ್ತೆಯಾಗಿರುವ ವ್ಯಕ್ತಿಯು ಈ ಹಿಂದೆ ಪಕ್ಕದ ತಾಲೂಕಿನ ಅರಣ್ಯ ಇಲಾಖೆಯ ಕಾವಲುಗಾರನ ಕೊಲೆ ಪ್ರಕರಣ, ತದನಂತರ ತಾಲೂಕ ವ್ಯಾಪ್ತಿಯಲ್ಲಿ ನಡೆದ ಅರಣ್ಯ ಇಲಾಖೆಯ ಜೀಪಿನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿಯೂ ಆರೋಪಿ ಎಂದು ತಿಳಿದು ಬಂದಿದ್ದು, ಶನಿವಾರದ ಗುಂಡಿನ ದಾಳಿಯಲ್ಲಿಯೂ ಈತನೇ ಪಾಲ್ಗೊಂಡಿರಬಹುದೆಂಬ ಸಂಶಯದ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ಗುಂಡಿನ ದಾಳಿ ಪ್ರಕರಣದ ಜೊತೆ ನಾಪತ್ತೆಯಾದ ವ್ಯಕ್ತಿಯ ಪ್ರೇಮ ಪ್ರಕರಣದ ಹತಾಶ ಮನೋಭಾವನೆಯ ವಿಷಯ ಥಳಕು ಹಾಕಿಕೊಂಡಿದೆ ಎನ್ನಲಾಗಿದ್ದು, ಪೊಲೀಸ ತನಿಖೆಯಿಂದ ಸತ್ಯಾಂಶ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Exit mobile version