Important
Trending

ಉತ್ತರಕನ್ನಡದಲ್ಲಿ ಕೋವಿಡ್ ಲಸಿಕೆ ವಿತರಣೆ ಆರಂಭ

  • ಮೊದಲ ಲಸಿಕೆ ಪಡೆದವರು ಹೇಳಿದ್ದೇನು?
  • ಜಿಲ್ಲೆಯ 11 ಕೇಂದ್ರಗಳಲ್ಲಿ ಲಸಿಕೆ ವಿತರಣೆ
  • ಹೊನ್ನಾವರದಲ್ಲಿ ತಾಂತ್ರಿಕ ತೊಂದರೆ; ವಿಳಂಭವಾದ ಲಸಿಕಾ ವಿತರಣೆ!
  • ಅಂಕೋಲಾ, ಯಲ್ಲಾಪುರದಲ್ಲಿ ಹೇಗಿತ್ತು ವ್ಯವಸ್ಥೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್ ಶೀಲ್ಡ್ ಲಸಿಕೆಯನ್ನು ಅಚ್ಚುಕಟ್ಟಾಗಿ ನೀಡಲಾಗಿದ್ದು, ಕಾರವಾರ ಲಸಿಕಾ ಕೇಂದ್ರದಲ್ಲಿ 42 ಮಂದಿ ಮಾತ್ರ ಲಸಿಕೆ ಸ್ವೀಕರಿಸಲು ಆಗಮಿಸಿ‌ದ್ದರು.ನಗರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೋವಿಡ್ ಲಸಿಕಾ ಕೇಂದ್ರದಲ್ಲಿ ಗ್ರೂಪ್ ಡಿ ನೌಕರ ಬಾಲಚಂದ್ರ ಶಿರೋಡಕರ್ ಎನ್ನುವವರಿಗೆ ಮೊದಲ ಲಸಿಕೆಯನ್ನ ನೀಡಲಾಯಿತು. ಜಿಲ್ಲೆಯ 11 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಪ್ರಾರಂಭವಾಗಿದ್ದು, ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಪ್ರಥಮ ಹಂತದಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಹೊನ್ನಾವರದಲ್ಲಾದ ತಾಂತ್ರಿಕ ಸಮಸ್ಯೆ ಹೊರತುಪಡಿಸಿ ಉಳಿದ ಎಲ್ಲ ಕೇಂದ್ರಗಳಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನಿಗದಿಯಂತೆ ನೊಂದಾಯಿಸಿಕೊಂಡು ಸ್ವ ಇಚ್ಚೆಯಿಂದ ಅಸಗಮಿಸಿದವರಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ನೀಡಿದ ಬಳಿಕ 30 ನಿಮಿಷಗಳವರೆಗೆ ಲಸಿಕೆ ಪಡೆದುಕೊಂಡವರನ್ನು ವೀಕ್ಷಣೆ ಮಾಡಲಾಗುತ್ತಿದ್ದು ಯಾವುದೇ ರೀತಿಯ ಸಮಸ್ಯೆಯಾಗದಿರುವುದನ್ನು ಖಾತರಿಪಡಿಸಿಕೊಂಡು ಕಳುಹಿಸಲಾಗುತ್ತಿದೆ ಅಂತಾ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇನ್ನು ಲಸಿಕೆ ಪಡೆದುಕೊಂಡ ಬಳಿಕ ಪ್ರತಿಕ್ರಿಯಿಸಿದ ಕೋವಿಡ್ ವಾರಿಯರ್ ಯಾವುದೇ ರೀತಿಯ ಆತಂಕವಿಲ್ಲದೇ ಲಸಿಕೆಯನ್ನ ಪಡೆದುಕೊಂಡಿದ್ದು ಎಲ್ಲರೂ ಸಹ ಯಾವುದೇ ಭಯವಿಲ್ಲದೇ ಲಸಿಕೆ ಪಡೆದುಕೊಳ್ಳಿ ಅಂತಾ ತಿಳಿಸಿದ್ದಾರೆ.  

ಹೊನ್ನಾವರದಲ್ಲಿ ತಾಂತ್ರಿಕ ತೊಂದರೆ; ವಿಳಂಬವಾದ ಲಸಿಕಾ ವಿತರಣೆ!

ಹೊನ್ನಾವರ: ಕೊವಿಡ್ ಆ್ಯಪ್ ನಲ್ಲಿ ತಾಂತ್ರಿಕ ತೊಂದರೆಯಾದ ಕಾರಣ ಲಸಿಕಾ ವಿತರಣೆ ವಿಳಂಭವಾದ ಘಟನೆ ಹೊನ್ನಾವರದ ತಾಲ್ಲೂಕಾ ಆಸ್ಪತ್ರೆಯಲ್ಲಿ ನಡೆದಿದೆ.ಲಸಿಕಾ ವಿತರಣೆ ಸಂಬಂಧ ಕೊವಿಡ್ ಆ್ಯಪ್ ಸಿದ್ದಪಡಿಸಲಾಗಿದ್ದು ಅಲ್ಲಿ ನೊಂದಣಿಯಾದವರಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ನೀಡಿದ ಬಳಿಕ ಮತ್ತೆ ಆ ಆ್ಯಪ್ ನಲ್ಲಿ ಲಸಿಕೆ ತೆಗೆದುಕೊಂಡವರ ಬಗ್ಗೆ ಅಪಡೆಟ್ ಮಾಡಬೇಕಿದೆ. ಆದರೆ ಹೊನ್ನಾವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಷ್ಟೆ ಪ್ರಯತ್ನಿಸಿದರು ಆ್ಯಪ್ ಓಪನ್ ಆಗದ ಹಿನ್ನೆಲೆಯಲ್ಲಿ  ಈ ಬಗ್ಗೆ ದೆಹಲಿಯ ತಾಂತ್ರಿಕ ತಂಡದ ಗಮನಕ್ಕೆ ತರಲಾಗಿದೆ. ಆದರೆ ಅವರಿಂದಲೂ ಸರಿಪಡಿಸಲು ಸಾಧ್ಯವಾಗದ ಕಾರಣ ಕೊನೆಗೆ ಸದ್ಯ ಮ್ಯಾನುವಲ್ ನೋಂದಣಿ ಮಾಡಿಕೊಂಡು ನೋಂದಾಯಿತ ಆರೋಗ್ಯ  ಸಿಬ್ಬಂದಿಗೆ ಲಸಿಕೆ ನೀಡಲಾಯಿತು.

ಅಂಕೋಲಾ: ಪ್ರಥಮ ಹಂತದಲ್ಲಿ 50 ಜನರಿಗೆ ಲಸಿಕೆ

ಅಂಕೋಲಾ: ದೇಶಾದ್ಯಂತ ಜನವರಿ 16 ರಂದು ಆರಂಭವಾಗಿರುವ ಕೋವಿಶೀಲ್ಡ್ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಸರ್ವ ಸಿದ್ಧತೆ ಮಾಡಿಕೊಂಡಂತೆ ಅಂಕೋಲಾ ತಾಲೂಕಿನ ಸರ್ಕಾರಿ ಆಸ್ಪತ್ರೆ ಯಲ್ಲಿಯು ವಿಶೇಷ ಕೋವಿಡ್ ಲಸಿಕಾ ಕೇಂದ್ರ ಆರಂಭಿಸಿ, ಶನಿವಾರ ತಾಲೂಕಾ ಆಸ್ಪತ್ರೆಯ 50 ಜನರಿಗೆ ಪ್ರಥಮ ಹಂತದದಲ್ಲಿ ಪ್ರಾಯೋಗಿಕವಾಗಿ ಲಸಿಕೆ ವಿತರಣೆ ನಡೆಯಿತು.
ತಾಲೂಕಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಸರಳ ಕಾರ್ಯಕ್ರಮವನ್ನು ವಿವಿಧ ಸ್ತರದ ಜನಪ್ರತಿನಿಧಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮಾತನಾಡಿ ಈ ಹಿಂದೆ ಕೋವಿಡ್ ಸಂಕಷ್ಟ ಸಮಯದಲ್ಲಿ ತಾಲೂಕಿನ ವಿವಿಧ ಕೊರೊನಾ ವಾರಿಯರ್ಸ್‍ಗಳು ಉತ್ತಮ ಸೇವೆ ನೀಡಿದ್ದು, ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.

ತಾಲ್ಲೂಕು ಪಂಚಾಯತ ಅಧ್ಯಕ್ಷೆ ಸುಜಾತಾ ಗಾಂವಕರ, ತಹಸೀಲ್ದಾರ ಉದಯ ಕುಂಬಾರ ಸಾಂಧರ್ಭೀಕ ವಾಗಿ ಮಾತನಾಡಿ ಭಯ ಮುಕ್ತರಾಗಿ ಲಸಿಕೆ ಪಡೆದುಕೊಳ್ಳುವಂತೆ ಕರೆ ನೀಡಿದರು. ತಾಲೂಕಾ ಆರೋಗ್ಯಾಧಿಕಾರಿ ಡಾ. ನಿತೀನ್ ಪ್ರಾಸ್ತವಿಕವಾಗಿ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ನಾಯಕ ನಿರೂಪಿಸಿದರು.

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪಿ.ವೈ.ಸಾವಂತ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಹೇಂದ್ರ ನಾಯಕ, ವೈದ್ಯರಾದ ಡಾ. ಈಶ್ವರಪ್ಪ, ಸಂತೋಷಕುಮಾರ, ಪುರಸಭೆ ಉಪಾಧ್ಯಕ್ಷೆ ರೇಖಾ ಡಿ. ಗಾಂವಕರ, ಮುಖ್ಯಾಧಿಕಾರಿ ಬಿ.ಪ್ರಲ್ಹಾದ್, ಸ್ಥಳೀಯ ವಾರ್ಡ್ ಸದಸ್ಯ ವಿಶ್ವನಾಥ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೊದಲ ಹಂತದಲ್ಲಿ ತಾಲೂಕಿಗೆ 11 ಡೋಸ್ ಕೋವಿಶೀಡ್ಸ್ ಲಸಿಕೆ ಪೂರೈಸಲಾಗಿದ್ದು, 5 ಎಂ.ಎಲ್.ನ ಒಂದು ಬಾಟಲಿಯಿಂದ 0.5 ಎಂಎಲ್ ನಂತೆ ತಲಾ 10 ಮಂದಿಗೆ ಲಸಿಕೆ ವಿತರಣೆ ಮಾಡಬಹುದಾಗಿದೆ. ಲೈನ್ ಲೀಸ್ಟ್ ಪ್ರಕಾರ ಆರೋಗ್ಯ ಇಲಾಖೆಯ ಒಟ್ಟೂ 70 ಜನರಿಗೆ ಲಸಿಕೆ ನೀಡುವ ಗುರಿ ನಿಗಧಿ ಪಡಿಸ ಲಾಗಿತ್ತಾದರೂ 50 ಜನರಿಗಷ್ಟೇ ಲಸಿಕೆ ನೀಡಲಾಗಿದೆ. ನಾನಾ ಕಾರಣಗಳಿಂದ ಉಳಿದ 20 ಮಂದಿಗೆ ಮುಂದಿನ ದಿನಗಳಲ್ಲಿ ಲಸಿಕೆ ನೀಡಲಾಗುವುದೆಂದು ತಿಳಿದು ಬಂದಿದೆ.

ತಾಲೂಕಿನಲ್ಲಿ ಪ್ರಥಮವಾಗಿ ಡಿ ದರ್ಜೆಯ ಸಿಬ್ಬಂದಿ ಮಹೇಶ ನಾಯ್ಕ ಮತ್ತು ಮೆಡಿಶನ್ ವಿಭಾಗದ ಅಕ್ಷತಾ ಗೋವೇಕರ್ ಇವರಿಗೆ ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ಜ್ಯೋತಿ ಮತ್ತು ಕೋವಿಡ್ ಲಸಿಕಾ ಕೇಂದ್ರದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು. ತಾಲೂಕಾ ಆಸ್ಪತ್ರೆಯ ಇತರೇ ಕೊರೊನಾ ವಾರಿಯರ್ಸಗಳು ಸಹಕರಿಸಿದರು.

ಗರ್ಭಿಣಿಯರು, ಹಾಲು ಉಣಿಸುವ ತಾಯಿಂದಿರು, 18 ವರ್ಷದ ಒಳಗಿನವರು ಹಾಗೂ ಸದ್ಯ ಕೋವಿಡ್ ಗೆ ಒಳಗಾಗಿ ಸಕ್ರಿಯ ಹಂತದಲ್ಲಿರುವವರನ್ನು ಹೊರತು ಪಡಿಸಿ 18 ರಿಂದ 60 ವರ್ಷದ ಒಳಗಿನವರಿಗೆ ಮುಂದಿನ ದಿನಗಳಲ್ಲಿ ಲಸಿಕೆ ವಿತರಿಸುವ ಗುರಿ ಹೊಂದಲಾಗಿದೆ. ಆದರೆ ಲಸಿಕೆ ಪಡೆಯುವಂತೆ ಯಾವುದೇ ಒತ್ತಡವಿಲ್ಲಾ ಎಂದು ತಹಶೀಲ್ದಾರ ಉದಯ ಕುಂಬಾರ ತಿಳಿಸಿದ್ದಾರೆ.

ಕರೊನಾ ಲಸಿಕೆ ಪ್ರತಿಯೊಬ್ಬರನ್ನೂ ತಲುಪುವಂತಾಗಲಿ; ಚಂದ್ರಕಲಾ ಭಟ್ಟ

ಯಲ್ಲಾಪುರ: ಆತ್ಮನಿರ್ಭರ ಭಾರತದ ಪ್ರಮುಖ ಹೆಜ್ಜೆಯಾಗಿ ಕೊರೊನಾ ಲಸಿಕೆಯನ್ನು ಕಂಡು ಹಿಡಿಯಲಾಗಿದ್ದು, ಎಲ್ಲರನ್ನೂ ಲಸಿಕೆ ತಲುಪುವಂತಾಗಲಿ ಎಂದು ತಾ.ಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕೊರೊನಾ ಮಹಾಮಾರಿ ಜಗತ್ತಿನಿಂದಲೇ ದೂರವಾಗುವ ದಿನಗಳು ಶೀಘ್ರ ಬರುವಂತಾಗಲಿ ಎಂದರು.

ತಹಸೀಲ್ದಾರ ಗಣಪತಿ ಶಾಸ್ತ್ರಿ ಮಾತನಾಡಿ, ಕೊರೊನಾಗೆ ಲಸಿಕೆ ಬಂತೆಂದು ಮೈಮರೆಯಬಾರದು. ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು. ದೇಶದಲ್ಲಿ ಕೊರೊನಾ ಪ್ರಕರಣಗಳು ಶೂನ್ಯವಾಗುವವರೆಗೂ ಕೊರೊನಾ ವಿರುದ್ಧ ನಮ್ಮ ಹೋರಾಟ ಮುಂದುವರಿಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ಮಾತನಾಡಿ, ಜಗತ್ತಿನ ಎಲ್ಲೆಡೆ ಜನರನ್ನು ಕಂಗಾಲಾಗುವಂತೆ ಮಾಡಿದ, ಅನೇಕರ ಜೀವನವನ್ನೇ ನಾಶ ಮಾಡಿದ ಕೊರೊನಾ ವೈರಸ್‍ಗೆ ಇಷ್ಟು ಬೇಗ ಲಸಿಕೆ ಲಭ್ಯವಾಗಿರುವುದು ಸಂತಸದ ವಿಚಾರ. ಹಂತ ಹಂತವಾಗಿ, ಶೀಘ್ರದಲ್ಲಿ ಲಸಿಕೆ ಎಲ್ಲರನ್ನೂ ತಲುಪುವಂತಾಗಲಿ ಎಂದರು.

ಇದೇ ವೇಳೆ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ದೀಪಾ ಅಂಕೋಲೆಕರ್ ಅವರಿಗೆ ಪ್ರಥಮವಾಗಿ ಲಸಿಕೆ ನೀಡಲಾಯಿತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button