ಕೇಂದ್ರ ಸಾಹಿತ್ಯ ಅಕಾಡೆಮಿ ವಾರ್ಷಿಕ ಉತ್ಸವ : ದೆಹಲಿಯಲ್ಲಿ ಕನ್ನಡ ಕವಿತೆ ವಾಚಿಸಲಿರುವ ರೇಣುಕಾ ರಮಾನಂದ

ಅಂಕೋಲಾ: ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಮಾರ್ಚ 7 ರಿಂದ 12ರವರೆಗೆ 6 ದಿನಗಳ ಕಾಲ ದೆಹಲಿಯ ರವೀಂದ್ರ ಭವನದಲ್ಲಿ ಏರ್ಪಡಿಸಿರುವ ಅಕಾಡೆಮಿಯ ವಾರ್ಷಿಕ ಉತ್ಸವದಲ್ಲಿ ಭಾಗವಹಿಸಿ ಕನ್ನಡ ಭಾಷೆಯಲ್ಲಿ ಹಾಗೂ ಅದರ ಅನುವಾದವಾಗಿ ಹಿಂದಿ /ಇಂಗ್ಲಿಷ್ ನಲ್ಲಿ ಕವಿತೆಗಳನ್ನು ವಾಚಿಸಲು ಕರ್ನಾಟಕದಿಂದ ಈ ಬಾರಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ರೇಣುಕಾ ರಮಾನಂದರನ್ನು ಆಹ್ವಾನಿಸಲಾಗಿದೆ.
ದೆಹಲಿಯಲ್ಲಿ ಕನ್ನಡ ಕವಿತೆ ವಾಚಿಸಲಿರುವ ರೇಣುಕಾ ರಮಾನಂದ
ಆಸ್ಸಾಮಿ, ಬೋಡೋ, ತೆಲಗು, ಗುಜರಾತಿ, ರಾಜಸ್ಥಾನಿ, ಉರ್ದು, ಮರಾಠಿ ಹೀಗೆ ದೇಶದ ಎಲ್ಲ ಭಾಷೆಗಳ ಕಲರವದ ಸಮ್ಮಿಶ್ರ ಸದ್ದಿನ ಜೊತೆ ಕನ್ನಡವೂ ಸೇರಿಕೊಂಡು ಸಮನ್ವಯಿಸಲಿರುವ ಈ ಉತ್ಸವದಲ್ಲಿ ಮಾರ್ಚ 9 ರಂದು ರೇಣುಕಾ ಇವರು ಮೂರ್ನಾಲ್ಕು ಕನ್ನಡ ಕವಿತೆ ಹಾಗೂ ಅದರ ಅನುವಾದವನ್ನು ವಾಚಿಸಲಿದ್ದಾರೆ.
ಕವಿ ಕಥೆಗಾರ್ತಿಯಾಗಿ ಹೆಸರು ಮಾಡಿರುವ ರೇಣುಕಾ ರವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ, ಸಂಗಂ ರಾಷ್ಟ್ರೀಯ ಪ್ರಶಸ್ತಿಗಳ ಜೊತೆ ಇನ್ನೂ ಹಲವಾರು ಪುರಸ್ಕಾರಗಳನ್ನು ತಮ್ಮ ಕಾವ್ಯಕ್ಕಾಗಿ ಪಡೆದಿದ್ದಾರೆ. ಇವರ ಮೂರು ಕವಿತೆ ಹಾಗೂ ಒಂದು ಲೇಖನ ರಾಜ್ಯದ ನಾಲ್ಕು ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿದ್ದು, ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ ಇವರ ಕನ್ನಡ ಕವಿತೆ ದಾಖಲಾಗಿದ್ದನ್ನು ಈ ಸಮಯದಲ್ಲಿ ನೆನೆಯಬಹುದು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಕೂಡ ಪಡೆದಿರುವ ರೇಣುಕಾರ ಈ ದೆಹಲಿ ಕಾರ್ಯಕ್ರಮಕ್ಕೆ ಅಂಕೋಲಾ ಕಸಾಪ, ಕರ್ನಾಟಕ ಸಂಘ, ಹಾಗೂ ಜಿಲ್ಲಾ ಕಸಾಪ, ಶಿಕ್ಷಣ ಇಲಾಖೆಯ ಎಲ್ಲ ಮಾನ್ಯರು ಶುಭ ಹಾರೈಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ