Follow Us On

WhatsApp Group
Important
Trending

ಉತ್ತರಕನ್ನಡದಲ್ಲಿ 571 ಕೇಸ್ : 12 ಮಂದಿ ಸಾವು: ಅಂಕೋಲಾದಲ್ಲಿ ವಕ್ರ ದೃಷ್ಠಿ ಬೀರಿತೇ ಕರಿ ನಂಜಾಣುವಿನ ಮಾರಿ: ಕರೊನಾ ಸೇನಾಧಿಪತಿಗೆ ಸಾಂಕೇತಿಕ ಗೌರವ

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಗುರುವಾರ ಒಟ್ಟು 571 ಕೇಸ್ ದಾಖಲಾಗಿದೆ. ಇದೇ ವೇಳೆ ಜಿಲ್ಲೆಯಾದ್ಯಂತ 12 ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತ ವಿವರ ಇಲ್ಲಿದೆ ನೋಡಿ

ಅಂಕೋಲಾ: ತಾಲೂಕಿನಲ್ಲಿ ಗುರುವಾರ 14 ಹೊಸ ಕೋವಿಡ್ ಕೇಸಗಳು ದಾಖಲಾಗಿದ್ದು, ಒಟ್ಟೂ 157ಪ್ರಕರರಣಗಳು ಸಕ್ರಿಯವಾಗಿದೆ. 82 ರ ವೃದ್ಧನೋರ್ವ ಕೊವಿಡ್ ನಿಂದ ಮೃತಪಟ್ಟಿದ್ದು ಈ ವರೆಗಿನ ಒಟ್ಟೂ ಸಾವಿನ ಪ್ರಕರಣಗಳ ಸಂಖ್ಯೆ 54 ಕ್ಕೆ ಏರಿಕೆಯಾಗಿದೆ.

ಸೋಂಕು ಮುಕ್ತರಾದ 35 ಜನರನ್ನು ಬಿಡುಗಡೆ ಗೊಳಿಸಲಾಗಿದ್ದು, 27 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊವಿಡ್ ಕೇರ್ ಸೆಂಟರನಲ್ಲಿ 17, ಹೋಂ ಐಸೋಲೇಶನ್ ನಲ್ಲಿ 89 ಜನರಿದ್ದಾರೆ. . ಲಾಕ್ ಡೌನ್ ಮತ್ತಿತರ ಕಾರಣಗಳಿಂದ ಕರೊನಾ ಮಾರಿಯ ಆರ್ಭಟ ಕಡಿಮೆಯಾಗಿ, ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂಬ ಕೊಂಚ ನೆಮ್ಮದಿ ವಾತಾವರಣ ಕಂಡುಬರುತ್ತಿದ್ದು, ತಜ್ಞರ ಸಲಹೆ ಮೇರೆಗೆ ಸೋಂಕಿನ ಸರಪಳಿ ಕತ್ತರಿಸಲು ಲಾಕ್ ಡೌನ್ ಅವಧಿಯನ್ನು ಜೂನ್ 14ರ ವರೆಗೆ ವಿಸ್ತರಿಸಿ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ.

ಈ ನಡುವೆ ಬ್ಲಾಕ್ ಫಂಗಸ್ ಮಾರಿಯ ವಕ್ರದೃಷ್ಟಿ ಅಂಕೋಲಾ ತಾಲೂಕಿನ ಮೇಲೂ ಬಿದ್ದಿದೆ ಎನ್ನಲಾಗಿದ್ದು,ಗ್ರಾಮೀಣ ಭಾಗದ 62 ರ ವೃದ್ದ ರೋರ್ವರನ್ನು ಕಳೆದ 15 ದಿನಗಳ ಹಿಂದೆ ಕರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು..

ಮೇ 31 ರಂದು ವೃದ್ಧರ ಎಡಗಣ್ಣಿನ ಬಳಿ ಉಬ್ಬಿರುವುದನ್ನು ಗಮನಿಸಿದ್ದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಾರವಾರದ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿದ್ದರು. ಸಿಟಿ ಸ್ಕ್ಯಾನ್ ಪರೀಕ್ಷೆ ಬಳಿಕ ವೃದ್ಧರಲ್ಲಿ ಕರಿ ನಂಜಾಣುವಿನ ಲಕ್ಷಣಗಳಿರುವ ಸಾಧ್ಯತೆ ಗುರುತಿಸಿದ ಅಲ್ಲಿಯ ವೈದ್ಯರು, ರೋಗಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸುವಂತೆ ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ ರೋಗಿಯು ಮಂಗಳೂರಿಗೆ ತೆರಳಿ ಚಿಕಿತ್ಸೆಗೊಳಪಡಲು ಇಚ್ಚಿಸದೇ ಮನೆಗೆ ಮರಳಿದ್ದ ಎನ್ನಲಾಗಿದ್ದು, ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಆತನ ಮನವೊಲಿಸಿದ ಕುಟುಂಬಸ್ಥರು, ಚಿಕಿತ್ಸೆಗಾಗಿ ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಕುರಿತು ಖಚಿತತೆ ದೊರೆಯಬೇಕಿದೆ ಎನ್ನಲಾಗಿದೆ.

ಲಾಕ್ ಡೌನ್ ಸಡಿಲಿಕೆ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬೀಳುವ ಜನ ನಿಯಂತ್ರಣಕ್ಕೆ ತಾಲೂಕಾಡಳಿದ ಮುಖ್ಯಸ್ಥ ತಹಶೀಲ್ದಾರ ಉದಯ ಕುಂಬಾರ, ಸಿಪಿಐ ಕೃಷ್ಣಾನಂದ ನಾಯಕ, ಪಿಎಸೈಗಳಾದ ಈ ಸಿ ಸಂಪತ್, ಪ್ರೇಮನ ಗೌಡ ಪಾಟೀಲ್, ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ಬಿ ಪ್ರಹ್ಲಾದ್ , ಕಂದಾಯ, ಮೋಲೀಸ್, ಮತ್ತು ಪುರಸಭೆಯ ಸಿಬ್ಬಂದಿಗಳನ್ನೊಳ ಗೊಂಡ ತಂಡ ಮುಂಜಾನೆಯಿಂದಲೇ ರಸ್ತೆಗಿಳಿದು ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಶ್ರಮಿಸುತ್ತಿದೆ.

ಮನೆ ಮನೆಗೆ ತೆರಳಿ ತರಕಾರಿ ಮಾರಾಟ ಮಾಡಬೇಕಾದ ಕೆಲ ವ್ಯಾಪಾರಸ್ಥರು, ಸಂಬಂಧಿಸಿದ ಇಲಾಖೆಗಳ ಕಣ್ತಪ್ಪಿಸಿ ಒಂದೆಡೆ ನಿಂತು ಅಲ್ಲಿಯೇ ಜೋರಾಗಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದರು. ಅಂತವರಿಗೆ ಬುಧವಾರ ದಂಡ ವಿಧಿಸಿ ಎಚ್ಚರಿಸಿದ್ದರಿಂದ,ಇಂದು ಮಾರುಕಟ್ಟೆಯಲ್ಲಿ ಜನ ನಿಯಂತ್ರಣ ಕಂಡು ಬಂತು.

ಕೊರೊನಾ ವಿರುದ್ಧ ಸೆಣಸಲು ವಿವಿಧ ಇಲಾಖೆಯ ಸೇನಾನಿಗಳು ಅವಿರತ ಶ್ರಮಿಸುತ್ತಿದ್ದು,ಅವರೆಲ್ಲರ ಪರವಾಗಿ ತಾಲೂಕಾ ಆಡಳಿತದ ಮುಖ್ಯಸ್ಥ ಹಾಗೂ ಕೊರೊನಾ ವಾರಿಯರ್ಸ್ ಸೇನಾಧಿಪತಿ ತಹಸೀಲ್ದಾರ್ ಉದಯ ಕುಂಬಾರ ಅವರಿಗೆ ವಕೀಲ ಮಿತ್ರರಾದ ಉಮೇಶ್ ನಾಯ್ಕ,ವಿನೋದ್ ಶ್ಯಾನಭಾಗ್, ನಾಗಾನಂದ ಬಂಟ್ ಸಾಂಕೇತಿಕವಾಗಿ ಸನ್ಮಾನಿಸಿ ಗೌರವಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button