ಮದುವೆಯ ದಿನವೇ ವಧುವಿನ ಆಭರಣ ಕದ್ದಿದ್ದ ಚಾಲಾಕಿ ಕಳ್ಳಿ ಅಂದರ್ : ಸಂಬಂಧಿಯಿಂದಲೇ ಕಳ್ಳತನ: ಬೆಡ್ ರೂಮ್‌ ನಲ್ಲಿದ್ದ ಆಭರಣ‌ ಮಾಯವಾಗಿತ್ತು!

ಹೊನ್ನಾವರ : ಮದುವೆಯ ದಿನವೇ ವಧುವಿನ ಆಭರಣ ಕದ್ದಿದ್ದ ಚಾಲಾಕಿ ಕಳ್ಳಿಯನ್ನು ಪತ್ತೆಹಚ್ಚಿರುವ ಹೊನ್ನಾವರ ಪೊಲೀಸರು, ಕದ್ದ ಆಭರಣವನ್ನು ವಶಪಡಿಸಿಕೊಂಡು ಆರೋಪಿಯನ್ನಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಂಬಿಯ ಹಿಂದೆ ಕಳುಹಿಸಿದ ಘಟನೆ ನಡೆದಿದೆ.

ಪ್ರಕರಣವನ್ನು ಭೇದಿಸಿ ಕಳ್ಳತನ ಮಾಡಿದ್ದ ಆರೋಪಿ ಮಹಿಳೆಯಾದ ಶ್ರೀಮತಿ ಶಾಹೀರಾಬಾನು ಪಾಲಕ್ ಕೋಂ ಸಾದಿಕ್ ಶೇಕ್(41) ಬಂದರು ರಸ್ತೆಯ ಅಸೂರಖಾನ್ ಗಲ್ಲಿ ಹೊನ್ನಾವರ ಇವರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ, ಕಳ್ಳತನವಾದ 50.3 ಗ್ರಾಂ ತೂಕದ ಅಂದಾಜು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಹಾರವನ್ನು ಹೊನ್ನಾವರ ಪೊಲೀಸರು ಜಪ್ತುಪಡಿಸಿಕೊಂಡಿರುತ್ತಾರೆ. ಆರೋಪಿ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದ ಆದೇಶದಂತೆ ಕಾರವಾರ ಜಿಲ್ಲಾ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಬಂಧಿತ ಆರೋಪಿಯನ್ನು ಹೊನ್ನಾವರ ಬಂದರು ರಸ್ತೆಯ ಅಸೂರಖಾನ್ ಗಲ್ಲಿಯ ಶಾಹೀರಾಬಾನು ಪಾಲಕ್ ಕೋಂ ಸಾಧಿಕ್ ಶೇಕ್ (41) ಎಂದು ಗುರುತಿಸಲಾಗಿದೆ. ಮದುವೆಯಾಗಿದ್ದ ಮುಶಾಹೀನ್ ವರನ ಮನೆಯಿರುವ ಹೊನ್ನಾವರ ಪಟ್ಟಣದ ಗಾಂಧಿನಗರಕ್ಕೆ ಬಂದಾಗ ಮದುವೆ ಶಾಸ್ತ್ರಗಳನ್ನು ಪೂರೈಸಿ ಪ್ರೆಶ್ ಆಗಲು ಸ್ನಾನಗೃಹಕ್ಕೆ ಹೋಗುವಾಗ ಬೆಡ್ ರೂಮಿನಲ್ಲಿ ತೆಗೆದಿಟ್ಟು ಹೋಗಿದ್ದ ಆಭರಣ ವಾಪಸ್ ಬಂದು ನೋಡುವಷ್ಟರಲ್ಲಿ ಮಾಯವಾಗಿತ್ತು.

ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಗೆ ಕರ್ಕಿಕೋಡಿಯ ಅಬ್ದುಲ್ ಸತ್ತಾರ್ ಮೈನುದ್ದೀನ್ ಶೇಖ್ ಎಂಬವರು ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಬಂಗಾರದ ಆಭರಣ ಕಳ್ಳತನವಾಗಿದೆ ಎನ್ನಲಾದ ಸಮಯದಲ್ಲಿ ಮನೆಯಲ್ಲಿ ಇದ್ದವರ ಮಾಹಿತಿ ಕಲೆ ಹಾಕಿ, ಕೂಲಂಕುಷವಾಗಿ ಪರಿಶೀಲಿಸಿದಾಗ ಸಿಕ್ಕ ಸುಳಿವುಗಳು ಶಾಹೀರಾಬಾನು ಕಡೆ ಬೆರಳು ಮಾಡುತ್ತಿದ್ದವು.

ಮದುಮಗಳಿಗೆ ದೂರದ ಸಂಬಂಧಿಯೂ ಆಗಿದ್ದ ಶಾಹೀರಾಬಾನು, ಕದ್ದ ಬಂಗಾರದ ಆಭರಣವನ್ನು ಹುಡುಗನೊಬ್ಬನ ಕೈಗೆ ಕೊಟ್ಟು ಆತನ ಮೂಲಕ ಬ್ಯಾಂಕ್ನಲ್ಲಿ ಅಡವಿಟ್ಟು ಹಣವನ್ನೂ ಪಡೆದುಕೊಂಡಿದ್ದು ತನಿಖೆಯಲ್ಲಿ ಬಹಿರಂಗವಾಗಿದೆ.

ಕಳ್ಳತನ ಪ್ರಕರಣವನ್ನು ಬೇಧಿಸಿದ ಸಿ.ಪಿ.ಐ ಶ್ರೀಧರ.ಎಸ್.ಆರ್ ನೇತೃತ್ವದ, ಅಪರಾಧ ವಿಭಾಗದ ಪಿ.ಎಸ್.ಐ ಸಾವಿತ್ರಿ ನಾಯಕ, ಪಿ.ಎಸ್.ಐ(ಕಾ.ಸು) ಶಶಿಕುಮಾರ್ ಸಿ.ಆರ್, ಪಿ.ಎಸ್.ಐ 2 ಮಹಾಂತೇಶ ನಾಯಕ, ಪ್ರೊ.ಪಿ.ಎಸ್.ಐ ಶಾಂತಿನಾಥ, ಸಿಬ್ಬಂದಿಗಳಾದ ಸಿ.ಹೆಚ್.ಸಿ ರಮೇಶ ಲಮಾಣಿ, ಸಿ.ಹೆಚ್.ಸಿ ಕೃಷ್ಣ ಗೌಡ, ಸಿ.ಪಿ.ಸಿ ಮಹಾವೀರ, ಸಿ.ಪಿ.ಸಿ ರಯೀಸ್ ಭಗವಾನ್ ವರನ್ನೊಳಗೊಂಡ ತಂಡದ ಪ್ರಯತ್ನವನ್ನು ಭಟ್ಕಳ ಡಿ.ವೈ.ಎಸ್ಪಿ ಬೆಳ್ಳಿಯಪ್ಪ,ಕಾರವಾರ ಎ.ಎಸ್ಪಿ ಬದ್ರಿನಾಥ, ಎಸ್ಪಿ ಶಿವಪ್ರಕಾಶ ದೇವರಾಜು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ಹೊನ್ನಾವರ

Exit mobile version