Important
Trending

ಕೆಲಸ ಮುಗಿಸಿ ಬರುತ್ತಿದ್ದ ವೇಳೆ ಬೈಕ್ ಗೆ ಡಿಕ್ಕಿ ಹೊಡೆದ ಲಾರಿ: ನ್ಯಾಯಾಲಯದ ಓರ್ವ ಸಿಬ್ಬಂದಿ ಸಾವು: ಮತ್ತೊಬ್ಬ ಗಂಭೀರ

ಅಂಕೋಲಾ ಜುಲೈ 30 : ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತ ಪಟ್ಟು, ಹಿಂಬದಿ ಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ರಾ.ಹೆ. 66 ರ ಹಾರವಾಡ ಕ್ರಾಸ ಬಳಿ ನಡೆದಿದೆ.

ಹೊನ್ನಳ್ಳಿಯ ರವಿ ಲೋಕು ಗೌಡ (26) ಮೃತ ದುರ್ದೈವಿಯಾಗಿದ್ದಾನೆ. ಬೈಕ್ ಹಿಂಬಂದಿ ಸವಾರ ಹಟ್ಟಿಕೇರಿ ನಿರಾಶ್ರಿತರ ಕಾಲನಿಯ ಹರೀಶ ಸೋಮು ಗೌಡನಿಗೆ ಗಂಭೀರ ಗಾಯಗಳಾಗಿದ್ದು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರವಾರದ ಜಿಲ್ಲಾ ನ್ಯಾಯಾಲಯದಲ್ಲಿ ಕರ್ತವ್ಯ ಮುಗಿ ಸಿ, ಮನೆಗೆ ಹಿಂತಿರುಗುತ್ತಿದ್ದ ಇರ್ವ ಸಹೋದ್ಯೋಗಿ ಮಿತ್ರರು ಕಾರವಾರದಿಂದ ಅಂಕೋಲಾ ಮಾರ್ಗವಾಗಿ ಬೈಕ್ನಲ್ಲಿ ಬರುತ್ತಿದ್ದ ವೇಳೆ ಹಾರವಾಡ ಕ್ರಾಸ್ ಬಳಿ ಎದುರಿನಿಂದ ಬಂದ ಲಾರಿ ರಭಸವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿ.ವೈ.ಎಸ್. ಪಿ ಅರವಿಂದ ಕಲಗುಜ್ಜಿ, ಆರಕ್ಷಕ ನಿರೀಕ್ಷಕ ಸಂತೋಷ ಶೆಟ್ಟಿ, ಪಿ.ಎಸ್. ಐ ಪ್ರವಿಣಕುಮಾರ್ ಅಪಘಾತ ಸ್ಥಳಕ್ಕೆಭೇಟಿ ನೀಡಿ ಪರಿಶೀಲಿಸಿದರು. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಸಹಕರಿಸಿದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ಅಂಕೋಲಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತ ರವಿ ಲೋಕು ಗೌಡ ತನ್ನ ಸೌಮ್ಯ ಸ್ವಭಾವ ರಿಂದ ,ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿದ್ದ. ಆತನ ನಿಧನದ ಸುದ್ದಿ ಕೇಳಿ ಅಂಕೋಲಾ , ಕಾರವಾರ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಕೆಲ ಪರಿಚಿತ ಸಿಬ್ಬಂದಿಗಳು,ಆಪ್ತರು ಹಾಗೂ ಸಂಬಂಧಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಹೊನ್ನಳ್ಳಿಯ ಯುವಕನೋರ್ವ ಇತ್ತೀಚಿಗಷ್ಟೇ ರಸ್ತೆ ಅಪಘಾತದಲ್ಲಿ ಮೃತಪಟ್ಟ ನೋವು ಮರೆಯುವ ಮುನ್ನವೇ,ಅದೇ ಊರಿನ ಇನ್ನೋರ್ವ ಯುವಕನು ದುರಂತ ಸಾವಿಗೀಡಾಗಿರುವುದು ಗ್ರಾಮಸ್ಥರಲ್ಲಿ ಶೋಕದ ವಾತಾವರಣ ಮೂಡಿಸಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button