ಪ್ರಯಾಣಿಕನ ಸೋಗಿನಲ್ಲಿ ಕಳ್ಳತನ: ರಾಜಹಂಸ ಬಸ್ ನ ಲಗೇಜ್ ಕ್ಯಾರಿಯರ್ ನಲ್ಲಿ ಪ್ರಯಾಣಿಕರ ಐದುವರೆ ಲಕ್ಷ ರೂಪಾಯಿ ಕದ್ದ ಆರೋಪಿ ಅಂದರ್: ಪೊಲೀಸರ ಕಾರ್ಯಾಚರಣೆ

ಸಿದ್ದಾಪುರ: ಶಿರಸಿಯಿಂದ ಬೆಂಗಳೂರಿಗೆ ಹೋಗುವ ರಾಜಹಂಸ ಬಸ್‌ನಲ್ಲಿ ಪ್ರಯಾಣಿಕರ ಹಣವನ್ನು ಕದ್ದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು, ಆರೋಪಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಸುಮಾರು 5.50 ಲಕ್ಷ ನಗದು ಇದ್ದ ಬ್ಯಾಗ್ ಅನ್ನು ಕಳವು ಮಾಡಿದ್ದ.

ನವೆಂಬರ್ 3 , 2020 ರಂದು ರಾತ್ರಿ ಶಿರಸಿಯಿಂದ ಬೆಂಗಳೂರಿಗೆ ಹೋಗುವ ರಾಜಹಂಸ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದಾಪುರ ತಾಲೂಕಿನ ನೆಲಮಾಂವು ಗ್ರಾಮದ ಅಣಲೇಬೈಲು ನಿವಾಸಿಗಳಾದ ರಘುಪತಿ ಭಟ್ ಹಾಗೂ ಗಣಪತಿ ಭಟ್ ಎನ್ನುವವರು ನಗದು ಇದ್ದ ಬ್ಯಾಗನ್ನು ಬಸ್ಸಿನ ಲಗೇಜ್ ಕ್ಯಾರಿಯರ್ ಮೇಲೆ ಇಟ್ಟಿದ್ದರು. ಆದರೆ ಅದನ್ನು ಯಾರೋ ಕಳವು ಮಾಡಿದ್ದು, ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಳವುಗೈದ ಆರೋಪಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮಲ್ಲಯ್ಯ ಭೋವಿ ಎನ್ನುವಾತನನ್ನು ಪತ್ತೆ ಹಚ್ಚಿ ಬಂಧಿಸಿ ಆರೋಪಿಯಿಂದ 1 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ,. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ. ಪ್ರಕರಣ ದಾಖಲಿಸಿಕೊಂಡ 9 ತಿಂಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ ಸ್ಪೆಕ್ಟರ್ ಕುಮಾರ್ ಕೆ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version