ಮನೆಯಂಗಳದಲ್ಲಿ ಆಟವಾಡುತ್ತಿದ್ದ ವೇಳೆ ವಿಷಪೂರಿತ ಹಾವು ಕಡಿತ : ಕೊನೆಗೂ ಬದುಕುಳಿದ ಪುಟಾಣಿ ಜೀವ

ಭಟ್ಕಳ: ಭಾನುವಾರದ ರಜೆಯ ನಡುವೆಯೂ ವಿಷಪೂರಿತ ಹಾವು ಕಡಿದ 4 ವರ್ಷದ ಬಾಲಕಿಗೆ ಚಿಕಿತ್ಸೆ ನೀಡಿದ ತಾಲ್ಲೂಕು ಆಸ್ಪತ್ರೆಯ ಮಕ್ಕಳ ವೈದ್ಯ ಸುರಕ್ಷಿತ ಶೆಟ್ಟಿ ತಮ್ಮ ಕರ್ತವ್ಯ ಪ್ರಜ್ಞೆಯಿಂದ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ತಾಲ್ಲೂಕಿನ ಶಿರಾಲಿ ಗ್ರಾಮ ಪಂಚಾಯ್ತಿ ಗುಡಿಹಿತ್ತಲ ಗ್ರಾಮದ ನಿತೀಕ್ಷಾ ರಾಜೇಶ ನಾಯ್ಕ ಎಂಬ 4 ವರ್ಷದ ಬಾಲಕಿ ಮನೆಯಂಗಳದಲ್ಲಿ ಆಟ ಆಡುವಾಗ ನಾಗರ ಹಾವು ಕಡಿದಿತ್ತು.

ಹಾವು ಕಡಿದ ಅರ್ಧ ಗಂಟೆಯ ನಂತರ ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಭಾನುವಾರದ ರಜೆಯಿದ್ದರೂ ಕೂಡ ಆಸ್ಪತ್ರೆಯ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರ ಕರೆಯ ಮೇರೆಗೆ ತಕ್ಷಣ ಆಸ್ಪತ್ರೆಗೆ ಧಾವಿಸಿದ ವೈದ್ಯ ಸುರಕ್ಷಿತ ಶೆಟ್ಟಿ ಸೂಕ್ತ ಸಮಯದಲ್ಲಿ ಬಾಲಕಿಗೆ ಚಿಕಿತ್ಸೆ ನೀಡಿ ಬದುಕುಳಿಸಿದ್ದಾರೆ.

ಹಾವು ಕಡಿದು ಅರೆಪ್ರಜ್ಞಾವಸ್ಥಿತಿಯಲ್ಲಿದ್ದ ಬಾಲಕಿಗೆ ವೈದ್ಯ ಸುರಕ್ಷಿತ ಶೇಟ್ಟಿ 20 ಆಂಟಿ ಸ್ನೇಕ್ ವಿನೋಮಾ ಇಂಜೆಕ್ಷನ್ ನೀಡಿ, ದೇಹದಲ್ಲಿ ವಿಷ ಏರದಂತೆ ತಡೆದರು. ಸದ್ಯ ಬಾಲಕಿ ಸರ್ಕಾರಿ ಆಸ್ಪತ್ರೆಯ ಐಸಿಯು ವಾರ್ಡನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version