ಮನೆಯಿಂದ‌ ತೆರಳುತ್ತಿರುವ ವೇಳೆ ಕಾಲುಜಾರಿ ಹಳ್ಳಕ್ಕೆ ಬಿದ್ದ ಬಾಲಕ ಶವವಾಗಿ ಪತ್ತೆ | ಕುಟುಂಬದವರಲ್ಲಿ ಸ್ಮಶಾನಮೌನ

ಅಂಕೋಲಾ: ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಬಾಲಕನೋರ್ವ ಮೃತ ಪಟ್ಟ ಘಟನೆ ಇಲ್ಲಿನ ಮೊಗಟಾ ಗ್ರಾಪಂನ ಕೆಂಕಣಿ ವ್ಯಾಪ್ತಿಯಲ್ಲಿ ಸಂಭವಿಸಿದೆ. ಭರತ್ ಪ್ರಶಾಂತ ನಾಯಕ (13) ಮೃತ ದುರ್ದೈವಿ ಬಾಲಕನಾಗಿದ್ದು, ಸ್ಥಳೀಯ ಕಿ.ಪ್ರಾ ಶಾಲೆಯ ವಿದ್ಯಾರ್ಥಿಯಾಗಿದ್ದ.

ಈತ ತನ್ನ ಮನೆಯಿಂದ ಹತ್ತಿರದ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹಳ್ಳಕ್ಕೆ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಅವಘಡದಿಂದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೃತನ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ಸಂಜೆ ವೇಳೆಗೆ ಮೃತ ದೇಹ ಪತ್ತೆಯಾಗಿದ್ದು, ಪಿ.ಎಸ್. ಐ ಪ್ರವಿಣಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೊಗಟಾ ಗ್ರಾಮ ಪಂಚಾಯತ್ ಅಧ್ಯಕ್ಷ ದೇವನಾಂದ ನಾಯ್ಕ,ಗ್ರಾಮ ಲೆಕ್ಕಾಧಿಕಾರಿ ಐಶ್ವರ್ಯ,ಸಿಬ್ಬಂದಿ ಸುಹಾಸ್ ನಾಯಕ ಹಾಗೂ ಇತರರಿದ್ದರು.

ಮೃತ ಬಾಲಕನ ಕುಟುಂಬದ ಸಂಬಂಧಿಗಳು, ಸ್ಥಳೀಯ ನಾಗರಿಕರು ಮೃತದೇಹವನ್ನು ನೀರಿನಿಂದ ಮೇಲೆತ್ತಲು ಸಹಕರಿಸಿದ್ದರು. ಶಾಸಕಿ ರೂಪಾಲಿ ನಾಯ್ಕ ತಮ್ಮ ಕುಟುಂಬದ ಟ್ರಸ್ಟ್ ವತಿಯಿಂದ ನೀಡಿದ್ದ, ಶೃದ್ಧಾಂಜಲಿ ವಾಹನದ ಮೂಲಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲು ಚಾಲಕರಾದ ನಾಗರಾಜ್ ಐಗಳ ಮತ್ತು ಶಿವಾ ನಾಯ್ಕ ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version