ಆರ್ ಎಸ್ ಎಸ್ ಸಂಸ್ಥಾಪನಾ ದಿನಾಚರಣೆ ಹಿನ್ನಲೆ: ಗಣವೇಷ ದಾರಿಗಳಿಂದ ಶಿಸ್ತುಬದ್ಧ ಪಥಸಂಚಲನ

ಅಂಕೋಲಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ 96ನೇ ಸಂಸ್ಥಾಪನಾ ದಿನಾಚರಣೆಯನ್ನು,ಅಂಕೋಲಾ ತಾಲೂಕಿನಲ್ಲಿ ಪಥಸಂಚಲನ ಮೆರವಣಿಗೆಯೊಂದಿಗೆ ಸರಳವಾಗಿ ಆಚರಿಸಲಾಯಿತು.

ರಾಷ್ಟ್ರಾಭಿಮಾನ ಹಾಗೂ ಸೇವೆಯ ಪ್ರತೀಕದಂತಿರುವ ಆರೆಸ್ಸೆಸ್ ಸಂಘಟನೆಗೆ ಇಂದು 96ರ ಶುಭ ಗಳಿಗೆ 1925ರ ಸೆಪ್ಟೆಂಬರ್ 27ರಂದು ಮಹಾರಾಷ್ಟ್ರದ ನಾಗಪುರದಲ್ಲಿ ವಿಜಯ ದಶಮಿ ದಿನದಂದೇ ಪ್ರಾರಂಭವಾದ ಈ ಸಂಘಟನೆ ಇಂದು ದೇಶದಾದ್ಯಂತ ಅತಿ ದೊಡ್ಡ ಸಂಘಟನೆಯಾಗಿ ಹಲವು ಶಾಖೆಗಳ ಮೂಲಕ ಸೇವೆ ಸಲ್ಲಿಸುತ್ತಿದೆ.

ಅಂಕೋಲಾ ತಾಲೂಕಿನಲ್ಲಿಯೂ ಆರೆಸೆಸ್ನ ಬಲಿಷ್ಠ ಸಂಘಟನೆಯಾಗಿದ್ದು ಪ್ರತಿನಿತ್ಯ ಬೆಳಿಗ್ಗೆ ಸಂಘದ ಪ್ರಮುಖರು ಮತ್ತಿತರ ಕಾರ್ಯಕರ್ತರು ಒಟ್ಟಾಗಿ,ಸಂಘದ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ದಸರಾ ಹಬ್ಬದ ದಿನವಾದ ಶುಕ್ರವಾರ ಅಂಕೋಲಾ ತಾಲೂಕಿನಲ್ಲಿ ಸಾಂಕೇತಿಕ ಕಾರ್ಯಕ್ರಮ ನಡೆಯಿತು.

ಗಣವೇಷ ದಾರಿಗಳು ಶಿಸ್ತುಬದ್ಧ ಪಥಸಂಚಲನ ನಡೆಸಿ, ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಸಾಗಿ ಜೈಹಿಂದ್ ಪ್ರೌಢಶಾಲೆಯ ಆವರಣದಲ್ಲಿ ಜಮಾವಣೆಗೊಂಡರು.. ಸಂಘದ ಸಂಸ್ಥಾಪಕರಾದ ಡಾಕ್ಟರ್ ಕೇಶವ್ ಬಲಿರಾಂ ಹೆಗಡೆವಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಗುರೂಜಿಯವರ ಭಾವಚಿತ್ರಕ್ಕೂ ವಂದಿಸಿ ಗೌರವಿಸಲಾಯಿತು.

ಅಂಕೋಲಾ ಶಾಖೆಯ ಸಂಘದ ಪ್ರಮುಖರು ಸಂಘದ ತತ್ವಾದರ್ಶಗಳನ್ನು ವಿವರಿಸಿ,ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಸಂಘದ ಸದಸ್ಯರು ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.ಬರುವ ಫೆಬ್ರವರಿಯಲ್ಲಿ ನಡೆಯುವ ತಾಲೂಕ ಸಮಾವೇಶಕ್ಕೆ ಈಗಿನಿಂದಲೇ ಪೂರ್ವಸಿದ್ಧತೆ ಮಾಡಿಕೊಂಡು ಸಮಾವೇಶ ಯಶಸ್ವಿಗೊಳಿಸಲು ಕರೆ ನೀಡಿದರು .

ಪಟ್ಟಣ ವ್ಯಾಪ್ತಿಯ ವಿವಿಧ ವ್ಯಾಪಾರಸ್ಥರು,ಇತರೆ ಪ್ರಮುಖರು,ಗ್ರಾಮಾಂತರ ಭಾಗದವರೂ ಸೇರಿದಂತೆ ಹಿರಿ ಕಿರಿಯರು ಗಣವೇಷಧಾರಿಗಳಾಗಿ ಹೆಜ್ಜೆ ಹಾಕಿದರೆ, ಇದೇ ವೇಳೆ ಆಕರ್ಷಕ ಬ್ಯಾಂಡ್ ವಾದ್ಯವೂ ಗಮನ ಸೆಳೆಯಿತು. ಸಿಪಿಐ ಸಂತೋಷ್ ಶೆಟ್ಟಿ,ಪಿಎಸ್ಐ ಪ್ರವೀಣ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು,ಕರ್ತವ್ಯ ನಿರ್ವಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ್ ಅಂಕೋಲಾ

Exit mobile version