ಮಾನವೀಯತೆಯಿಂದಾಗಿ ಮಾದರಿಯಾದ ‘ಸಾದ್ವಿಸೈಲ್’

ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದನೆ
ತಂದೆಯ ಹಾದಿಯಲ್ಲೇ ಸಾಗಿದ್ದಾಳೆ ಮಗಳು

ಕಾರವಾ: ಕರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ಆರ್ಭಟ ತೋರಿಸುತ್ತಿದ್ದು ಜಗತ್ತಿನ ಎಲ್ಲಾ ದೇಶಗಳಿಗೂ ವ್ಯಾಪಿಸಿ ಮನುಕುಲದ ನಿದ್ದೆಗೆಡಿಸಿದೆ. ಭಾರತಕ್ಕೂ ಲಗ್ಗೆ ಇಟ್ಟಿರುವ ಈ ಮಹಾಮಾರಿಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಹಂತಗಳಲ್ಲಿ ಲಾಕ್‌ಡೌನ್ ಜಾರಿಗೆ ತಂದು ತಕ್ಕಮಟ್ಟಿನ ಪರಿಹಾರ ಕಂಡುಕೊಂಡಿದ್ದವು. ಲಾಕ್‌ಡೌನ್ ಅವಧಿಯಲ್ಲಿ ದೇಶದ ನಾನಾ ಭಾಗಗಳಲ್ಲಿ ಸಿಲುಕಿಕೊಳ್ಳುವಂತಾದ ಅನಿವಾರ್ಯತೆಯಿಂದ ಕೋಟ್ಯಾಂತರ ಮಂದಿ ತಮ್ಮ ತಮ್ಮ ಊರು-ಮನೆ ಸೇರಿಕೊಳ್ಳಲಾಗದೆ ಪರಿತಪಿಸುವಂತಾಗಿತ್ತು.
ಉತ್ತರಕನ್ನಡ ಜಿಲ್ಲೆಯ ಮೂಲದ 45ಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗವನ್ನರಸಿ ಮುಂಬೈನಲ್ಲಿ ನೆಲೆಸಿದ್ದರಾದರೂ, ಲಾಕ್‌ಡೌನ್ ಸಂಕಷ್ಟದಿಂದ ಅತ್ತ ಉದ್ಯೋಗವೂ ಇಲ್ಲದೇ ಇತ್ತ ಮನೆಗೆ ಮರಳಲಾಗದೆ ಪರಿತಪಿಸುವಂತಾಗಿತ್ತು. ಈ ವೇಳೆ ಅವರ ನೆರವಿಗೆ ನಿಂತರು, ಮಾಜಿ ಶಾಸಕರು, ಸತೀಶ್ ಸೈಲ್. ಮತ್ತು ಅವರ ಮಗಳು ಸಾದ್ವಿ ಸೈಲ್… ವಿಶೇಷ ಪ್ರಯತ್ನದಿಂದ ಕಾರ್ಮಿಕರು ಜಿಲ್ಲೆಗೆ ಬಂದರಾದರೂ ದೂರದ ಮಹಾರಾಷ್ಟ್ರದ ನಂಜಿನ ಅಂಜಿಕೆಯಿಂದ ಅವರಿಗೆ ಕ್ವಾರೆಂಟೈನ್ ವ್ಯವಸ್ಥೆ ಮಾಡುವವರು ಯಾರು ಎನ್ನುವ ಆತಂಕದ ನಡುವೆಯೇ ಸಾದ್ವಿ ಸೈಲ್, ತಾನೂ ನಿರ್ದೇಶಕಿಯಾಗಿರುವ ಇಂಜಿನಿಯರಿಂಗ್ ಕಾಲೇಜ್ ಕಟ್ಟಡವನ್ನು ಬಳಸಿಕೊಳ್ಳುವಂತೆ ಹೇಳಿ, ಆಡಳಿತ ಮಂಡಳಿಯವರ ಮನವೊಲಿಸಿದರು. ಸಾಮಾಜಿಕ ಮತ್ತು ಮಾನವೀಯ ನೆಲೆಯಲ್ಲಿ ಚಿಂತಿಸಿ ಕಾರ್ಮಿಕರಿಗೆ ನೆರವು ನೀಡಲು ಮುಂದಾದ ಕುಮಾರಿ ಸಾದ್ವಿ ಸತೀಶ್ ಸೈಲ್ ತನ್ನ ಮಾದರಿ ನಾಯಕತ್ವದ ಗುಣಗಳನ್ನು ತೋರ್ಪಡಿಸಿ ಹಲವು ಕುಟುಂಬಗಳ ನೆಮ್ಮದಿಗೆ ಕಾರಣಳಾಗಿದ್ದು, ಕೊರೋನಾ ಸಂಕಷ್ಟದ ಸಮಯದಲ್ಲಿ ಸೇವೆ ಮಾಡುವ ಮೂಲಕ ತಂದೆಗೆ ತಕ್ಕ ಮಗಳಾಗಿ ಗಮನ ಸೆಳೆದಿದ್ದಾಳೆ.
ದೇಶದಲ್ಲಿ ಲಾಕ್‌ಡೌನ್ ಆರಂಭವಾಗುವುದಕ್ಕೂ ಕೆಲ ದಿನಗಳ ಮೊದಲಷ್ಟೇ ತಾನು ವ್ಯಾಸಂಗ ಮಾಡುತ್ತಿದ್ದ ಕೆನಡಾ ದೇಶದಿಂದ ತಾಯ್ನಾಡಿಗೆ ವಾಪಸ್ಸಾಗಿದ್ದ ಸಾದ್ವಿ ಸೈಲ್ ಮನದಾಳದಲ್ಲಿಯೇ ಚಿಂತಿಸಿ, ಲಾಕ್‌ಡೌನ್ ಸಂಕಷ್ಟಕ್ಕೊಳಗಾದವರ ಭಾವನೆಗಳನ್ನು ಅರ್ಥ ಮಾಡಿಕೊಂಡು, ನೊಂದವರೆಲ್ಲರೂ ನಮ್ಮವರೇ ಎನ್ನುವ ಕಳಕಳಿಯಿಂದ ಕಾಳಜಿವಹಿಸಿದಂತಿದೆ. ದಿಟ್ಟ ಬಾಲೆಯ ಸ್ಪಷ್ಟ ನುಡಿಗಳು ಯುವಜನತೆಗೆ ಮಾದರಿಯಾಗಿದೆ.

ಡಿಕೆಶಿ ಸಾರಥ್ಯದ ಕೆಪಿಸಿಸಿ ಘಟಕವು ಕರೊನಾ ಸಂಕಷ್ಟ ಕಾಲದಲ್ಲಿ ನೆರವಾಗಲು ಜಿಲ್ಲಾಮಟ್ಟದ ಟಾಸ್ಕಪೋರ್ಸ್ ಸಮಿತಿ ರಚಿಸಿ ಕಾರ್ಯಪ್ರವೃತ್ತವಾಗಿದ್ದು, ಉತ್ತರಕನ್ನಡ ಜಿಲ್ಲೆಯ ಟಾಸ್ಕಪೋರ್ಸ್ ಸಮಿತಿಯ ಅಧ್ಯಕ್ಷರಾಗಿ ನೇಮಕವಾಗಿರುವ ಸತೀಶ್ ಕೆ. ಸೈಲ್ ಹಲವು ಮಾನವೀಯ ನೆರವು ಮತ್ತು ಸೇವೆ ನೀಡುವ ಮೂಲಕ ಜವಾಬ್ದಾರಿ ಮೆರೆದ್ದಿದ್ದಾರೆ. ಸತೀಶ್ ಸೈಲ್ ಅವರ ಮಗಳು ಕೂಡಾ, ತಂದೆಗೆ ಬೆನ್ನೆಲುಬಾಗಿ ನಿಂತಿದ್ದು, ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ.

-ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]
Exit mobile version