ಹೆಲಿಕ್ಯಾಪ್ಟರ್ ದುರಂತದಲ್ಲಿ ಹುತಾತ್ಮರಾದವರಿಗೆ ದೀಪ ನಮನ: ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ

ಹೊನ್ನಾವರ: ತಮಿಳುನಾಡಿನ ಊಟಿಯ ಸಮೀಪದಲ್ಲಿ ಭಾರತೀಯ ಸೇನೆಯ ಹೆಲಿಕ್ಯಾಪ್ಟರ್ ಪತನಗೊಂಡು ಹುತಾತ್ಮರಾದ ಭಾರತೀಯ ಸೇನೆಯ ಮುಖ್ಯಸ್ಥ ರಾವತ್ ಮತ್ತು ಅವರ ಪತ್ನಿ ಹಾಗೂ 13 ಸೇನಾ ಸಿಬ್ಬಂದಿಗಳಿಗೆ ತಾಲೂಕಿನ ಹಿಂದೂ ಧರ್ಮ ರಕ್ಷಣಾ ಸಮಿತಿ ಹಾಗೂ ಯುವಾ ಬ್ರಿಗೇಡ್ ವತಿಯಿಂದ ದೀಪ ನಮನ ಕಾರ್ಯಕ್ರಮ ನಡೆಯಿತು.

ಹೊನ್ನಾವರ ಪಟ್ಟಣದ ಶರಾವತಿ ಸರ್ಕಲ್ ನಿಂದ ಬಜಾರ್ ಮಾರ್ಗವಾಗಿ ಮಾಸ್ತಿಕಟ್ಟೆಗೆ ಸಾಗಿ ಅಲ್ಲಿಂದ ದುರ್ಗಾದೇವಿ ದೇವಸ್ಥಾನದವರೆಗೆ ದೀಪ ಹಿಡಿದು ಮೆರವಣಿಗೆ ನಡೆಸಿದರು. ದಾರಿಯ ಮದ್ಯೆ ದೇಶಾಭಿಮಾನಿಗಳು ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಾಮರಸ್ಯ ಪ್ರಮುಖರಾದ ವಿಶ್ವನಾಥ ನಾಯಕ್ ಮಾತನಾಡಿ ಇಂದು ನಾವು ಯಾವುದೇ ಭಯವಿಲ್ಲದೇ ನೆಮ್ಮದಿಯ ಜೀವನ ನಡೆಸಲು ಭಾರತ ಮಾತೆಯ ಪುತ್ರರಾದ ವೀರ ಯೋಧರೇ ಕಾರಣ. ಮೊನ್ನೆ ದಿನ ನಡೆದ ದುರ್ಘಟನೆಯಲ್ಲಿ ಸೇನಾ ಮುಖ್ಯಸ್ಥರನ್ನು ಕಳೆದುಕೊಂಡಿದ್ದೇವೆ. ಇದು ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಹುತಾತ್ಮರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version