ವೃದ್ಧನ ಜೀವ ಉಳಿಸಲು ಹೋಗಿ ತನ್ನ ಪ್ರಾಣ ಕಳೆದುಕೊಂಡ ಲಾರಿ ಚಾಲಕ: ಕ್ಲೀನರ್‌ಗೆ ಗಂಭೀರ ಗಾಯ

ಭಟ್ಕಳ: ವಾಹನ ಚಾಲನೆಯ ವೇಳೆಯಲ್ಲಿ ಎಷ್ಟೇ ಜಾಗೃತರಾಗಿದ್ದರೂ ಕೂಡ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇನ್ನು ಕೆಲವೊಮ್ಮೆ ಬೇರೊಬ್ಬರ ಜೀವ ಉಳಿಸುವ ಸಲುವಾಗಿ ತಮ್ಮ ಪ್ರಾಣವನ್ನ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಿವೆ. ಇದೀಗ ರಸ್ತೆ ಅಡ್ಡಲಾಗಿ ಬಂದ ವೃದ್ಧನೊಬ್ಬನ ಪ್ರಾಣ ಉಳಿಸಲು ಭರದಲ್ಲಿ ಮೀನಿನ ಲಾರಿಯ ಚಾಲಕನೋರ್ವ ಜೀವವನ್ನೇ ಕಳೆದುಕೊಂಡಿರುವ ಘಟನೆ ಉಡುಪಿಯ ಸಂತೆಕಟ್ಟೆ ಎಂಬಲ್ಲಿ ನಡೆದಿದೆ.

ಭಟ್ಕಳ ಮೂಲದ ತೆಂಗಿನ ಗುಂಡಿಯ ಮಾಸ್ಟರ್ ಕಾಲೋನಿ ನಿವಾಸಿ ತೌಫಿಕ್ 28 ವರ್ಷದ ಪ್ರಾಣ ಕಳೆದುಕೊಂಡ ಚಾಲಕ ಆಗಿದ್ದು ರಾಷ್ಟ್ರೀಯ ಹೆದ್ದಾರಿ 66 ರ ಸಂತೆಕಟ್ಟೆಯ ಬಳಿಯಲ್ಲಿ ತೌಫಿಕ್ ಚಲಾಯಿಸುತ್ತಿದ್ದ ಮೀನಿನ ಲಾರಿ ಸಂಚರಿಸುತ್ತಿತ್ತು. ಈ ವೇಳೆಯಲ್ಲಿ ವೃದ್ದನೋರ್ವ ಲಾರಿಗೆ ಅಡ್ಡ ಬಂದಿದ್ದಾನೆ. ಮೀನಿನ ವಾಹನ ವೇಗವಾಗಿ ಬರುತ್ತಿದ್ದು, ವೃದ್ದನನ್ನು ರಕ್ಷಿಸುವ ಸಲುವಾಗಿ ಲಾರಿಯನ್ನು ಪಕ್ಕಕ್ಕೆ ಎಳೆದಿದ್ದಾರೆ. ಈ ವೇಳೆಯಲ್ಲಿ ಲಾರಿ ರಸ್ತೆ ಪಕ್ಕದಲ್ಲಿರುವ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಚಾಲಕ ತೌಫಿಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಇನ್ನು ಲಾರಿಯಲ್ಲಿದ್ದ ಕ್ಲೀನರ್ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಉಡುಪಿ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ವೃದ್ದನ ಜೀವ ಉಳಿಸಲು ಹೋದ ಚಾಲಕ ತೌಫಿಕ ಇದೀಗ ಬಾರದ ಲೋಕಕ್ಕೆ ಪಯಣಿಸಿದ್ದಾನೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version