ಬಡ್ಡಿ ಕುಳಗಳ ಬೆದರಿಕೆಗೆ ಅಂಜಿ ವಿಷ ಸೇವಿಸಿದ ಆಟೋ ಚಾಲಕ ? ಆಪಾದಿತ ಮಹಿಳೆ ಮತ್ತು ಸಹಾಯಕನ ಪತ್ತೆಗೆ ಮುಂದಾದ ಪೋಲಿಸರು.

ಅಂಕೋಲಾ: ಬಡ್ಡಿ ಕುಳಗಳ ಕಿರುಕುಳ ತಾಳಲಾರದೇ ಆಟೋ ಚಾಲಕ ನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಘಟನೆ ಜನವರಿ 22 ರ ಶನಿವಾರ ಬೆಳಿಗ್ಗೆ ನಡೆದಿದೆ.

ಪೂಜಗೇರಿಯ ಅಶೋಕ ಗೊಂಗಾ ಗಾಂವಕರ (44) ಮೃತ ದುರ್ದೈವಿಯಾಗಿದ್ದು, ಈತನು ಈ ಹಿಂದೆ ಲಕ್ಷೇಶ್ವರದ ರಾಜು ನಾಯಕ ಎಂಬುವವರಿಂದ ಬಡ್ಡಿ ಸಾಲ ಪಡೆದು, ತಾನು ಪಡೆದ ಸಾಲಕ್ಕೆ ಬಡ್ಡಿ ಹಣ ನಿಡುತ್ತ ಬಂದಿದ್ದ ಎನ್ನಲಾಗಿದೆ.

ಈ ನಡುವೆ ಬಡ್ಡಿ ಸಾಲ ನೀಡಿದ್ದ ರಾಜು ನಾಯಕ ಅಕಾಲಿಕ ನಿಧನ ಹೊಂದಿದ್ದು, ಆತನ ನಿಧನದ ನಂತರ ಮೃತ ರಾಜು ನಾಯಕ ಈತನ ಪತ್ನಿ ಮಂಜುಳಾ ನಾಯಕ ಮತ್ತು ಕನಸಿಗಿದ್ದೆ – ಬೇಳಾ ಬಂದರ ವ್ಯಾಪ್ತಿಯ ನಾಗರಾಜ(ನಾಗು ) ಅಂಕೋಲೆಕರ ಎನ್ನುವವರು ಸೇರಿ ಪ್ರತಿ ತಿಂಗಳು ಅಶೋಕ ಗಾಂವಕರ ನಿಗೆ ಬಡ್ಡಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ಈ ಹಿಂದೆ 2-3 ಬಾರಿ ಮನೆ ಬಾಗಿಲಿಗೆ ಹೋಗಿ ಬೆದರಿಕೆ ಸಹಹಾಕಿದ್ದಲ್ಲದೇ, ಜ. 21 ರ ಶುಕ್ರವಾರ ಸಂಜೆ 6-45 ರ ಸುಮಾರಿಗೆ ಅಶೋಕನ ಮನೆಗೆ ತೆರಳಿ, ರಾತ್ರಿ 8.30ರ ವರೆಗೆ ಅಲ್ಲಿಯೇ ಉಳಿದು, ಬಡ್ದಿ ಹಣ ನೀಡದಿದ್ದರೆ, ಅಂಕೋಲಾದಲ್ಲಿ ನಿನಗೆ ಒಡಾಡಲು ಬಿಡುವುದಿಲ್ಲ, ಜೀವ ಸಹಿತ ಉಳಿಸುವುದಿಲ್ಲ, ಒಂದು ಗತಿ ಕಾಣಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿ, ಬಡ್ದಿ ಹಣ ನೀಡಲಾಗದಿದ್ದರೆ ಸಾಲ ಮಾಡಿದ್ದು ಏಕೆ? ನಿನ್ನಂತವರು ಜೀವಂತ ಉಳಿದು ಏನು ಪ್ರಯೋಜನ ? ವಿಷ ಕುಡಿದು ಸತ್ತರೆ ಒಳ್ಳೆಯದು ಎಂಬಿತ್ಯಾದಿ ಹೇಳಿ ಬೆದರಿಕೆ ಒಡ್ದಿ ಹೋಗಿದ್ದರು ಎನ್ನಲಾಗಿದೆ.

ಇದೇ ಕಾರಣದಿಂದ ನನ್ನ ಗಂಡ ಹೆದರಿ, ವಿಷ ಸೇವಿಸಿ ಮೃತಪಟ್ಟಿರುತ್ತಾರೆ ಎಂದು ಮೃತ ಅಶೋಕ ಗಾಂವಕರ ಪತ್ನಿ ಅಂಕೋಲಾ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಕೊಂಡ ಪೋಲೀಸರು ಆಪಾದಿತರಾದ ಮಂಜುಳಾ ನಾಯಕ ಮತ್ತು ನಾಗರಾಜ ಅಂಕೋಲೆಕರ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version