ಮನೆಯ ಬಾಗಿಲು‌ ಮುರಿದು ಕಳ್ಳತನ: ನಗದು, ಚಿನ್ನಾಭರಣ ದೋಚಿ ಪರಾರಿ

ಭಟ್ಕಳ:  ಮುರುಡೇಶ್ವರ ಬಸ್ತಿಮಕ್ಕಿಯ ನ್ಯಾಷನಲ್ ಕಾಲೋನಿಯಲ್ಲಿರುವ ಮನೆಗೆ  ಕನ್ನ ಹಾಕಿದ ಕಳ್ಳರು ನಗದು ಚಿನ್ನಾಭರಣ ಸೇರಿದಂತೆ 1 ಲಕ್ಷದ 20 ಸಾವಿರ ಸ್ವತ್ತನ್ನು ಕದ್ದು ಪರಾರಿಯಾಗಿದ್ದಾರೆ.

ಮುರುಡೇಶ್ವರ ನ್ಯಾಷನಲ್ ಕಾಲೋನಿ ನಿವಾಸಿ ಹಾಫಿಜಾಗುಲಶನ ಮೊಹಮ್ಮದ ಭಾಷಾ ಹಾಜಿ ಕೋಲಾ ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರುದಾರ ಮನೆಯ ಯಜಮಾನಿ ತನ್ನ ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿ ಮಂಕಿಯ ತಾಯಿಯ ಮನೆಗೆ ತೆರಳಿದ್ದರು.‌

ಮರುದಿನ ಬೆಳಿಗ್ಗೆ ಮರಳಿ ಬಂದಾಗ ಕಳ್ಳತನದ ಬಗ್ಗೆ ತಿಳಿದುಬಂದಿದೆ. ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಅಂದಾಜು 95  ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ 25 ಸಾವಿರ
ನಗದು ದೋಚಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚುಗಾರರು ಬಂದು ಪರಿಶೀಲನೆ ನಡೆಸಿದ್ದು, ಸಿಪಿಐ ಮಹಾಬಲೇಶ್ವರ ನೇತ್ರತ್ವದಲ್ಲಿ ಪಿಎಸೈಗಳಾದ ರವೀಂದ್ರ ಹಾಗೂ ಪರಮಾನಂದ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Exit mobile version