ಗೇರು ತೋಪಿನಲ್ಲಿ ಒಂದೇ ಕಡೆ ಕಾಣಿಸಿಕೊಂಡ 4 ಹೆಬ್ಬಾವು: ಕೋಳಿಮೊಟ್ಟೆ ನುಂಗಿದ್ದ ನಾಗರಹಾವಿನ ರಕ್ಷಣೆ

ಅಂಕೋಲಾ: ತಾಲೂಕಿನ ಸಿಂಗನಮಕ್ಕಿಯಲ್ಲಿ ಅರಣ್ಯ ಇಲಾಖೆ ಯ ಗೇರು ನಡುತೋಪಿನಲ್ಲಿ ಕಾಣಿಸಿಕೊಂಡ ನಾಲ್ಕು ಬೃಹತ್ ಗಾತ್ರದ ಹೆಬ್ಬಾವುಗಳನ್ನು ಉರಗ ಸಂರಕ್ಷಕ ಮಹೇಶ ನಾಯ್ಕ ಅವರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಸಿಂಗನಮಕ್ಕಿಯ ಗೇರು ತೋಪಿನಲ್ಲಿ ಎರಡು ಹೆಬ್ಬಾವುಗಳು ಇರುವುದನ್ನು ಗಮನಿಸಿ ಮಹೇಶ ನಾಯ್ಕ ಅವರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಹೇಶ ನಾಯ್ಕ ಎರಡು ಹೆಬ್ಬಾವುಗಳನ್ನು ಹಿಡಿಯಲು ಮುಂದಾಗುತ್ತಿದ್ದಂತೆ, ಹತ್ತಿರದಲ್ಲಿಯೇ ಇನ್ನೆರಡು ಹೆಬ್ಬಾವುಗಳು ಕಂಡು ಬಂದು ಗ್ರಾಮಸ್ಥರು ಸೇರಿದಂತೆ ಹಲವರ ಅತಂಕ ಹಾಗೂ ಕುತೂಹಲಕ್ಕೆ ಕಾರಣವಾಯಿತು.

ಇದೇ ಮೊದಲ ಬಾರಿ ಒಂದೇ ಸ್ಥಳದಲ್ಲಿ 4 ಹೆಬ್ಬಾವುಗಳನ್ನು ಕಂಡು ಅಚ್ಚರಿಗೊಂಡ ಮಹೇಶ ನಾಯ್ಕ ಅವರು ಹೆಬ್ಬಾವುಗಳನ್ನು ಹಿಡಿದು, ಸಂರಕ್ಷಿಸಿ ಈ ಕುರಿತಂತೆ ಮಂಗಳೂರಿನ ಉರಗ ತಜ್ಞ ಗುರುರಾಜ ಹೊಸಮನಿ ಅವರಿಗೆ ಮಾಹಿತಿ ನೀಡಿದಾಗ ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಹಾವುಗಳ ಮಿಲನ ಸಮಯ ಆಗಿರುವುದರಿಂದ ಒಂದೇ ಸ್ಥಳದಲ್ಲಿ 5 ರಿಂದ 6 ಹಾವುಗಳು ಕಂಡು ಬರುವುದು ಸಾಧ್ಯತೆ ಇರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸಹಕರಿಸಿದರು.

ಹೆಬ್ಬಾವಿನ ಹೊರತಾಗಿ ಬಾಳೇಗುಳಿಯ ಹರ್ಷದ್ ಎನ್ನುವವರ ಮನೆಯಲ್ಲಿ ಕಂಡು ಬಂದ ನಾಗರಹಾವನ್ನು ಮತ್ತು ಕಾರವಾರ ಅರ್ಗಾದ ರಾಮದಾಸ ಗುನಗಾ ಎನ್ನುವವರ ಮನೆಯಲ್ಲಿ 8 ಕೋಳಿ ಮೊಟ್ಟೆ ನುಂಗಿದ ನಾಗರಹಾವನ್ನು ಹಿಡಿದು ಸಂರಕ್ಷಿಸಿ ಸುರಕ್ಷಿಸುವ ಮೂಲಕ ಅವರ್ಸಾದ ಮಹೇಶ ನಾಯ್ಕ, ಫೆ.14 ರ ಪ್ರೇಮಿಗಳ ದಿನದಂದು ತನ್ನ ಪರಿಸರ ಸಂರಕ್ಷಣಾ ಪ್ರೇಮ ಮೆರೆದಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version