ಕಾಲೇಜು ಸಮೀಪ ಗಾಂಜಾ ಮಾರಾಟ: ಆರೋಪಿ ಬಂಧಿಸಿದ ಪೊಲೀಸರು

ಅಂಕೋಲಾ: ಕಳೆದ 2-3 ದಿನಗಳ ಹಿಂದೆ ಅಕ್ರಮ ಗಾಂಜಾ ಮಾರಾಟ ಮಾಡುವ ಯತ್ನದಲ್ಲಿದ್ದ ಮೂವರು ಆರೋಪಿಗಳನ್ನು ಮಾದಕ ಪದಾರ್ಥ ಸಹಿತ ವಶಪಡಿಸಿಕೊಂಡಿದ್ದ ಅಂಕೋಲಾ ಪೊಲೀಸರು ,ಕಾರ್ಯಾಚರಣೆಯ ಮುಂದುವರಿದ ಭಾಗವೋ ಎಂಬಂತೆ ಪಕ್ಕದ ಗೋವಾ ರಾಜ್ಯದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

ಗೋವಾ ರಾಜ್ಯದ ಕಾಕೋಲಿಯಮ್ ನಿವಾಸಿ ಸಿದ್ಧೇಶ ಸುರೇಶ ದೇಸಾಯಿ (29) ಬಂಧಿತ ಆರೋಪಿಯಾಗಿದ್ದು ಈತ ಅಂಕೋಲಾ ತಾಲೂಕಿನ ಜಿ.ಸಿ.ಕಾಲೇಜು ಎದುರಿನ ರಾ.ಹೆ 66 ರ ಪ್ಲೈ ಓವರ್ ಕೆಳಗೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಇಟ್ಟುಕೊಂಡಿರುವ ಸಂದರ್ಭದಲ್ಲಿ ದಾಳಿ ನಡೆಸಿ ಸುಮಾರು 2300 ರೂಪಾಯಿ ಮೌಲ್ಯದ 156 ಗ್ರಾಂ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ..

ಸಿಪಿಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಅಂಕೋಲಾ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಉಪ ನಿರೀಕ್ಷಕ ಪ್ರವಿಣಕುಮಾರ, ನೂತನ ಪಿಎಸೈ ಮಹಾಂತೇಶ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಗೋವಾದಿಂದ ಕೇರಳದವರೆಗೆ ಕರಾವಳಿ ತೀರದುದ್ದಕ್ಕೂ ಅಕ್ರಮ ಗಾಂಜಾ,ಮತ್ತಿತರ ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ ಹಾಗೂ ಮಾರಾಟದ ಕುರಿತು ಆಗಾಗ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದ್ದು, ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸಂಬಂಧಿಸಿದ ಇಲಾಖೆಗಳು,ಮಾದಕ ಮಾಫಿಯಾ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version