ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ಸಾಕಷ್ಟು ಅವಘಡ ಹಾಗೂ ಅಪಘಾತ: ನಿವಾಸಿಗರನ್ನು ಬೇರೆಡೆ ಸ್ಥಳಾಂತರಕ್ಕೆ ಆಗ್ರಹ

ಕುಮಟಾ: ತಂಡ್ರಕುಳಿ ಭಾಗದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ಸಾಕಷ್ಟು ಅವಘಡ ಹಾಗೂ ಅಪಘಾತಗಳು ಸಂಭವಿಸಿವೆ. ಭಯದ ವಾತಾವರಣದಲ್ಲಿ ಜನ ಬದುಕುತ್ತಿದ್ದಾರೆ. ಹಾಗಾಗಿ ಅಲ್ಲಿಯ ನಿವಾಸಿಗರನ್ನು ಬೇರೆಡೆ ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಶಾಸಕರ ಬಳಿ ಮಂಗಳವಾರ ಒತ್ತಾಯಿಸಿದರು. 

ಬಂಡೆ ಒಡೆಯಲು ಆಗಾಗ ಸಂಭವಿಸುವ ಬಾಂಬ್ ಸ್ಫೋಟ, ಮಳೆಗಾಲದಲ್ಲಿ ಗುಡ್ಡ ಕುಸಿತ, ವರ್ಷಪೂರ್ತಿ ನಡೆಯುವ ಅಪಘಾತಗಳು ನಮ್ಮನ್ನು ಕಂಗೆಡಿಸಿದ್ದು, ಮನೆ ಮೇಲೆ ಯಾವ ಸಂದರ್ಭದಲ್ಲಿ ಲಾರಿ, ಟ್ಯಾಂಕರ್ ಗಳು ಉರುಳುತ್ತವೆ ಎಂಬ ಭೀತಿಯಲ್ಲಿ ನಾವೆಲ್ಲಾ ಬದುಕಬೇಕಿದೆ. ಹಾಗಾಗಿ ಶೀಘ್ರ ಬೇರೆಡೆ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು. 

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು, ಜನರ ಸ್ಥಳಾಂತರಕ್ಕೂ ಮುನ್ನ ಸೂಕ್ತ ಜಾಗವನ್ನು ಪರಿಶೀಲಿಸಬೇಕಿದ್ದು ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು. ಮುಖಂಡರಾದ ಗಣೇಶ ಅಂಬಿಗ, ರಮೇಶ ಅಂಬಿಗ, ರಾಘು ಅಂಬಿಗ, ಮಂಜುನಾಥ ಅಂಬಿಗ, ರಾಮು ಅಂಬಿಗ, ಶ್ರೀಧರ ಅಂಬಿಗ ಮುಂತಾದವರು ಇದ್ದರು.

Exit mobile version