Big NewsImportant
Trending

ಅಂಗನವಾಡಿ ಕೇಂದ್ರದಲ್ಲಿ ಕಾಣಿಸಿ ಕೊಂಡ ನಾಗರ ಹಾವು|ಬುಸ್ ಬುಸ್ ಎನ್ನುತ್ತ ಹೆಡೆ ಎತ್ತಿ ರೋಷ ತೋರಿದ ನಾಗರ ಹಾವು

ಹಾವು ಹಿಡಿದು ಆತಂಕ ದೂರ ಮಾಡಿದ ಉರಗ ಸಂರಕ್ಷಕ

ಅಂಕೋಲಾ : ತಾಲೂಕಿನ ಗಾಬಿತಕೇಣಿಯಲ್ಲಿನ ಅಂಗನವಾಡಿ ಕೇಂದ್ರದೊಳಗೆ ದೊಡ್ಡ ನಾಗರಹಾವೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಕೆಲ ಕಾಲ ಆತಂಕದ ವಾತಾವರಣ ಮೂಡಿಸಿತ್ತು. ಅಂಗನವಾಡಿ ಸಹಾಯಕಿ ಸರೋಜಾ ಅಂಗನವಾಡಿ ಕೇಂದ್ರದ ಬಾಗಿಲು ತೆರೆದು ಎಂದಿನಂತೆ ಕೆಲಸ ಮಾಡಲು ಮುಂದಾದಾಗ ಬುಸ್ ಬುಸ್ ಎನ್ನುವ ಹಾವಿನ ಶಬ್ದ ಕೇಳಿದೆ.

ಬಸ್ ನಿಲ್ದಾಣದಿಂದ ಓಡಿ ಹೋಗಲೆತ್ನಿಸಿದ ಮೊಬೈಲ್ ಕಳ್ಳರು: ಹಿಡಿದು ಹೆಡೆಮುರಿ ಕಟ್ಟಿದ ಪೋಲೀಸರು

ಕೊಂಚ ಅವಕ್ಕಾದ ಅವಳು ಸರಿಯಾಗಿ ನೋಡುವಷ್ಟರಲ್ಲಿ ದೊಡ್ಡ ನಾಗರ ಹಾವೊಂದು ಕಣ್ಣಿಗೆ ಬಿದ್ದಿದೆ. ಕೂಡಲೇ ಸರೋಜಾ ಈ ವಿಷಯವನ್ನು ಪ್ರಾಥಮಿಕ ಶಾಲೆಯ ಶಿಕ್ಷಕಿಯರ ಗಮನಕ್ಕೆ ತಂದು, ಊರ ನಾಗರಿಕರ ಮೂಲಕ ಅವರ್ಸಾದ ಉರಗ ಸಂರಕ್ಷಕ ಮಹೇಶ ನಾಯ್ಕ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮಹೇಶ ನಾಯ್ಕ ಸ್ಥಳೀಯರ ಸಹಕಾರದಿಂದ ಅಂಗನವಾಡಿಯೊಳಗಿದ್ದ ಹಾವನ್ನು ಹಿಡಿದು ಸ್ಥಳೀಯರ ಆತಂಕ ದೂರ ಮಾಡಿದ್ದಲ್ಲದೇ, ನಾಗರ ಹಾವನ್ನು ಅರಣ್ಯ ಇಲಾಖೆ ಸಹಯೋಗ ದೊಂದಿಗೆ ಕಾಡಿಗೆ ಬಿಟ್ಟು ಸಂರಕ್ಷಿಸಿದ್ದಾರೆ. ಪುಟಾಣಿ ಮಕ್ಕಳು ಅಂಗನವಾಡಿಗೆ ಬರುವ ಮುನ್ನವೇ ಹಾವಿನ ಇರುವಿಕೆ ಕಂಡು ಬಂದಿದ್ದು, ಚೌತಿ ಗಣಪನ ಸಡಗರದಲ್ಲಿರುವ ಪಾಲಕರ ಪೈಕಿ ಕೆಲ ಪಾಲಕರು, ದೈವ ಕೃಪೆಯಿಂದ ಅದೃಷ್ಟವಶಾತ್ ತಮ್ಮ ಮಕ್ಕಳು ಯಾವುದೇ ತೊಂದರೆಗೆ ಸಿಲುಕಿಕೊಳ್ಳಲಿಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಂತೆ ಕಂಡು ಬಂತು.

ಗಾಬಿತಕೇಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿಯೇ ಈ ಅಂಗನವಾಡಿ ಕೇಂದ್ರ ಇದ್ದು ಇಲ್ಲಿ ಪ್ರತಿದಿನ 20 ಕ್ಕೂ ಹೆಚ್ಚು ಮಕ್ಕಳು ಬರುತ್ತಿದ್ದು, ಈ ದಿನವೇ ಅಂಗನವಾಡಿ ಶಿಕ್ಷಕಿ ಅಮಿತಾ ಗೋವೇಕರ ರಜೆ ಮೇಲೆ ಇದ್ದರೂ, ಸಹಾಯಕಿ ಸಮಯೋಚಿತ ನಿರ್ಧಾರ ಕೈಗೊಂಡು ಸಂಭವನೀಯ ಅಪಾಯ ತಪ್ಪಿಸಿದರು ‘ಎನ್ನುತ್ತಾರೆ ಸ್ಥಳೀಯರು. ಕಿಡಕಿ ಹತ್ತಿ ಕುಳಿತ ನಾಗರ ಹಾವು ತನ್ನನ್ನು ಹಿಡಿಯುತ್ತಾರೆ ಎಂದು ತಿಳಿದು ರೋಷದಿಂದ ಬುಸ್ ಗುಡುತ್ತಾ ಕಚ್ಚಲು ಮುಂದೆರಗಿ ಪ್ರಯತ್ನಿಸುತ್ತಿದ್ದಾಗ ಹತ್ತಿರ ಇದ್ದ ಕೆಲವರನ್ನು ಭಯ ಭೀತಿಗೊಳಿಸಿತು. ಆದರೂ ಸಾವಿರಾರು ನಾಗರ ಮತ್ತಿತರ ವಿಷ ಪೂರಿತ ಹಾವುಗಳನ್ನು ಹಿಡಿದು ಸಂರಕ್ಷಿಸಿರುವ ಮಹೇಶ ನಾಯ್ಕ, ಧೃತಿಗೆಡದೇ – ಅಂಜದೇ ಹಾವನ್ನು ಹಿಡಿದು ಸ್ಥಳೀಯರ ಪ್ರಶಂಸೆಗೆ ಕಾರಣರಾದರು.

ಅಂಗನವಾಡಿಯ ಸುತ್ತಮುತ್ತ ಪರಿಸರ ಗಿಡಗಂಟಿ ಪೊದೆಗಳಿಂದ ಆವೃತವಾಗಿದ್ದು, ಇಲ್ಲಿ ಸಂಬಂಧಿಸಿದರು. ಸ್ವಚ್ಚತೆಗೆ ಆದ್ಯತೆ ನೀಡ ಬೇಕಿದೆ ಎನ್ನುವ ಮಾತು ಕೇಳಿ ಬಂದಿದೆ. ಕಿಟಾಕಿಗಳಿಗೆ ಜ್ಯಾಲರಿ ಅಳವಡಿಸುವುದು. ಸೇರಿದಂತೆ ಇನ್ನು‌ ಮುಂದಾದರೂ ಚಿಕ್ಕ ಮಕ್ಕಳಿರುವ ಅಂಗನವಾಡಿ ಕೇಂದ್ರದ ಪರಿಸರದಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ಮತ್ತು ಗಮನ ನೀಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button