Important
Trending

ಗಣಪತಿ ವಿಸರ್ಜನೆ ವೇಳೆ ಹಾಜರಿರದ ರಕ್ಷಣಾ ಸಿಬ್ಬಂದಿಗಳು.  ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿರುವ ಅಗ್ನಿಶಾಮಕ ದಳ, ಇಲಾಖೆಗಳ ಸಮನ್ವಯ ಕೊರತೆ

ಸಾರ್ವಜನಿಕರ ಪ್ರಾಣ ರಕ್ಷಣೆ ಯಾರ ಹೊಣೆ ?

ಅಂಕೋಲಾ: ಗಣಪತಿ ವಿಸರ್ಜನೆ ವೇಳೆ ಪಟ್ಟಣದ ಕೇಣಿ ಹಳ್ಳದ ಬಳಿ ಸಾವಿರಾರು ಜನರು ಒಂದೆಡೆ ಸೇರುವುದು ಗೊತ್ತಿದ್ದರೂ ಸಹ ಮುಂಜಾಗೃತೆ ತೆಗೆದುಕೊಳ್ಳಬೇಕಾದ ಅಗ್ನಿಶಾಮಕ ಮತ್ತಿತರ ಇಲಾಖೆಗಳು ಸ್ಥಳದಲ್ಲಿ ಮುಳುಗು ತಜ್ಞರನ್ನಾಗಲಿ, ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸದೇ ನಾಗರಿಕ ರಕ್ಷಣಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಕುರಿತು ಸಾರ್ವಜನಿಕ  ವಲಯದಿಂದ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.   ಕಳೆದೆರಡು ವರ್ಷಗಳಲ್ಲಿ ಕರೋನಾ ಮತ್ತಿತರ ಕಾರಣದಿಂದ ಕಳೆಗುಂದಿದ್ದ ಹಬ್ಬದಾಚರಣೆಗೆ ಇದ್ದ ವಿಘ್ನಗಳೆಲ್ಲ ದೂರವಾಗಿ ಗಣೇಶೋತ್ಸವದ  ಸಂಭ್ರಮ ಸಡಗರ ಎಲ್ಲೆಡೆ ಜೋರಾಗಿದೆ.   

ಆತನ ವಯಸ್ಸು 52, ಯುವತಿಯ ವಯಸ್ಸು 16! ಅಪ್ರಾಪ್ತ ಜೊತೆ ಮದುವೆ: ಮುಂದೇನಾಯ್ತು ನೋಡಿ?

ಮಣ್ಣಿನ ಗಣವತಿ ಮೂರ್ತಿ  ಪ್ರತಿಷ್ಠಾಪಿಸಿ ಪೂಜಿಸಿದ ಕೆಲ ಮನೆತನಗಳು ಮತ್ತು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು 1, 2, 5, 6, 7, 9, 10, 11 ಹೀಗೆ ನಾನಾ ದಿನಗಳಂದು ( ಮೂಲಾ ನಕ್ಷತ್ರ, ಅನಂತ ಚತುರ್ದಶಿ ಮತ್ತಿತರ ಪಂಚಾಂಗ ಹಾಗೂ ಬದಲಿ ಕಾಲ ಘಟ್ಟಕ್ಕನ್ನು ಗುಣವಾಗಿ) ಮೂರ್ತಿ ವಿಸರ್ಜಿಸುವ ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಈ ವೇಳೆ ಪಟ್ಟಣದ ಕೇಣಿ ಹಳ್ಳದ ಬಳಿ ಸಾವಿರಾರು ಜನರು ಒಂದೆಡೆ ಸೇರುತ್ತಾರೆ.  ಮಳೆಯೂ ಆಗಾಗ ಸುರಿಯುತ್ತಿದ್ದು ಹಳ್ಳದಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚುವುದು, ಮೂರ್ತಿ ವಿಸರ್ಜನೆಗೆ ಹೋದವರ ಕಾಲು ಜಾರುವ, ಇಲ್ಲವೇ ವಿಸರ್ಜನೆ ವೇಳೆ ದಡದಲ್ಲಿ ನಿಂತವರು ಇಲ್ಲವೇ ಕಿರು ಸೇತುವೆ ಮೇಲೆ ನಿಂತವರು ನೂಕು ನುಗ್ಗಲಾಟದಿಂದ ಆಕಸ್ಮಿಕವಾಗಿ ಹಳ್ಳದ ನೀರಿನಲ್ಲಿ ಯಾರಾದರೂ ಬಿದ್ದರೆ ಇನ್ನಿತರ ಕಾರಣಗಳಿಂದ  ಸಂಭವಿಸಬಹುದಾದ ಅವಘಡಗಳಿಂದ ಅವರ ರಕ್ಷಣೆ ಉದ್ದೇಶದಿಂದ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಇಲ್ಲಿ ಯಾವುದೇ ಮುಳುಗು ತಜ್ಞರು ಕಂಡು ಬರದಿರುವುದು ಕೆಲ ಇಲಾಖೆಗಳ ಬೇಜಬ್ದಾರಿಯನ್ನು ಎತ್ತಿ ತೋರಿಸುವಂತಿದೆ.

ಈ ಮೊದಲಿನ ವರ್ಷಗಳಲ್ಲಿ ಜೀವರಕ್ಷಕ ಸಾಧನಗಳೊಂದಿಗೆ ಸ್ಥಳದಲ್ಲಿ ಹಾಜರಿರುತ್ತಿದ್ದ ಅಗ್ನಿಶಾಮಕ ದಳದವರು ಈ ಬಾರಿ ಒಂದೇ ಒಂದು ದಿನ ಕಣ್ಣಿಗೆ ಕಾಣದೇ ನಾಪತ್ತೆಯಾದಂತಿದೆ. ಈ ಕುರಿತು ಅಗ್ನಿ ಶಾಮಕ ದಳದವರನ್ನು ಸಂಪರ್ಕಿಸಿ ತಾವು ಹಾಜರಿರದ್ದಕ್ಕೆ ಕಾರಣಗಳೇನು ಎ೦ದು ಕೇಳಿದಾಗ, ಈ ಹಿಂದಿನಂತೆ ತಮಗೆ ಸಂಬಂಧಿತ ಇಲಾಖೆಯಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಕೋರಿಕೆ ಅರ್ಜಿ ಬಂದಿಲ್ಲ . ಒಂದೊಮ್ಮೆ ನಮ್ಮಷ್ಟಕ್ಕೆ ನಾವು ಹಾಜರಾದಾಗ ನಮ್ಮ ಸಿಬ್ಬಂದಿಗಳಿಗೆ ಏನಾದರೂ ತೊಂದರೆ ಆದರೆ ಯಾರಿಗೆ ಕೇಳುವುದು ಎಂಬರ್ಥದಲ್ಲಿ ಪ್ರಶಿಸಿದ್ದಾರೆ. ಇಲಾಖೆ ಇತಿ ಮಿತಿಯೊಳಿಗೆ ಈ ನಿರ್ಧಾರ ಸರಿ ಅನಿಸಿದರೂ ಸಹ,ಗಣೇಶೋತ್ಸವಕ್ಕೂ ಮೊದಲು ತಾಲೂಕ್ ಆಡಳಿತ ಕರೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು, ತದ ನಂತರ ಕೆಲ ಇಲಾಖೆಗಳ ಸಮನ್ವಯತೆ ಕೊರತೆಯಿಂದ ಹೀಗಾಗಿದೆ  ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಒಟ್ಟಿನಲ್ಲಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕಳ್ಳನಿಗೆ ಒಂದು ಪಿಳ್ಳೆ ನೆವ ಎಂಬಂತೆ ಅಗ್ನಿಶಾಮಕ ದಳದವರು ತಮ್ಮ  ಜವಾಬ್ದಾರಿ ಮರೆತು ಹಿಂದೇಟು ಹಾಕುತ್ತಿರುವುದಕ್ಕೆ ಸಾರ್ವಜನಿಕ ವಲಯದಿಂದ ಆಕ್ರೋಶದ ಮಾತುಗಳು ಕೇಳಿಬಂದಿವೆ.ತಾಲೂಕ ಆಡಳಿತದ ಮುಖ್ಯಸ್ಥರು ಈ ಕುರಿತು ಸಂಬಂಧಿತ ಇಲಾಖೆಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕಿದೆ. ಸಂಬಧಿಸಿದವರು.ಇನ್ನು ಮುಂದಾದರೂ  ಎಚ್ಚೆತ್ತುಕೊಂಡು  ಸ್ಥಳದಲ್ಲಿ ಲೈಫ್ ಗಾರ್ಡಗಳನ್ನು ನಿಯೋಜಿಸಿ ತಮ್ಮ ಜವಾಬ್ದಾರಿ ನಿಭಾಯಿಸುವರೇ ಕಾದು ನೋಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button