ಪರೇಶ ಮೇಸ್ತ ಸಾವಿನ ಪ್ರಕರಣ: ಸಿಬಿಐ ‘ಬಿ’ ರಿಪೋರ್ಟಿಗೆ ಆಕ್ಷೇಪಣೆ ಸಲ್ಲಿಸುವುದಾಗಿ ಕಾಲಾವಕಾಶ ಕೋರಿದ ಪರೇಶ ಮೇಸ್ತನ ತಂದೆ
![](http://i0.wp.com/vismaya24x7.com/wp-content/uploads/2022/10/paresh-mesta.jpg?fit=1080%2C704&ssl=1)
ಹೊನ್ನಾವರ: ಪರೇಶ ಮೇಸ್ತ ಸಾವಿನ ಪ್ರಕರಣಕ್ಕೆ ಸಂಬoಧಿಸಿ ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟಿಗೆ ಆಕ್ಷೇಪಣೆ ಸಲ್ಲಿಸುವುದಾಗಿ ಕಾಲಾವಕಾಶ ಕೋರಿ ಪರೇಶ ಮೇಸ್ತನ ತಂದೆ ಕಮಲಾಕರ ಮೇಸ್ತ ಹೊನ್ನಾವರ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಕೀಲರ ಮೂಲಕ ಮನವಿ ಸಲ್ಲಿಸಿದ್ದಾರೆ. ವಕೀಲರಾದ ನಾಗರಾಜ ನಾಯಕ ಕಾರವಾರ ಹಾಗೂ ಎಸ್.ಜಿ. ಹೆಗಡೆ ದುಗ್ಗೂರು ಅವರ ಮೂಲಕ ಹೊನ್ನಾವರ ನ್ಯಾಯಾಲಯಕ್ಕೆ ಹಾಜರಾಗಿ ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯ ಪ್ರಕರಣವನ್ನು ಡಿಸೆಂಬರ್ 21ಕ್ಕೆ ಮುಂದೂಡಿದೆ.
ತಂದೆಯ ಅಂತ್ಯ ಸಂಸ್ಕಾರ ನಡೆದ ಕೆಲ ಹೊತ್ತಿನಲ್ಲೇ ಮಸಣದ ಹಾದಿ ತುಳಿದ ಮಗ: ವಿಧಿಯ ಕ್ರೂರ ಆಟಕ್ಕೆ ನಲುಗಿದ ಬಡಕುಟುಂಬ
6 ಡಿಸೆಂಬರ್ 2017 ರಂದು ಹೊನ್ನಾವರದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಪರೇಶ ಮೇಸ್ತ ಕಾಣೆಯಾಗಿದ್ದನು. ನಂತರ ಡಿಸೆಂಬರ್ 8 ರಂದು ಪಟ್ಟಣದ ಶೆಟ್ಟಿಕೆರೆಯಲ್ಲಿ ಅವನ ಶವ ದೊರೆತಿತ್ತು. ಪ್ರತಿಭಟನೆಗಳು ನಡೆದವು. ಆಗಿನ ಸಿದ್ದರಾಮಯ್ಯ ಸರಕಾರ ಪರೇಶ ಮೇಸ್ತನ ಪಾಲಕರ ಕೋರಿಕೆ ಮೇರೆಗೆ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ತನಿಖೆ ನಡೆಸಿದ ಸಿಬಿಐ ಕಳೆದ ತಿಂಗಳು ಹೊನ್ನಾವರ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪರೇಶ ಮೇಸ್ತನ ತಂದೆಗೆ ನೋಟೀಸ್ ನೀಡಿತ್ತು. ಬುಧವಾರದಂದು ತಮ್ಮಪರ ವಕೀಲರ ಮೂಲಕ ಹಾಜರಾಗಿ ಆಕ್ಷೇಪಣೆ ಸಲ್ಲಿಸುವುದಾಗಿ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಪರೇಶ ಮೇಸ್ತ ತಂದೆ ಕಮಲಾಕರ ಮೇಸ್ತ ಅವರ ಪರ ವಕೀಲ ಹಾಗೂ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ನಾಯಕ ಮಾಧ್ಯಮದವರೊಂದಿಗೆ ಮಾತನಾಡಿ ಆಗಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಿ ರಿಪೋರ್ಟ್ ಬರುವಂತೆ ಮಾಡಲು ಪ್ರಕರಣವನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಡ್ಯಾಮೇಜ್ ಮಾಡಿ ಸಿಬಿಐಗೆ ವಹಿಸಿತ್ತು ಎಂದು ಆರೋಪಿಸಿದರು. ಸಿಬಿಐ ಸಲ್ಲಿಸಿದ ಬಿ ರಿಪೋರ್ಟಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಅಧ್ಯಯನ ಮಾಡಿ ಆಕ್ಷೇಪಣೆ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮೃತ ಪರೇಶ ಮೇಸ್ತನ ತಂದೆ ಕಮಲಾಕರ ಮೇಸ್ತ, ಅವರ ಪರ ವಕೀಲ ಎಸ್.ಜಿ.ಹೆಗಡೆ, ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ರಾಜು ಭಂಡಾರಿ, ಪಟ್ಟಣ ಪಂಚಾ ಸದಸ್ಯ ವಿಜು ಕಾಮತ, ಮುಖಂಡರಾದ ಕುಮಾರ ಮಾರ್ಕಂಡೇ ಮತ್ತಿತರರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,
![](http://i0.wp.com/vismaya24x7.com/wp-content/uploads/2022/08/nityadhar-new-1.jpg?resize=708%2C398&ssl=1)