ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ 2022-23 ನೇ ಸಾಲಿನ ವಾರ್ಷಿಕೋತ್ಸವ

ಗೋರೆಯ ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ 2022-23 ನೇ ಸಾಲಿನ ವಾರ್ಷಿಕೋತ್ಸವ ದಿನಾಂಕ 13-01-2023 ರ ಶುಕ್ರವಾರ ಜರುಗಿತು.. ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೆಲ್ಕೋ ಫೌಂಡೇಶನ್ (ರಿ.), ಬೆಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಮೋಹನ್ ಭಾಸ್ಕರ್ ಹೆಗಡೆ ದೀಪ ಬೆಳಗಿ ಉದ್ಘಾಟಿಸಿದರು.. ಅಂತೆಯೇ ಕಾಲೇಜ್ ವಿದ್ಯಾರ್ಥಿಗಳಿಂದ ರೂಪುಗೊಂಡ ಹಸ್ತಪತ್ರಿಕೆ *”ಛಾತ್ರ ಸಂಪದ”* ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಯುತರು “ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವೃಂದದವರ ಮನಸ್ಸಿನಲ್ಲಿ ಇದು ನಮ್ಮ ವಿದ್ಯಾಲಯ ಎಂಬ ಭಾವನೆ ಬರದೇ ಇದ್ದರೆ, ಯಾವ ಸಾಧನೆಯೂ ಯಾರಿಗೂ ಸಾಧ್ಯವಾಗದು..

ನಮ್ಮ ವಿದ್ಯಾಲಯ ಎನ್ನುವ ಭಾವನೆ ಬರಬೇಕೆಂದರೆ ಅದಕ್ಕೆ ಮಹಾತಪಸ್ಸು ಬೇಕು.. ಶಿಲೆಗೆ ಉಳಿಪೆಟ್ಟು ಕೊಟ್ಟು ಮೂರ್ತಿಯನ್ನಾಗಿ ಮಾಡುವ ಯೋಗ್ಯತೆ ಶಿಲ್ಪಿಗೆ ಹೇಗೆ ಮಹತ್ವದ್ದೋ, ಹಾಗೆಯೇ ಅದ ಶಿಲೆಗೂ ಮೂರ್ತಿಯಾಗುವ ಯೋಗ್ಯತೆ ಕೂಡ ಇರಬೇಕಾದ್ದು ಅಷ್ಟೇ ಅವಶ್ಯಕ.. ಹೆಚ್ಚು ಪೆಟ್ಟು ತಿಂದ ಶಿಲೆಯೇ ದೇವರ ಮೂರ್ತಿಯಾಗುವುದು.. ಸಮಸ್ಯೆಗಳನ್ನು ಸಂಭ್ರಮದಿಂದ ಸ್ವಾಗತಿಸಿಬೇಕು.. ಯಾವಾಗಲೂ ಒಂದು ಸಮಸ್ಯೆ ಸಮರ್ಥರಿಗೆ ಮಾತ್ರ ಬರುತ್ತದೆ” ಎಂದರು.. ಮುಂದುವರೆದು, ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ, ಡಾ|| ಏ. ಪಿ. ಜೆ. ಅಬ್ದುಲ್ ಕಲಾಂ, ಧ್ರುವಕುಮಾರ, ಗ್ರೇಟರ್ ತೆನ್ಬರ್ಗ್ ಇವರ ಜೀವನಾದರ್ಶಗಳನ್ನು ವಿವರಿಸಿದರು..

ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಕಮಲಾ ಬಾಳಿಗಾ ಪ್ರಶಿಕ್ಷಣ ಮಹಾವಿದ್ಯಾಲಯದ ಪ್ರೊ. ಜಿ. ಡಿ. ಭಟ್ ಮಾತನಾಡಿ, “ನಮಗೆ ಯಾವುದೇ ಸಾಧನೆ ಮಾಡಲು ಆರೋಗ್ಯ ತುಂಬಾ ಮಹತ್ವದ್ದು.. ಈ ದಿಶೆಯಲ್ಲಿ ದೈನಂದಿನ ವ್ಯಾಯಾಮ ಸಹಕಾರಿ” ಎನ್ನುತ್ತ, ಈ ಬಾರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.. ಅಂತೆಯೇ ಕಾರ್ಯಕ್ರಮಕ್ಕೆ ಆಗಮಸಿದ್ದ ಕುಮಟಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಾಜೇಂದ್ರ ಎಲ್ ಭಟ್ ರವರು ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು..

ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಸಿಂಧು ಸದಾನಂದ ಹೆಗಡೆ ಮತ್ತು ಬಳಗದವರು ಪ್ರಾರ್ಥಿಸಿದರು.. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಿ. ಎನ್. ಭಟ್ ಸರ್ವರನ್ನು ಸಭೆಗೆ ಪರಿಚಯಿಸಿ, ಸ್ವಾಗತಿಸಿದರು.. ಅಂತೆಯೇ ಕಾಲೇಜಿನ ವಾರ್ಷಿಕ ವರದಿಯನ್ನೂ ವಾಚಿಸಿದರು.. ನಂತರದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ ಮುಂದಾಳತ್ವದಲ್ಲಿ ಜರುಗಿದ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.. ಬಹುಮಾನ ವಿತರಣಾ ಕಾರ್ಯಕ್ರಮವನ್ನು ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ, ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಕುಮಾರಿ ಹರ್ಷಿತಾ ಎಸ್. ವಿ., ಭೌತಶಾಸ್ತ್ರ ಉಪನ್ಯಾಸಕರೂ, ಕಾಲೇಜಿನ ಕ್ರೀಡಾ ವಿಭಾಗದ ಸಂಚಾಲಕರೂ ಆದ ಶ್ರೀ ಜೋಸ್ಟೋಮ್ ಏ. ಟಿ.,  ಗಣಿತಶಾಸ್ತ್ರ ಉಪನ್ಯಾಸಕ ಶ್ರೀ ಹರ್ಷ ಗಣೇಶ ಉಪಾಧ್ಯಾಯ ಇವರುಗಳು ನಡೆಸಿಕೊಟ್ಟರು.. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಕುಮಾರಿ ನಯನ ವಂದಿಸಿದರು.. ರಸಾಯನಶಾಸ್ತ್ರ ಉಪನ್ಯಾಸಕ ಶ್ರೀ ಈಶ್ವರ ಶರ್ಮ ಪಿ. ಕಾರ್ಯಕ್ರಮವನ್ನು ನಿರೂಪಿಸಿದರು..

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಪದಾಧಿಕಾರಿಗಳು, ಕಾಲೇಜಿನ ಹಿತೈಷಿಗಳೂ, ಸಂಸ್ಕೃತ ಪ್ರಾಧ್ಯಾಪಕರೂ ಆದ ಡಾ|| ಏ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿಶ್ರಾಂತ ಅಧ್ಯಾಪಕರಾದ ಡಾ|| ಶಂಕರ್ ಭಟ್, ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಕುಮಾರ್ ರೋಹನ್ ಗಣಪತಿ ಗುನಗಾ, ಕುಮಾರಿ ಶ್ರೀನಿಧಿ ರಮೇಶ್ ಹೆಗಡೆ, ಎಲ್ಲ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.. ವಿದ್ಯಾರ್ಥಿಗಳಿಂದ ಜರುಗಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು..

ವಿಸ್ಮಯ ನ್ಯೂಸ್, ಕುಮಟಾ

Exit mobile version