Follow Us On

WhatsApp Group
Important
Trending

ರಾಜ್ಯಕ್ಕೆ ಮಾದರಿಯಾಗಿದ್ದ ಕ್ರಿಮ್ಸ್ ನಲ್ಲಿ ಭ್ರಷ್ಟಾಚಾರ ಆರೋಪ: ಬೀದಿಗಿಳಿದ ವೈದ್ಯ ವಿದ್ಯಾರ್ಥಿಗಳು!

ಕಾರವಾರ: ಕ್ರಿಮ್ಸ್ ಮೆಡಿಕಲ್ ಕಾಲೇಜು ಪ್ರಾರಂಭವಾಗಿ ಆರು ವರ್ಷಗಳು ಕಳೆದಿದೆ. ಕೋವಿಡ್ ನಿರ್ವಹಣೆ, ಆಭಾ ಡಿಜಿಟಲಿಕರಣ, ಸೇರಿದಂತೆ ಇನ್ನಿತರ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿರುವ ಬಗ್ಗೆ ಕಾಲೇಜಿಗೆ ಪ್ರಶಂಸೆ ಕೂಡ ದೊರೆತಿದೆ. ಆದರೆ ಕಾಲೇಜಿನಲ್ಲಿ ಆರಂಭದಿoದಲೂ ಕೇಳಿಬರುತ್ತಿದ್ದ ಕೆಲ ಅವ್ಯವಸ್ಥೆಗಳು ಇಂದಿಗೂ ಮುಂದುವರಿದಿದ್ದು ಇದೀಗ ಕ್ರಿಮ್ಸ್ ಆಡಳಿತದ ಅವ್ಯವಸ್ಥೆ ವಿರುದ್ಧ ಹಾಗೂ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ವಿದ್ಯಾರ್ಥಿಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದು ಈ ಕುರಿತ ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.

ಉತ್ತರಕನ್ನಡ ಜಿಲ್ಲೆಯಲ್ಲಿರುವ ಏಕೈಕ ಸರ್ಕಾರಿ ಮೆಡಿಕಲ್ ಕಾಲೇಜು ಎಂಬ ಹೆಗ್ಗಳಿಕೆಯೊಂದಿಗೆ ಕಳೆದ ಆರು ವರ್ಷಗಳಿಂದ ವೈದ್ಯಕೀಯ ಶಿಕ್ಷಣ ನೀಡಲಾಗುತ್ತಿದೆ. ಈಗಾಗಲೇ ಒಂದು ಬ್ಯಾಚ್ ಹೊರ ಬಿದ್ದಿದ್ದು ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಕ್ರಿಮ್ಸ್ ನಲ್ಲಿ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರ ತಾಂಡವ ಆಡುತ್ತಿರುವ ಬಗ್ಗೆ ವಿದ್ಯಾರ್ಥಿಗಳು ದಾಖಲೆ ಸಮೇತ ಗಂಭೀರ ಆರೋಪ ಮಾಡಿದ್ದಾರೆ. ಕ್ರಿಮ್ಸ್ ನಿಂದ ಹೊರ ಬಂದು ಮುಖ್ಯದ್ವಾರದ ಬಳಿ ಜಮಾವಣೆಗೊಂಡ 50 ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ವಿದ್ಯಾರ್ಥಿಗಳನ್ನು ತೆರ್ಗಡೆ ಮಾಡಲು ಪೀಡಿಯಾಟ್ರಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕರು ಪರೀಕ್ಷೆ ಪಾಸ್ ಮಾಡುವುದಕ್ಕೆ ಹಣ ಕೇಳಿದ್ದರು.

ಅದರಂತೆ ವಿದ್ಯಾರ್ಥಿ ಓರ್ವವು 34 ಸಾವಿರ ಜಮಾ ಮಾಡಿರುವ ಬಗ್ಗೆ ದಾಖಲೆ ಇದೆ. ಅಲ್ಲದೆ ಈ ಬಗ್ಗೆ ಪ್ರಶ್ನೆ ಮಾಡಿದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಪ್ತಾಯೋಗಿಕ ಪರೀಕ್ಷೆಗಳಲ್ಲಿ ಫೆಲ್ ಮಾಡಲಾಗುತ್ತಿದೆ. ಕ್ರಿಮ್ಸ್ ಹಾಸ್ಟೆಲ್‌ಗಳಲ್ಲಿ ಊಟದ ಟೆಂಡರ್ ಬದಲಿಸದೇ ಕಳಪೆ ಮಟ್ಟದ ಊಟ ನೀಡಲಾಗುತ್ತಿದೆ. ರಾತ್ರಿ ತುರ್ತು ಚಿಕಿತ್ಸೆಗೆ ತೆರಳಲು ಅವಕಾಶ ನೀಡುತ್ತಿಲ್ಲ. ಪುಸ್ತಕ ಖರೀದಿಗೆ ಆನ್ಲೈನ್ ಟೆಂಡರ್ ಕರೆಯುವ ನಿಯಮವಿದ್ದರೂ, ಕಾನೂನು ಬಾಹೀರವಾಗಿ 40 ಲಕ್ಷ ರೂ. ವೆಚ್ಛದ ಪುಸ್ತಕ ಖರಿದಿ ಮಾಡಲಾಗಿದೆ. ಈ ಎಲ್ಲಾ ಅವ್ಯವಹಾರಗಳ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದರೂ ಈವರೆಗೆ ಯಾವ ಅರ್ಜಿಗೂ ಸ್ಪಂದಿಸಿಲ್ಲ ಎಂದು ವೈದ್ಯ ವಿದ್ಯಾರ್ಥಿ ಡಾ.ಸಂದೀಪ್ ಆರೊಪಿಸಿದ್ದಾರೆ.

ಇನ್ನು ಕ್ರಿಮ್ಸ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಮಾನವ ಹಕ್ಕು ಆಯೋಗ, ಜಿಲ್ಲಾಧಿಕಾರಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ ಅವರು ಕ್ರಿಮ್ಸ್ ಗೆ ಭೇಟಿ ನೀಡಿದ ವೇಳೆ ಕೂಡ ವಿದ್ಯಾರ್ಥಿಗಳೆಲ್ಲರು ಸ್ವ ಇಚ್ಚೆಯಿಂದ ಸಹಿ ಮಾಡಿ ದೂರಿನ ಪತ್ರವನ್ನು ನೀಡಲಾಗಿದೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ವೈದ್ಯ ವಿದ್ಯಾರ್ಥಿಗಳು ಹಾಸ್ಟೆಲ್ ಹಾಗೂ ಕಾಲೇಜಿನಲ್ಲಿ ಇರುವ ಅವ್ಯವಸ್ಥೆಯನ್ನು ಸರಿಪಡಿಸಿ, ಭ್ರಷ್ಟಾಚಾರ ಎಸಗಿದವರ ವಿರುದ್ಧ ಸೂಕ್ತ ತನಿಕೆಯಾಗುವಂತೆ ಅವರು ಆಗ್ರಹಿಸಿದರು. ಮೆಡಿಕಲ್ ಕಾಲೇಜು ಎಂದು ಹೇಳುವುದಕ್ಕೆ ಮಾತ್ರ ಇದೆ. ಆದರೆ ಇಲ್ಲಿ ತುರ್ತು ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈಗ ವಿದ್ಯಾರ್ಥಿಗಳಿಂದಲೂ ಹಣ ವಸೂಲಿ ಮಾಡಲಾಗುತ್ತಿದೆ, ಇದು ಹೀಗೆ ಮುಂದುವರಿದರೆ ವಿದ್ಯಾರ್ಥಿಗಳೊಂದಿಗೆ ಕೈ ಜೋಡಿಸಿ ಆರೋಗ್ಯ ಸಚಿವರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ ಎಂದು ಸ್ಥಳೀಯರಾದ ರಾಘು ನಾಯ್ಕ ಎಚ್ಚರಿಸಿದ್ದಾರೆ.

ಒಟ್ಟಾರೆ ಉತ್ತಮ ವೈದ್ಯರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕಿರುವ ಕ್ರಿಮ್ಸ್ ನಲ್ಲಿಯೂ ಭ್ರಷ್ಟಾಚಾರ, ಅವ್ಯವಸ್ಥೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿದು ವಿದ್ಯಾರ್ಥಿಗಳ ಸಮಸ್ಯೆಗೆ ನ್ಯಾಯ ಒದಗಿಸಿ ಕ್ರಿಮ್ಸ್ ಘನತೆ ಎತ್ತಿಹಿಡಿಯಬೇಕಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button