ಜೋಯ್ಡಾದಲ್ಲಿ ಬರುತ್ತಿರುವಾಗ ಸಂಪರ್ಕ ಕೊರತೆ: 20 ನಿಮಿಷ ಆಗಸದಲ್ಲೇ ಹಾರಾಡಿದ‌ ಮಾಜಿ ಸಿಎಂ‌ ಕುಮಾರಸ್ವಾಮಿ: ಹೆಲಿಕಾಪ್ಟರ್ ನಲ್ಲಿ ಏನಾಯ್ತು ನೋಡಿ?

ಕಾರವಾರ: ಜೋಯಿಡಾದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಗೆ ಆಗಮಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೆಲಿಕಾಪ್ಟರ್ ಸಂಪರ್ಕ ಕೊರತೆಯಿಂದಾಗಿ ಇಳಿಯಲು ಸಾಧ್ಯವಾಗದೆ ರಾಮನಗರಕ್ಕೆ ತೆರಳಿದ ಘಟನೆ ನಡೆದಿದೆ.

ಹಳಿಯಾಳ ಜೊಯಿಡಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್ ಘೋಟ್ನೇಕರ್ ಪರ ಪ್ರಚಾರಕ್ಕೆ ಸವದತ್ತಿಯಿಂದ ಜೊಯಿಡಾಕ್ಕೆ ಆಗಮಿಸಿದ್ದ ವೇಳೆ ಸಂಪರ್ಕ ಕೊರತೆಯಿಂದ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ 20 ನಿಮಿಷ ಆಗಸದಲ್ಲಿಯೆ ಹಾರಾಟ ನಡೆಸಿತ್ತು.

ಹೆಲಿಪಾಡ್ ನತ್ತ ಬಂದಾಗ ಸಿಗ್ನಲ್ ನೀಡದೇ ಗಂಧಕದ ಹೊಗೆ ಕೂಡ ಹಾಕದೇ ಇರುವುದರಿಂದ ಯಾವುದೇ ರಿತಿಯ ಸೂಚನೆ ಸಿಗದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಆಗಸದಲ್ಲಿಯೇ ಸುತ್ತಾಟ ನಡೆಸಿತ್ತು.
ಕೊನೆಗೆ ವೈರಲೆಸ್ ಮೂಲಕ ಸಂದೇಶ ನೀಡಿ ಸಿಗ್ನಲ್ ಕಳುಹಿಸಿದ ಬಳಿಕ ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ‌‌‌ ಆಗಮಿಸಿದ್ದಾರೆ.

ಜೋಯಿಡಾದ ಬಿ.ಜಿ‌ಎಸ್ ಕಾಲೇಜು ಮೈದಾನದಲ್ಲಿ ಎಸ್.ಎಲ್.ಘೋಟ್ನೇಕರ್ ಪರ ಮತಯಾಚನೆ ನಡೆಸಲಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ನೀಡಿ ಜೋಯಿಡಾ ಜೆಡಿಎಸ್ ಕಾರ್ಯಕರ್ತರು ಬರಮಾಡಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಹೆಲಿಕಾಪ್ಟರ್ ಲ್ಯಾಂಡಿಂಗ್ ಸಮಸ್ಯೆಯಿಂದ ಜೋಯಿಡಾಕ್ಕೆ ಬರಲು ತಡವಾಗಿದೆ. ಇಲ್ಲಿ ಸಿಗ್ನಲ್ ಸಿಕ್ಕಿರದ ಕಾರಣ 20 ನಿಮಿಷ ಆಕಾಶದಲ್ಲಿಯೇ ಸುತ್ತಾಡುತ್ತಾ ರಾಮನಗರದ ಕಡೆ ತೆರಳಬೇಕಾಯಿತು. ಬೇರೆ ಏನೂ ಸಮಸ್ಯೆ ಆಗಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಹಾಸನದಲ್ಲಿ ರೇವಣ್ಣ ಟಿಕೆಟ್ ಅಸಮಧಾನ ಹಿನ್ನಲೆಯಲ್ಲಿ ನಮ್ಮ ಕುಟುಂಬದ ಅಸಮಾದಾನ ಸರಿಹೋಗಿದೆ. ಯಾವುದೇ ಸಮಸ್ಯೆ ಇಲ್ಲ. ಎಲ್ಲವು ಸರಿಹೋಗುತ್ತಿದೆ ಎಂದ ಅವರು ಹಾಸನದಲ್ಲಿ ಶಕುನಿಗಳು ಕುಟುಂಬದವರ ತಲೆಕೆಡಿಸುವ ವಿಚಾರ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿ ಯಾರು ಶಕುನಿಗಳು ಎಂದು ಕಾಲ ಬಂದಾಗ ಹೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Exit mobile version